ವಿಶ್ವಾಸಮತ ಗೆದ್ದ ನಂತರ ಸಚಿವ ಸಂಪುಟ ರಚನೆ: ಪರಮೇಶ್ವರ್
ಬೆಂಗಳೂರು, ಮೇ 24: ಸಚಿವ ಸಂಪುಟದ ಬಗ್ಗೆ ಚರ್ಚೆ ಈ ವರೆಗೆ ನಡೆದಿಲ್ಲ ವಿಶ್ವಾಸಮತ ಯಾಚನೆ ಬಳಿಕ ಸಚಿವ ಸಂಪುಟ ರಚನೆಯ ವಿಷಯ ಕೈಗೆತ್ತಿಕೊಳ್ಳಲಾಗುವುದು ಎಂದು ಉಪ ಮುಖ್ಯಮಂತ್ರಿ ಜಿ.ಪರಮೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಶ್ವಾಸಮತವನ್ನು ಗೆಲ್ಲುವ ವಿಶ್ವಾಸವಿದ್ದು, ಬಿಜೆಪಿ ಯಾವುದೇ ಆಮೀಷಗಳಿಗೆ ನಮ್ಮ ಶಾಸಕರು ಬಲಿ ಆಗುವುದಿಲ್ಲ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಚಿವ ಸ್ಥಾನಕ್ಕಾಗಿ ನಾನು ಲಾಬಿ ನಡೆಸಿಲ್ಲ : ಜಮೀರ್ ಅಹ್ಮದ್
ಬಿಜೆಪಿಯ ವಿಭಜಕ ಮನಸ್ಥಿತಿ, ಹಿಡನ್ ಅಜೆಂಡಾಗಳನ್ನು ಗುರುತಿಸಿದ ನಾವು ಸಂವಿಧಾನವೇ ನೀಡಿರುವ ಅವಕಾಶವನ್ನು ಸದುಪಯೋಗ ಪಡಿಸಿಕೊಂಡು ಜೆಡಿಎಸ್ ಜೊತೆ ಕೈಜೋಡಿಸಿ ಸುಭದ್ರ ಸರ್ಕಾರ ನೀಡುವ ಪ್ರಯತ್ನ ಮಾಡಿದೆವು, ದೇಶದಲ್ಲಿ ನಡೆಯುತ್ತಿರುವ ಸರ್ವಾಧಿಕಾರಿ ಧೋರಣೆಗೆ ಕಡಿವಾಣ ಹಾಕಬೇಕಿದೆ. ಕಡಿವಾಣ ಹಾಕುವುದು ಇಲ್ಲಿಂದಲೇ ಪ್ರಾರಂಭವಾಗಲಿ ಎಂಬ ಉದ್ದೇಶದಿಂದ ಮೈತ್ರಿ ಮಾಡಿಕೊಂಡೆವು ಎಂದರು.
ಕಾಂಗ್ರೆಸ್ಗೆ ಬಿಜೆಪಿಗಿಂತಲೂ ಅಧಿಕ ಮತ ಬಂದಿದೆ ಎಂದ ಪರಮೇಶ್ವರ್, ಸೀಟಿನ ಲೆಕ್ಕದಲ್ಲಿ ನಮ್ಮ ಸಾಧನೆ ಕಡಿಮೆ ಇರಬಹುದು ಆದರೆ ಮತಗಳ ಗಳಿಕೆಯಲ್ಲಿ ಕಳೆದ ಬಾರಿಗಿಂತಲೂ ಹೆಚ್ಚಿನ ಮತಗಳಿಸುವ ಜೊತೆಗೆ ಅತಿ ಹೆಚ್ಚು ಮತ ಗಳಿಸಿದ ಪಕ್ಷ ಕೂಡಾ ನಾವೇ ಆಗಿದ್ದೇವೆ ಎಂದರು.
ಜೆಡಿಎಸ್-ಕಾಂಗ್ರೆಸ್ ಎರಡು ಪ್ರಣಾಳಿಕೆಗಳಲ್ಲಿ ಯಾವುದು ಅನುಷ್ಠಾನಕ್ಕೆ ಬರುತ್ತದೆ ಎಂಬ ಗೊಂದಲ ಜನರಲ್ಲಿದೆ ಈ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ, ಎರಡೂ ಪ್ರಣಾಳಿಕೆಗಳಲ್ಲಿನ ಸಾಮಾನ್ಯ ಅಂಶಗಳನ್ನು ಪಟ್ಟಿಮಾಡಿಕೊಂಡಿದ್ದು ಅವನ್ನು ಅನುಷ್ಠಾನಕ್ಕೆ ತರುತ್ತೇವೆ ಜೊತೆಗೆ ಜನತೆ ಏನು ಬಯಸಿದ್ದಾರೆ ಅದನ್ನು ಆದ್ಯತೆ ಮೇರೆಗೆ ಕೊಡುತ್ತೇವೆ ಎಂದರು.
ಸುದೀರ್ಘ ಅವಧಿಯ ಕೆಪಿಸಿಸಿ ಅಧ್ಯಕ್ಷರಾಗಿದ್ದ ಪರಮೇಶ್ವರ ರಾಜೀನಾಮೆ
ಸರ್ಕಾರ ನೀತಿ ನಿರೂಪಣೆ ಮಾರ್ಗದರ್ಶನಕ್ಕೆಂದು ಹಿರಿಯ ಮುಖಂಡನ್ನು ಒಳಗೊಂಡ ಸಮನ್ವಯ ಸಮಿತಿ ಮಾಡಿಕೊಂಡಿದ್ದು, ಅದರ ಮಾರ್ಗದರ್ಶನದಲ್ಲಿ ಸರ್ಕಾರ ನೀತಿಗಳನ್ನು ರಚಿಸುತ್ತದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಳ್ಳೆಯ ಆಡಳಿತ ಕೊಡಬೇಕು, ಕಳೆದ ಸರ್ಕಾರದಲ್ಲಿನ ನ್ಯೂನತೆಗಳನ್ನು ಸರಿಪಡಿಸಿಕೊಳ್ಳಬೇಕು ಎಂಬುದು ಈ ಸರ್ಕಾರದ ಮೂಲ ಉದ್ದೇಶ ಎಂದ ಅವರು ಬಡವ, ಮಧ್ಯಮವರ್ಗ ಸೇರಿದಂತೆ ಎಲ್ಲ ವರ್ಗದವರಿಗೆ ಒಂದಲ್ಲ ಒಂದು ರೀತಿಯಲ್ಲಿ ಶ್ರೇಯಸ್ಸು ಏಳಿಗೆ ಆಗಬೇಕು ಅಂತಹಾ ಕಾರ್ಯಕ್ರಮ ರೂಪಿಸಬೇಕು ಎಂದು ಫಣ ತೊಟ್ಟಿದ್ದೇವೆ ಎಂದರು.
ಸ್ಪೀಕರ್ ಚುನಾವಣೆ ಬಗ್ಗೆ ಮಾತನಾಡಿದ ಅವರು, ಸ್ಪೀಕರ್ ಹುದ್ದೆ ಪಕ್ಷದಿಂದ ಹೊರತಾದದ್ದು, ಕಾಂಗ್ರೆಸ್ನಿಂದ ಮಾಜಿ ಆರೋಗ್ಯ ಸಚಿವ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರನ್ನು ಸೂಚಿಸಿದ್ದು, ಅವರ ಅನುಭವ, ಹಿರಿತನವನ್ನು ಗೌರವಿಸಿ ವಿರೋಧ ಪಕ್ಷಗಳು ರಮೇಶ್ ಕುಮಾರ್ ಅವರನ್ನು ಚುನಾವಣೆ ಇಲ್ಲದೆ ಆಯ್ಕೆ ಮಾಡಬೇಕು ಎಂದು ವಿರೋಧ ಪಕ್ಷಕ್ಕೆ ಮನವಿ ಸಲ್ಲಿಸಿದರು.