ಲಕ್ಷ್ಮಣ ಸವದಿಗೆ ಯಾಕೆ ಡಿಸಿಎಂ ಹುದ್ದೆ ಕೊಟ್ರು, ಕಾರಣ ಬಹಿರಂಗ
Recommended Video
ಬೆಂಗಳೂರು, ಆಗಸ್ಟ್ 27: ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ವಿಸ್ತರಣೆಯಲ್ಲಿ ಕಂಡು ಬಂದ ಅಚ್ಚರಿಯ ಹೆಸರು ಲಕ್ಷ್ಮಣ ಸವದಿ. ಅಥಣಿ ಕ್ಷೇತ್ರದ ಲಿಂಗಾಯತ ನಾಯಕನಿಗೆ ಮಣೆ ಹಾಕಿದ್ದು ಯಾಕೆ ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಲಕ್ಷ್ಮಣ ಸವದಿ ಶಾಸಕರಲ್ಲದಿದ್ದರೂ ಹೇಗೆ ಸಂಪುಟದಲ್ಲಿ ಉಪಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ್ದಾರೆ ಎನ್ನುವ ಕುರಿತು ಎಲ್ಲರಲ್ಲೂ ಕುತೂಹಲ ಇದ್ದೇ ಇದೆ.
ಯಡಿಯೂರಪ್ಪ ಕೂಡ ಲಿಂಗಾಯತರು, ಲಿಂಗಾಯತ ಸಿಎಂ ಇರುವಾಗಲೇ ಮತ್ತೊಬ್ಬ ಲಿಂಗಾಯತನಿಗೆ ಹೇಗೆ ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದೆ ಎಂದು ಕೆಲವರು ಪ್ರಶ್ನಿಸಿದ್ದಾರೆ.
ಡಿಸಿಎಂ ಮಾಡದ್ದಕ್ಕೆ ಶ್ರೀರಾಮುಲು, ಈಶ್ವರಪ್ಪ ಬೆಂಬಲಿಗರು ಹೀಗಂದ್ರು?
ಹೈಕಮಾಂಡ್ನಿಂದ ಲಕ್ಷ್ಮಣ ಸವದಿಗೆ ದೊಡ್ಡ ಶ್ರೀರಕ್ಷೆ ಇದೆ. ಇದಕ್ಕೆ ಕಾರಣ ಮುಂಬರುವ ಮಹಾರಾಷ್ಟ್ರ ಚುನಾವಣೆ. ಈ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರಿಗೂ ಸವದಿ ಅನಿವಾರ್ಯವಾಗಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಕೊಲ್ಹಾಪುರ, ಪುಣೆ, ಮಹಾರಾಷ್ಟ್ರದಲ್ಲಿ ಸವದಿ ಹವಾ
ಮಹಾರಾಷ್ಟ್ರ ರಾಜ್ಯದ ಕೊಲ್ಹಾಪುರ, ಪುಣೆ ಹೀಗೆ ಕೆಲ ಭಾಗಗಳಲ್ಲಿ ಲಕ್ಷ್ಮಣ ಸವದಿ ಹವಾ ಜೋರಿದೆ. ಈ ಭಾಗದಲ್ಲಿ ಬಿಜೆಪಿ ಗೆ ದೊಡ್ಡ ಶಕ್ತಿ ಇಲ್ಲ. ಲಕ್ಷ್ಮಣ ಸವದಿ ಇದ್ದರೆ ಕೆಲ ಭಾಗಗಳಲ್ಲಿ ಬಿಜೆಪಿಗೆ ಅನುಕೂಲವಾಗಲಿದೆ. ಇದನ್ನು ಬಿಜೆಪಿ ಹೈಕಮಾಂಡ್ ಗೆ ಮಹಾರಾಷ್ಟ್ರ ಬಿಜೆಪಿ ಸಂಘಟನೆ ಮನವರಿಕೆ ಮಾಡಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಸವದಿ ಹೆಸರು ಸೂಚಿಸುವ ಮೂಲಕ ಕರ್ನಾಟಕದ ಬಿಜೆಪಿ ನಾಯಕರೇ ಶಾಕ್ ಆಗುವಂತೆ ಮಾಡಿದೆ.
ಅಕ್ಟೋಬರ್ನಲ್ಲಿ ಮಹಾರಾಷ್ಟ್ರ ವಿಧಾನಸಭಾ ಚುನಾವಣೆ
ಮಹಾರಾಷ್ಟ್ರ ವಿಧಾನಸಭೆಗೆ ಈ ವರ್ಷಾಂತ್ಯದೊಳಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ. ಚುನಾವಣೆ ಮುಗಿಯೋವರೆಗೂ ಲಕ್ಷ್ಮಣ ಸವದಿಯನ್ನು ಸಂಪುಟದಲ್ಲಿ ಉಳಿಸಿಕೊಳ್ಳಲೇ ಬೇಕು ಎಂದು ಹೈಕಮಾಂಡ್ ತಾಕೀತು ಮಾಡಿದೆ. ಅನರ್ಹ ಶಾಸಕ ಮಹೇಶ್ ಕುಮಟಹಳ್ಳಿಗೆ ಇದನ್ನು ಹೇಳಿ ಅಸಮಾಧಾನ ಸರಿಪಡಿಸಿ ಎಂದು ಕರ್ನಾಟಕದ ಬಿಜೆಪಿ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.
ಖಾತೆ ಹಂಚಿಕೆ ಫೈನಲ್, ಇಲ್ಲಿದೆ ಅಧಿಕೃತ ಪಟ್ಟಿ
ಶ್ರೀರಾಮುಲು ಅಭಿಮಾನಿಗಳ ಆಕ್ರೋಶ
ಇತ್ತ ಶ್ರೀರಾಮುಲು ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ಹೊರಹಾಕಿದ್ದಾರೆ. ಶ್ರೀರಾಮುಲು ಒಬ್ಬರೇ ಡಿಸಿಎಂ ಹುದ್ದೆ ಬೇಡಿಕೆ ಇಟ್ಟಿದ್ದರು.
ಶ್ರೀರಾಮುಲು ಅವರೇ ದಯಮಾಡಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಕೇವಲ ಶಾಸಕರಾಗಿರಿ. ಇಡೀ ವಾಲ್ಮೀಕಿ, ಎಸ್ಸಿ, ಎಸ್ಟಿ, ಓಬಿಸಿ ಸಮುದಾಯ ನಿಮ್ಮ ಬೆಂಬಲಕ್ಕಿದೆ ಎಂದು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಆದರೆ ಡಿಸಿಎಂ ಪಟ್ಟ ಕೇಳದವರಿಗೆ ನೀಡಲಾಗಿದೆ. 80ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಶ್ರೀರಾಮುಲು ಪ್ರಚಾರ ಮಾಡಿದ್ದಾರೆ. ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಶ್ರಮಿಸಿದ್ದಾರೆ.
ಯಾರ್ಯಾರಿಗೆ ಉಪಮುಖ್ಯಮಂತ್ರಿ ಹುದ್ದೆ
ಗೋವಿಂದ ಕಾರಜೋಳ, ಡಾ. ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರಿಗೆ ಉಪಮುಖ್ಯಮಂತ್ರಿ ಹುದ್ದೆಗಳನ್ನು ನೀಡಲಾಗಿದೆ. ಈ ಮೂಲಕ ಜಗದೀಶ್ ಶೆಟ್ಟರ್, ಕೆಎಸ್ ಈಶ್ವರಪ್ಪ ಹಾಗೂ ಆರ್ ಅಶೋಕ್ಗೆ ಹಿನ್ನಡೆಯಾದಂತಾಗಿದೆ. ಕಾರಜೋಳ ದಲಿತ ಎಡಗೈ ಪಂಗಡಕ್ಕೆ ಸೇರಿದವರು, ಅಶ್ವಥನಾರಾಯಣ ಒಕ್ಕಲಿಗ, ಸವದಿ ಗಾಣಿಗ(ಲಿಂಗಾಯತ ಉಪ ಪಂಗಡ) ಸಮುದಾಯಕ್ಕೆ ಸೇರಿದವರು. ಹೀಗೆ ಪ್ರಮುಖ ಸಮುದಾಯಗಳನ್ನು ಓಲೈಸಲು ಹೈಕಮಾಂಡ್ ನಿರ್ಧರಿಸಿದೆ.