ತೇಜಸ್ವಿನಿ ಅವರಿಗೆ ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಕೈತಪ್ಪಿದ್ದೇಕೆ?
Recommended Video
ಬೆಂಗಳೂರು, ಮಾರ್ಚ್ 26: ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧಿಸುತ್ತಾರೆ ಎಂದು ಈಗಾಗಲೇ ಅವರ ಅಭಿಮಾನಿಗಳು ಕರಪತ್ರ ಹಂಚಿ ಪ್ರಚಾರವನ್ನೂ ಆರಂಭಿಸಿದ್ದರು. ಆದರೆ ಕೊನೆಯ ಪಕ್ಷಣದಲ್ಲಿ ಆದ ಬದಲಾವಣೆಗಳಿಂದಾಗಿ ಬಿಜೆಪಿ ಯುವನಾಯಕ ತೇಜಸ್ವಿ ಸೂರ್ಯ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸೋಮವಾರ ತಡರಾತ್ರಿಯವರೆಗೂ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಬಸವನಗುಡಿಯ ಹಾಲಿ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಬೇಕು ಎಂಬ ಮಾತು ಕೇಳಿಬಂತು.
ತೇಜಸ್ವಿನಿಗೆ ತಪ್ಪಿದ ಟಿಕೆಟ್, ಬೆಂಗಳೂರು ದಕ್ಷಿಣದಿಂದ ತೇಜಸ್ವಿ ಸೂರ್ಯ
ಆದರೆ ಅಚ್ಚರಿಯ ಬೆಳವಣಿಗೆಯಲ್ಲಿ ರವಿ ಸುಬ್ರಹ್ಮಣ್ಯ ಅವರ ಬದಲಾಗಿ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರನ್ನೇ ಅಭ್ಯರ್ಥಿಯನ್ನಾಗಿ ಬಿಜೆಪಿ ಘೋಷಿಸಿತು. ತೇಜಸ್ವಿನಿ ಅವರಿಗೇ ಟಿಕೆಟ್ ಸಿಗುತ್ತದೆ ಎಂದುಕೊಂಡಿದ್ದ ಅಭಿಮಾನಿಗಳಿಗೆ ಭ್ರಮನಿರಸನವಾಗಿತ್ತು. ಅಷ್ಟಕ್ಕೂ ಬಿಜೆಪಿ ತೇಜಸ್ವಿನಿ ಅವರ ಬದಲಿಗೆ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ನೀಡಿದ್ದೇಕೆ?
ಪರೋಕ್ಷವಾಗಿ ಕಾಂಗ್ರೆಸ್ ಕಾರಣ?!
ತೇಜಸ್ವಿನಿ ಅವರಿಗೆ ಟಿಕೆಟ್ ತಪ್ಪುವುದಕ್ಕೆ ಪರೋಕ್ಷವಾಗಿ ಕಾಂಗ್ರೆಸ್ ಕಾರಣವೇ? ಕಾಂಗ್ರೆಸ್ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಕೆ ಹರಿಪ್ರಸಾದ್ ಬದಲು ಬೇರೆ ಯಾವುದೇ ಪ್ರಬಲ ಪ್ರತಿಸ್ಪರ್ಧಿಯನ್ನು ಕಣಕ್ಕಿಳಿಸಿದ್ದರೆ, ಆಗ ಬಿಜೆಪಿಗೆ ತೇಜಸ್ವಿನಿ ಅನಂತ್ ಕುಮಾರ್ ಅವರ 'ಅನುಕಂಪದ ಮತಗಳು' ಅನಿವಾರ್ಯವಾಗಿರುತ್ತಿತ್ತು. ಆದರೆ ಕೊನೆಯ ಕ್ಷಣದ ವರೆಗೂ ಕಾದ ಬಿಜೆಪಿ, ಯಾವಾಗ ಕಾಂಗ್ರೆಸ್ ಬಿಕೆ ಹರಿಪ್ರಸಾದ್ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತೋ, ಆಗ ತೇಜಸ್ವಿನಿ ಅವರ ಬದಲು ತೇಜಸ್ವಿ ಸೂರ್ಯ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತು.
ಯುವಕರಿಗೆ ಅವಕಾಶ?
ಯುವ ನಾಯಕರನ್ನು ಬೆಳೆಸುವ ಉದ್ದೇಶ ಹೊತ್ತ ಬಿಜೆಪಿ, ತೇಜಸ್ವಿ ಸೂರ್ಯ ಅವರೇ ಬೆಂಗಳೂರು ದಕ್ಷಿಣಕ್ಕೆ ಸೂಕ್ತ ಅಭ್ಯರ್ಥಿ ಎಂದು ಆರಿಸಿತು. ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಕೆ ಹರಿಪ್ರಸಾದ್ ಅವರನ್ನು ಕಣಕ್ಕಿಳಿಸಿದರೆ, ಅವರನ್ನು ಸುಲಭವಾಗಿ ಸೋಲಿಸುವುದಕ್ಕೆ ಸಾಧ್ಯ ಎಂದು ಊಹಿಸಿದ ಬಿಜೆಪಿ ತೇಜಸ್ವಿ ಸೂರ್ಯ ಅವರಂಥ ಯುವ ನಾಯಕರನ್ನು ಬೆಳೆಸಲು ಇದೊಂದು ಉತ್ತಮ ಅವಕಾಶ ಎಂದು ಯೋಚಿಸಿ, ಅವರನ್ನು ನಾಯಕರನ್ನಾಗಿ ಘೋಷಿಸಿದಂತಿದೆ.
OMG! ಟಿಕೆಟ್ ಸಿಕ್ಕಿದ್ದಕ್ಕೆ ತೇಜಸ್ವಿ ಸೂರ್ಯ ಭಾವುಕ ಟ್ವೀಟ್
ರವಿ ಸುಬ್ರಹ್ಮಣ್ಯ ಹೆಸರೂ ಕೇಳಿಬಂದಿತ್ತು!
ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ರವಿ ಸುಬ್ರಹ್ಮಣ್ಯ ಅವರನ್ನು ಕಣಕ್ಕಿಳಿಸಬೇಕು ಎಂದೂ ನಿನ್ನೆಯ ಸಭೆಯಲ್ಲಿ ಸಾಕಷ್ಟು ಚರ್ಚೆ ನಡೆದಿತ್ತು. 'ಹಾಗೊಮ್ಮೆ ರವಿ ಸುಬ್ರಹ್ಮಣ್ಯ ಅವರನ್ನು ಕಣಕ್ಕಿಳಿಸಿದ್ದೇ ಆದರೆ, ನಂತರ ತೆರವಾಗುವ ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ(ರವಿಸುಬ್ರಹ್ಮಣ್ಯ ಗೆದ್ದರೆ) ತೇಜಸ್ವಿನಿ ಅವರನ್ನು ಕಣಕ್ಕಿಳಿಸಬಹುದು' ಎಂಬೆಲ್ಲ ಲೆಕ್ಕಾಚಾರ ಅಭಿಮಾನಿಗಳ ವಲಯದಲ್ಲಿ ಆರಂಭವಾಗಿತ್ತು. ಆದರೆ ಕೊನೆಗೆ ರವಿಸುಬ್ರಹ್ಮಣ್ಯ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಅವರಿಗೆ ಟಿಕೆಟ್ ಸಿಕ್ಕಿತು.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸ್ಥೂಲ ಪರಿಚಯ
ನಿರ್ಧಾರ ಸ್ವಾಗತಿಸಿದ ತೇಜಸ್ವಿನಿ
ಬಿಜೆಪಿ ಟಿಕೆಟ್ ಸಿಕ್ಕುವ ನಿರೀಕ್ಷೆಯಲ್ಲಿದ್ದ ತೇಜಸ್ವಿನಿ ಅನಂತ್ ಕುಮಾರ್ ಅವರು ಈ ಬೆಳವಣಿಗೆಗೆ ಯಾವುದೇ ರೀತಿಯಲ್ಲೂ ಬೇಸರ ವ್ಯಕ್ತಪಡಿಸದೆ, "ಪಕ್ಷದ ನಿರ್ಧಾರಕ್ಕೆ ನಾವು ಬದ್ಧರಾಗಿದ್ದೇವೆ. ಪಕ್ಷದ ಸಿದ್ಧಾಂತ ನಮಗೆ ಮುಖ್ಯ. ಅನಂತ್ ಕುಮಾರ್ ಅವರು ಬದುಕಿದ್ದಾಗಲೂ ಬಿಜೆಪಿಗಾಗಿಯೇ ನಾನು ಅವರೊಂದಿಗೆ ಪ್ರಚಾರ ಮಾಡಿದ್ದೆ. ಈಗಲೂ ಬಿಜೆಪಿಗಾಗಿ ಪ್ರಚಾರ ಮಾಡುತ್ತೇನೆ. ತೇಜಸ್ವಿ ಅವರ ಪರ ಪ್ರಚಾರ ಮಾಡುತ್ತೇನೆ" ಎಂದರು. ಅತ್ತ ತೇಜಸ್ವಿ ಸೂರ್ಯ ಅವರು ತೇಜಸ್ವಿನಿ ಅವರ ಮನೆಗೆ ತೆರಳಿ, ಅವರನ್ನು ಭೇಟಿಯಾದರು. 'ತಾಚು ಇಂದು ಏನಾಗಿದ್ದಾರೋ ಅದಕ್ಕೆ ಅನಂತ್ ಕುಮಾರ್ ಮತ್ತು ತೇಜಸ್ವಿನಿ ಅನಂತ್ ಕುಮಾರ್ ಕಾರಣ ಎಂದು ಟ್ವೀಟ್ ಮಾಡುವ ಮೂಲಕ ಅವರಿಗೆ ಧನ್ಯವಾದ ಅರ್ಪಿಸಿದರು.'