ತರ್ಕಕ್ಕೆ ನಿಲುಕದ ಕನ್ನಡಪರ ಸಂಘಟನೆಗಳ 'ಬೆಂಗಳೂರು ಬಂದ್'!
ಸತ್ಯರಾಜ್ ಹೇಳಿಕೆ ವಿರೋಧಿಸಿ ಬಾಹುಬಲಿ 2 ಚಿತ್ರ ಬಿಡುಗಡೆಯ ದಿನವಾದ ಏಪ್ರಿಲ್ 28ರಂದು ಬೆಂಗಳೂರು ಬಂದ್ ಕರೆನೀಡಿರುವ ಕನ್ನಡಪರ ಸಂಘಟನೆಗಳ ನಿಲುವು ಸರಿಯೇ?
ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ನಡುವಿನ ಸೂಕ್ಷ್ಮ ವಿಚಾರದಲ್ಲಿ ತಮಿಳು ನಟ ಸತ್ಯರಾಜ್ ಪ್ರಚೋದನಕಾರಿ ಮತ್ತು ಅವಹೇಳನಕಾರಿ ಹೇಳಿಕೆ ನೀಡಿದ್ದು ಅಕ್ಷಮ್ಯ, ಅಘೋರ ಅಪರಾಧ. ಆದರೆ, ಅದಕ್ಕಾಗಿ ಬಂದ್ ಗೆ ಕರೆ ನೀಡುವುದು ಎಷ್ಟು ಸಮಂಜಸ?
ಸತ್ಯರಾಜ್ ಕ್ಷಮೆ ಕೇಳದ ಹೊರತು ಚಿತ್ರ ಪ್ರದರ್ಶನಕ್ಕೆ ಅನುವು ಮಾಡಿಕೊಡುವುದಿಲ್ಲ ಜೊತೆಗೆ ಬಾಹುಬಲಿ 2 ಚಿತ್ರ ಬಿಡುಗಡೆಯ ದಿನವಾದ ಏಪ್ರಿಲ್ 28ರಂದು ಬೆಂಗಳೂರು ಬಂದ್ ಕರೆನೀಡಿರುವ ಕನ್ನಡಪರ ಸಂಘಟನೆಗಳ ನಿಲುವೇ ಪ್ರಶ್ನಾರ್ಹ ಎನ್ನುವಂತಾಗಿದೆ.[ಕನ್ನಡಿಗರ ಕ್ಷಮೆಕೋರಿ ಸತ್ಯರಾಜ್ ಆಡಿರುವ ಮಾತುಗಳಿವು!]
ನಮ್ಮ ಹೋರಾಟ ನಟ ಸತ್ಯರಾಜ್ ವಿರುದ್ದವೇ ಹೊರತು ಚಿತ್ರದ ವಿರುದ್ದ ಅಲ್ಲ ಎನ್ನುವ ಕನ್ನಡ ಹೋರಾಟಗಾರರ ನಿಲುವಾದರೂ, ಇದುವರೆಗೆ ಸತ್ಯರಾಜ್ ಕ್ಷಮೆಯಾಚಿಸುವ ಯಾವುದೇ ಸಾಧ್ಯತೆ ಕಂಡುಬರುತ್ತಿಲ್ಲ. ಜೊತೆಗೆ, ಕನ್ನಡಪರ ಸಂಘಟನೆಯ ಹೋರಾಟದ ನಿಜವಾದ ಉದ್ದೇಶವೇನು ಎನ್ನುವುದು ರಾಷ್ಟ್ರಮಟ್ಟದಲ್ಲಿ ಚರ್ಚೆಯ ವಿಷಯವಾಗಿ ಕೂತಿದೆ.
ಅದಕ್ಕೆ ಕಾರಣವೂ ಇಲ್ಲದಿಲ್ಲ. 2008ರಲ್ಲಿ ಅಂದರೆ ಎಂಟೊಂಬತ್ತು ವರ್ಷದ ಹಿಂದೆ ಹೊಗೇನಕಲ್ ಹೋರಾಟದ ವಿಚಾರದಲ್ಲಿ ಸತ್ಯರಾಜ್ ನೀಡಿದ ಹೇಳಿಕೆಯನ್ನು ಹಿಡಿದುಕೊಂಡು ಈಗ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ.(ವಾಟಾಳ್ ನಾಗರಾಜ್ ಸಂದರ್ಶನ)
ಹೊಗೇನಕಲ್ ಘಟನೆಯ ನಂತರ ಸತ್ಯರಾಜ್ ಅವರ ಲೆಕ್ಕವಿಲ್ಲದಷ್ಟು ಚಿತ್ರಗಳು ಕರ್ನಾಟಕದಲ್ಲಿ ಬಿಡುಗಡೆಯಾಗಿದ್ದರೂ, ಆವಾಗಿಲ್ಲದ ಪ್ರತಿಭಟನೆ ಈಗ್ಯಾಕೆ ಎಂದರೆ ಅದಕ್ಕೆ ವಾಟಾಳ್ ನಾಗರಾಜ್ ಅವರು ನೀಡುವ ಉತ್ತರ ಅಷ್ಟು ಸಮಂಜಸ ಎನಿಸುವುದಿಲ್ಲ. (ಕನ್ನಡಿಗರನ್ನು ಕೆಣಕಿದ ಟ್ವಿಟ್ಟಿಗರು)
ಗಮನಿಸಬೇಕಾದ ಅಂಶವೇನಂದರೆ ಬಾಹುಬಲಿ 1 ಚಿತ್ರ ಬಿಡುಗಡೆಯಾಗಿದ್ದು ಜುಲೈ 2015ರಲ್ಲಿ. ಆ ಚಿತ್ರದಲ್ಲೂ ಸತ್ಯರಾಜ್ ಪ್ರಮುಖ ಪಾತ್ರಧಾರಿ. ಆಗ ಚಿತ್ರಕ್ಕೆ ರೆಡ್ ಕಾರ್ಪೆಟ್ ಮೂಲಕ ಸ್ವಾಗತ ಸಿಕ್ಕಿತ್ತೇ ಹೊರತು, ಪ್ರತಿಭಟನೆಯ ಗಂಧಗಾಳಿಯೂ ಹತ್ತಿರಸಾಗಿರಲಿಲ್ಲ.
ಸುದೀಪ್ ಆ ಚಿತ್ರದಲ್ಲಿ ಬಂದುಹೋಗುವ ಪಾತ್ರದಲ್ಲಿದ್ದರು ಎನ್ನುವ ಕಾರಣಕ್ಕಾಗಿ ಪ್ರತಿಭಟನೆ ನಡೆದಿರಲಿಲ್ಲವೇ ಅಥವಾ, ಆಯಕಟ್ಟಿನ ಸ್ಥಾನದಲ್ಲಿರುವವರು ಚಿತ್ರದ ಕರ್ನಾಟಕ ರೈಟ್ಸ್ ತೆಗೆದುಕೊಂಡಿದ್ದರು ಎನ್ನುವ ಕಾರಣಕ್ಕಾಗಿಯೇ ಗೊತ್ತಿಲ್ಲ.. ಕನ್ನಡಪರ ಸಂಘಟನೆಯ ಹೋರಾಟಗಾರರಲ್ಲಿ ಕೆಲವೊಂದು ಪ್ರಶ್ನೆಗಳು, ಮುಂದೆ ಓದಿ..
ಬರುವ ವಾರ (ಏ 28) ಬಾಹುಬಲಿ 2 ಬಿಡುಗಡೆ
ಸತ್ಯರಾಜ್ ಕ್ಷಮೆ ಕೇಳಲಿ ಬಿಡಲಿ 2017ರ ಬಹುನಿರೀಕ್ಷಿತ ಬಾಹುಬಲಿ 2 ಚಿತ್ರ ಬರುವ ವಾರ (ಏ 28) ಬಿಡುಗಡೆಯಾಗಲಿದೆ. ತೆಲುಗು ಮತ್ತು ತಮಿಳು ಚಿತ್ರಗಳಿಗೆ ಎರಡನೇ ಲಕ್ಷ್ಮೀ ಕಟಾಕ್ಷದಂತಿರುವ ಕರ್ನಾಟಕದಲ್ಲಿ ಒಂದೆರಡು ದಿನ ಪ್ರತಿಭಟನೆ/ಬಂದ್ ನಂತರ ಚಿತ್ರ ಪ್ರದರ್ಶನ ಸರಾಗವಾಗಲಿದೆಯೇ? ಕನ್ನಡ ಹೋರಾಟಗಾರರೇ ಉತ್ತರಿಸಬೇಕು.
ಚಿತ್ರ ಬಿಡುಗಡೆಯಾಗದಂತೆ ಇರುವ ಇತರ ದಾರಿ ಪ್ರಯತ್ನಿಸಿ
ಅದೆಷ್ಟೋ ಜ್ವಲಂತ ಸಮಸ್ಯೆಗಳನ್ನು ನಗರ ಎದುರಿಸುತ್ತಿರುವಾಗ ಅದನ್ನೆಲ್ಲಾ ಬಿಟ್ಟು, ಸತ್ಯರಾಜ್ ಕ್ಷಮೆಯಾಚಿಸದಿದ್ದರೆ ಒಂದು ಚಿತ್ರ ಪ್ರದರ್ಶನವಾಗಬಾರದೆಂದು ಬಂದ್ ಗೆ ಕರೆನೀಡುವ ಬದಲು ಚಿತ್ರ ಬಿಡುಗಡೆಯಾಗದಂತೆ ಇರುವ ಇತರ ದಾರಿಗಳನ್ನು ಹುಡುಕುವ ಪ್ರಯತ್ನವನ್ನು ಕನ್ನಡಪರ ಸಂಘಟನೆಗಳು ಯಾಕೆ ಮಾಡುತ್ತಿಲ್ಲ?
ಒಂದು ಚಿತ್ರಕ್ಕಾಗಿ ನಗರ ಬಂದ್ ಸರಿಯೇ?
ಒಂದು ಕಾಲು ಕೋಟಿಗಿಂತಲೂ ಜಾಸ್ತಿ ಜನಸಂಖ್ಯೆವಿರುವ ದೇಶದ ಸಿಲಿಕಾನ್ ಹಬ್ ಬೆಂಗಳೂರು ಮಹಾನಗರವನ್ನು ಬಾಹುಬಲಿ 2 ಚಿತ್ರಕ್ಕಾಗಿ ಬಂದ ಮಾಡುವ ಔಚಿತ್ಯವಿದೆಯೇ? ಒಂದು ದಿನದ ಬಂದ್ ನಿಂದಾಗುವ ನಷ್ಟ, ದಿನಗೂಲಿ ಕಾರ್ಮಿಕರ ಬವಣೆಯನ್ನು ನೋಡಬೇಕಲ್ಲವೇ?
ಕರ್ನಾಟಕದ ಎಲ್ಲಾ ಡಿಸ್ಟ್ರಿಬ್ಯೂಟರ್ ಗಳ ಮನವೊಲಿಸಿ
ಬಂದ್ ಕರೆನೀಡುವ ಬದಲು ಕರ್ನಾಟಕದ ಎಲ್ಲಾ ಡಿಸ್ಟ್ರಿಬ್ಯೂಟರ್ ಗಳ ಮನವೊಲಿಸಿ ಚಿತ್ರದ ರೈಟ್ಸನ್ನು ಖರೀದಿಸದಂತೆ ಜೊತೆಗೆ ರಾಜ್ಯದ ಎಲ್ಲಾ ಚಿತ್ರಮಂದಿರದ ಮಾಲೀಕರ ಜೊತೆ ಚಿತ್ರ ಪ್ರದರ್ಶಿಸದಂತೆ ಮನವೊಲಿಸುವ ಕೆಲಸ ಮಾಡಬಹುದಲ್ಲವೇ?
ಪ್ರಮುಖರಿಂದಲೇ ಪರಭಾಷಾ ಚಿತ್ರದ ರೈಟ್ಸಿಗಾಗಿ ಹೆಚ್ಚಿನ ಒಲವು
ಚಿತ್ರೋದ್ಯಮದ ಮತ್ತು ಮಂಡಳಿಯ ಪ್ರಮುಖರೇ ಪರಭಾಷಾ ಚಿತ್ರದ ರೈಟ್ಸಿಗಾಗಿ ಹೆಚ್ಚಿನ ಒಲವು ತೋರುತ್ತಿರುವುದು ನಗ್ನಸತ್ಯ. ಇದಕ್ಕೆ ಕಡಿವಾಣಬಿದ್ದರೆ ಪರಭಾಷಾ ಚಿತ್ರಗಳ ಹಾವಳಿ ತನ್ನಿಂದತಾನೇ ಕಮ್ಮಿಯಾಗುವುದಿಲ್ಲವೇ? ಕನ್ನಡ ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಎದುರಾಗುತ್ತಿರುವುದಕ್ಕೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸೂಕ್ತ ಸಮಯವಲ್ಲವೇ?
ಇತರ ನೂರಾರು ಸಮಸ್ಯೆಗಳ ಕಡೆ ಗಮನಕೊಡಿ
ಒಂದು ಚಿತ್ರಕ್ಕಾಗಿ ಬಂದ್ ಕರೆನೀಡುವ ಬದಲು, ಕನ್ನಡ ಚಿತ್ರಗಳಿಗೆ ಎಸಿ ಹಾಕುವುದಿಲ್ಲ, ಕೇಂದ್ರದಿಂದ ಹಿಂದಿ ಹೇರಿಕೆ ವಿಪರೀತವಾಗುತ್ತಿರುವುದು, ರೈಲ್ವೇಯಲ್ಲಿ ಕನ್ನಡಿಗರಿಗೆ ಸಿಗದ ಆದ್ಯತೆ, ಸಿಬಿಎಸ್ಇ ಶಾಲೆಯಲ್ಲಿ ಹಿಂದಿ ಹೇರಿಕೆ, ರೈತರ ನೋವು ಮುಂತಾದ ಹತ್ತುಹಲವು ಜ್ವಲಂತ ಸಮಸ್ಯೆಗಳ ವಿಚಾರಕ್ಕಾಗಿ 'ಬಂದ್' ಕರೆನೀಡಿದರೆ ಸೂಕ್ತ ಎಂದರೆ ನನಗೆ ಕನ್ನಡ ವಿರೋಧಿ ಎನ್ನುವ ಪಟ್ಟವನ್ನು ಮಾತ್ರ ಕಟ್ಟಬೇಡಿ.