ಮೆಟ್ರೋದಲ್ಲಿ ಹಿಂದಿ : ಪ್ರತಿಭಟನೆಯ ದನಿಗೆ ಕಿವಿಯಾಗಬನ್ನಿ
ಯೋಜನೆ ಪೂರ್ಣಗೊಂಡಾಗ ಬೆಂಗಳೂರಿನ ನಮ್ಮ ಮೆಟ್ರೋ ರೈಲು ನಗರದ ಸಾರಿಗೆಯ ಸ್ವರೂಪವನ್ನೇ ಬದಲಿಸುವಂತದ್ದು. ಈ ಯೋಜನೆಗಾಗಿ ಬೆಂಗಳೂರಿನ ನೂರಾರು ಕನ್ನಡಿಗರು ತಮ್ಮ ನೆಲ ತ್ಯಾಗ ಮಾಡಿದ್ದಾರೆ. ಈ ಯೋಜನೆಗಾಗಿ ಕನ್ನಡಿಗರ ಸರ್ಕಾರ ಸಾವಿರಾರು ಕೋಟಿ ಹಣ ನೀಡಿದೆ. ಈ ಯೋಜನೆಗಾಗಿ ಮಾಡಲಾಗಿರುವ ಸಾಲಕ್ಕೆ ಹೊಣೆಯನ್ನು ಕನ್ನಡಿಗರ ಸರ್ಕಾರ ಹೊತ್ತಿದೆ.
ಹೀಗಿದ್ದಾಗ ಈ ನಗರ ಸಾರಿಗೆಯಲ್ಲಿ ಕನ್ನಡದ ಸಾರ್ವಭೌಮತ್ವ ದೊಡ್ಡ ರೀತಿಯಲ್ಲಿ ಮೆರೆಯಬೇಕಿತ್ತು. ಆದರೆ ಬೆಂಗಳೂರನ್ನು ಕಾಸ್ಮೊಪಾಲಿಟಿನ್ ನಗರ ಎಂದು ತೋರಿಸುವ ಅತ್ಯುತ್ಸಾಹದ ಕಾರಣ ಬೆಂಗಳೂರಿನ ಮೆಟ್ರೋದಲ್ಲಿ ಕನ್ನಡ, ಇಂಗ್ಲಿಷಿನೊಡನೆ ಹಿಂದಿಯೂ ನುಸುಳಿಕೊಂಡಿದೆ.
ರಾಜ್ಯ ಸರ್ಕಾರ ಇಲ್ಲಿಯವರೆಗೂ ಪಾಲಿಸಿಕೊಂಡು ಬಂದಿರುವ ಭಾಷಾ ನೀತಿಯಂತೆ ಕನ್ನಡದ ಜೊತೆ ಇಂಗ್ಲಿಷ್ ಇರುವ ಭಾಷಾ ನೀತಿ ಕೈ ಬಿಟ್ಟು, ಹಿಂದಿಯನ್ನು ಸೇರಿಸುವ ಕೆಲಸ ಮೆಟ್ರೋ ಮಾಡಿದೆ. ಈ ರೀತಿ ನಮ್ಮ ಊರಿನಲ್ಲಿ ಕನ್ನಡದ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಕೆಲಸ ಮೆಟ್ರೋದಲ್ಲಾಗಿದೆ. [ಭಾಷಾ ಹುಳುಕು ನೀತಿ ಖಂಡಿಸಬೇಕು ಹೇಗೆ? ಏಕೆ?]
ಹಿಂದಿನಿಂದಲೂ ದೇಶವನ್ನೆಲ್ಲ ಹಿಂದಿಮಯ ಮಾಡಬೇಕು ಅನ್ನುವ ಹಿಂದೀವಾದಿಗಳ ತಾಳಕ್ಕೆ ತಕ್ಕಂತೆ ಕುಣಿಯುವಂತೆ ನಮ್ಮ ಊರಿನ ವ್ಯವಸ್ಥೆಗಳನ್ನೆಲ್ಲ ಒಂದೊಂದಾಗಿ ಹಿಂದಿಯಲ್ಲಿ ಕಲ್ಪಿಸುತ್ತ ಹೋದರೆ ಮುಂದೊಂದು ದಿನ ಮುಂಬೈನಲ್ಲಿ ಮರಾಠಿಗಾದ ಸ್ಥಿತಿಯೇ ಬೆಂಗಳೂರಿನಲ್ಲಿ ಕನ್ನಡಕ್ಕಾಗಬಹುದು. ಹೀಗಾಗದಂತೆ ನೋಡಿಕೊಳ್ಳಬೇಕಾದ ಹೊಣೆ ಕನ್ನಡಿಗರೆಲ್ಲರ ಮೇಲಿದೆ.
ಈ ನಿಟ್ಟಿನಲ್ಲಿ ಹಲವು ವರ್ಷಗಳಿಂದ ಅನೇಕ ಕನ್ನಡಿಗರು ದುಡಿಯುತ್ತ ಬಂದಿದ್ದಾರೆ. ಪತ್ರಿಕೆಗಳಿಗೆ ಪತ್ರ, ಪಿಟಿಶನ್, ಆರ್.ಟಿ.ಐ, ಪ್ರತಿಭಟನೆ ಮುಂತಾದ ಸಾಧ್ಯವಿರುವ ಎಲ್ಲ ಮಾರ್ಗಗಳನ್ನೂ ಬಳಸಿ ಈ ಹುಳುಕು ಭಾಷಾ ನೀತಿಯನ್ನು ಖಂಡಿಸಲಾಗಿದೆ. ಈ ಒತ್ತಡವನ್ನು ಬದಲಾವಣೆಯಾಗುವವರೆಗೂ ಮುಂದುವರೆಸಬೇಕು. [ಹಿಂದಿ ಹೇರಿಕೆ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಅಭಿಯಾನ]
ಅಂತೆಯೇ ಮೆಟ್ರೋದಲ್ಲಿ ಹಿಂದಿ ಬಳಕೆಯ ಹಿಂದಿನ ಮರ್ಮದ ಕುರಿತು ಈ ಭಾನುವಾರ ಬೆಂಗಳೂರಿನ ಜಯನಗರದ ಟೋಟಲ್ ಕನ್ನಡ ಮಳಿಗೆಯಲ್ಲಿ ಬನವಾಸಿ ಬಳಗ ಪ್ರಕಾಶನದ ವತಿಯಿಂದ ನಡೆಯುವ ತಿಂಗಳ ಅಂಗಳ ಕಾರ್ಯಕ್ರಮದಲ್ಲಿ ಬನವಾಸಿ ಬಳಗದ ಆನಂದ ಮಾತನಾಡಲಿದ್ದಾರೆ. ಬೆಂಗಳೂರಿನಲ್ಲಿ ಕನ್ನಡದ ಸಾರ್ವಭೌಮತ್ವದ ಬಗ್ಗೆ ಕಾಳಜಿಯುಳ್ಳವರೆಲ್ಲ ಈ ಕಾರ್ಯಕ್ರಮಕ್ಕೆ ತಪ್ಪದೇ ಬನ್ನಿ. [ನಮ್ಮ ಮೆಟ್ರೋದಲ್ಲಿ ಹಿಂದಿ ಹೇರಿಕೆ ನಿಲ್ಲಲಿ]
ವಿವರಗಳು
ಇಂತಿವೆ:
ದಿನ
:
ಭಾನುವಾರ,
ನವೆಂಬರ್
8
ಹೊತ್ತು
:
ಬೆಳಿಗ್ಗೆ
11-12
ಎಲ್ಲಿ
:
ಟೋಟಲ್
ಕನ್ನಡ
ಮಳಿಗೆ,
ಜಯನಗರ,
ಬೆಂಗಳೂರು