ನಾಲ್ಕು ಹೆಜ್ಜೆ ನಡೆದಿದ್ದಕ್ಕಾಗಿ ಆಕಾಶ ಭೂಮಿ ಒಂದು ಮಾಡಿದ ಮಮತಾ
ಬೆಂಗಳೂರು, ಮೇ 24 : ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿದ ತಾವು ನಾಲ್ಕು ಹೆಜ್ಜೆ ನಡೆಯುವಂತಾಯಿತು ಎಂಬ ಕಾರಣಕ್ಕಾಗಿ, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಅವರು ಆಕಾಶ ಭೂಮಿ ಒಂದು ಮಾಡಿರುವ ಸುದ್ದಿಯ ಚರ್ಚೆ ನಡೆಯುತ್ತಿದ್ದಂತೆ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ಕುಮಾರಸ್ವಾಮಿ ವರ್ಗ ಮಾಡಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
ಮೊಟ್ಟಮೊದಲನೆಯದಾಗಿ, ಬಸವೇಶ್ವರ ವೃತ್ತದಿಂದ ಪಕ್ಕದಲ್ಲೇ ಇರುವ ವಿಧಾನಸೌಧದವರೆಗೆ ನಡೆದಿದ್ದಕ್ಕೆ ಇಷ್ಟು ರೋಶಾವೇಶ, ದೂರುದುಮ್ಮಾನಗಳೇಕೆ? ಅವರೊಬ್ಬರು ಮಾತ್ರವಲ್ಲ ಅವರೊಂದಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ನಡೆದಿದ್ದಾರೆ, ಬೆಂಗಳೂರಿನ ಸೌಂದರ್ಯವನ್ನು ಸವಿದಿದ್ದಾರೆ.
ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಆಕ್ರೋಶಕ್ಕೆ ಎಚ್ಡಿಕೆ ಕಸಿವಿಸಿ!
ಆ ಸಂದರ್ಭದಲ್ಲಿ ತಮಗೆ ಭದ್ರತೆ ಇರಲಿಲ್ಲ, ಭದ್ರತೆಯಲ್ಲಿ ಲೋಪವಾಯಿತೆಂಬ ಕಾರಣಕ್ಕಾಗಿ, ಕರ್ನಾಟದ ಮೊದಲ ಮಹಿಳಾ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ಎಲ್ಲರೆದಿರು ತರಾಟೆಗೆ ತೆಗೆದುಕೊಂಡು ಅವಮಾನ ಮಾಡಿದ್ದಾರೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ. ಅವಮಾನ ಆಗಿರುವುದು ಮಮತಾ ಅವರಿಗಲ್ಲ, ನೀಲಮಣಿ ರಾಜು ಅವರಿಗೆ ಕೂಡ.
ಮಮತಾ ಅವರ ಆಕ್ರೋಶಕ್ಕೂ ಕಾರಣಗಳಿವೆ. ಮೊದಲನೆಯದಾಗಿ ಹಲವಾರು ನಾಯಕರನ್ನು ವಿಧಾನಸೌಧದ ಬಳಿಯೇ ಬಿಡಲಾಯಿತು, ಆದರೆ, ತಮ್ಮನ್ನು ಬಿಡಲಾಗಲಿಲ್ಲ ಎಂಬುದು. ಮತ್ತೊಂದು, ಟ್ರಾಫಿಕ್ ಜಾಮ್ ಉಂಟಾಗಿದ್ದು, ಅದೇ ಸಮಯದಲ್ಲಿ ಕರ್ನಾಟಕದ ರಾಜ್ಯಪಾಲ ವಜುಭಾಯಿ ವಾಲಾ ಅವರು ಕೂಡ ಅದೇ ದಾರಿಯಲ್ಲಿ ಬರುತ್ತಿದ್ದರು ಮತ್ತು ಆ ಕಾರಣಕ್ಕಾಗಿ ಟ್ರಾಫಿಕ್ ಸಂಚಾರದಲ್ಲಿ ವ್ಯತ್ಯಯವಾಗಿತ್ತು.
"ನೀಲಮಣಿ ರಾಜು ನಮ್ಮ ಹೆಮ್ಮೆ! ದೀದಿಯದ್ದು ದುರಹಂಕಾರ!"
ರಸ್ತೆಯಲ್ಲಿ ದುರುದುರನೆ ಸಿಟ್ಟಿನಿಂದಲೇ ನಡೆದ ಮಮತಾ ಬ್ಯಾನರ್ಜಿ ಅವರು ವೇದಿಕೆಗೆ ಹೋಗುತ್ತಿದ್ದಂತೆ ನೀಲಮಣಿ ರಾಜು ಅವರನ್ನು ಕರೆಸಿ ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ನಂತರ ಮೆಟ್ಟಿಗಳನ್ನಿಳಿದು ಅಲ್ಲಿಯೇ ಕುಳಿತಿದ್ದ ಮಾಜಿ ಪ್ರಧಾನಿ ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಳಿಯೂ ಹೋಗಿ ಮಮತಾ ಬ್ಯಾನರ್ಜಿ ದೂರಿದ್ದಾರೆ.
ಎಚ್ಡಿಕೆ ಪ್ರಮಾಣವಚನಕ್ಕೆ ಬೆಂಗಳೂರಿಗೆ ಬಂದ ನಾಯ್ಡು, ದೀದಿ
ಇಂದು ಬೆಳಿಗ್ಗೆ ನೀಲಮಣಿ ರಾಜು ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡ ಕುಮಾರಸ್ವಾಮಿಯವರು ಪೊಲೀಸ್ ಮಹಾನಿರ್ದೇಶಕಿಯಿಂದ ವಿವರಣೆ ಕೇಳಿ ಪಡೆದುಕೊಂಡಿದ್ದಾರೆ. ಹೀಗೇಕಾಯಿತು ಎಂಬ ಬಗ್ಗೆ ನೀಲಮಣಿ ಅವರು ವಿವರಣೆಯನ್ನೂ ನೀಡಿದ್ದಾರೆ. ಆದರೆ, ಇದು ಇಲ್ಲಿಗೇ ನಿಲ್ಲುವಂತೆ ಕಾಣಿಸುತ್ತಿಲ್ಲ. ಇದರ ಹಿಂದೆಯೇ ನೀಲಮಣಿ ಅವರ ವರ್ಗಾವಣೆಯ ಸುದ್ದಿ ಕೂಡ ಕೇಳಿಬರುತ್ತಿದೆ.
ಇನ್ನೇನು 2019ರ ಲೋಕಸಭೆ ಚುನಾವಣೆಗಾಗಿ ತೃತೀಯ ರಂಗ ಒಗ್ಗೂಡಿತು ಎಂದುಕೊಳ್ಳುತ್ತಿರುವ ಬೆನ್ನಲ್ಲೇ, ತಾವು ಎಂಥ ಫೈರ್ ಬ್ರಾಂಡ್ ನಾಯಕಿ ಎಂದು ಮಮತಾ ಬ್ಯಾನರ್ಜಿ ಅವರು ತೋರಿಸಿಕೊಟ್ಟಿದ್ದಾರೆ. ಪ್ರಧಾನಿ ಹುದ್ದೆಯ ಮೇಲೆ ಭಾರೀ ಆಸೆ ಇಟ್ಟುಕೊಂಡಿರುವ ಮಮತಾ ಅವರನ್ನು ಸಂಭಾಳಿಸುವುದು ಕೂಡ ಅಷ್ಟು ಸುಲಭವಲ್ಲ ಎಂಬುದು ಗೊತ್ತಿರುವ ಸಂಗತಿಯೆ.
@mamataBaneerjee What do you think of Karnataka police......This is not west Bengal....learn Give respect & take respect...we demand a public apology for insulting senior most police officer DIG Neelamani Raju & people of Karnataka......
— Chethan Kumar (@dmschethan) May 24, 2018
ಮಮತಾನೇ ಕ್ಷಮೆ ಕೇಳಲಿ : ಕರ್ನಾಟಕ ಪೊಲೀಸರ ಬಗ್ಗೆ ನೀವೇನು ತಿಳಿದುಕೊಂಡಿದ್ದೀರಿ? ಇದು ಪಶ್ಚಿಮ ಬಂಗಾಳ ಅಲ್ಲ. ಗೌರವ ಕೊಡುವುದನ್ನು ಮತ್ತೆ ತೆಗೆದುಕೊಳ್ಳುವುದನ್ನು ಮೊದಲು ಕಲಿಯಿರಿ. ನಿಮ್ಮ ದುರಹಂಕಾರ ನಿಮ್ಮಲ್ಲೇ ಇಟ್ಟುಕೊಳ್ಳಿ. ಕರ್ನಾಟಕದ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ರಾಜು ಅವರನ್ನು ಅವಮಾನಿಸಿದ್ದಕ್ಕಾಗಿ ಕರ್ನಾಟಕದ ಜನತೆಯ ಬಹಿರಂಗ ಕ್ಷಮೆ ಕೇಳಿರಿ ಎಂದು ಶಾಸಕ ಸಿಟಿ ರವಿ ಮತ್ತು ಟ್ವಿಟ್ಟಿಗ ಚೇತನ್ ಕುಮಾರ್ ಎಂಬುವವರು ಆಕ್ರೋಶ ವ್ಯಕ್ತಪಡಿಸಿ ಟ್ವೀಟಿಸಿದ್ದಾರೆ.