ಏರೋ ಇಂಡಿಯಾಗೆ ಬಾರದವರಿಗೆ ಟಿಕೆಟ್ ಹಣ ಮರುಪಾವತಿ
ಬೆಂಗಳೂರು, ಫೆಬ್ರವರಿ 26: ಯಲಹಂಕದ ವಾಯುನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾಗೆ ಬಾರದಿರುವವರ ಹಣವನ್ನು ಹಿಂದಿರುಗಿಸಲು ಆಯೋಜಕರು ನಿರ್ಧರಿಸಿದ್ದಾರೆ.
ಫೆಬ್ರವರಿ 20-24ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆದಿತ್ತು. ಆದರೆ ಫೆಬ್ರವರಿ 23ರಂದು ಗೇಟ್ ನಂಬರ್ 5ರ ಬಳಿ ಇರುವ ಪಾರ್ಕಿಂಗ್ ಜಾಗದಲ್ಲಿ ಬೆಂಕಿ ಕಾಣಿಸಿಕೊಂಡು 300ಕ್ಕೂ ಹೆಚ್ಚು ಕಾರುಗಳು ಅಗ್ನಿಗೆ ಆಹುತಿಯಾಗಿತ್ತು.
ಆ ಸಂದರ್ಭದಲ್ಲಿ ತಮ್ಮ ಕಾರು ಉಳಿಸಿಕೊಳ್ಳಲು ಪ್ರೇಕ್ಷಕರು ತೆರಳಿದರೂ ಕೂಡ ಯಾವುದೇ ಪ್ರಯೋಜನವಾಗಿರಲಿಲ್ಲ, ಅಂದು ಕೊನೆಯ ಶೋವನ್ನು ರದ್ದುಪಡಿಸಲಾಗಿತ್ತು ಹಾಗೆಯೇ ಮಧ್ಯಾಹ್ 2 ಗಂಟೆಗೆ ಮತ್ತೊಂದು ಶೋ ಇತ್ತು ಆದರೆ ಆ ಪ್ರದರ್ಶನಕ್ಕೆ ಸಾಕಷ್ಟು ಜನ ಪ್ರೇಕ್ಷಕರು ಬರಲು ಸಾಧ್ಯವಾಗಿಲ್ಲ ಹೀಗಾಗಿ ಆ ಹಣವನ್ನು ಹಿಂದಿರುಗಿಸಲು ಆಯೋಜಕರು ಮುಂದಾಗಿದ್ದಾರೆ.
ಪ್ರದರ್ಶನಕ್ಕೆ ಬಾರದವರು ಏರೋ ಇಂಡಿಯಾ ಪ್ರದರ್ಶನದ ಆಯೋಜಕರನ್ನು ಸಂಪರ್ಕಿಸಿ ಹಣ ವಾಪಸ್ ನೀಡುವಂತೆ ಕೋರಿದ್ದಾರೆ. ಈ ಕೋರಿಕೆ ಮೇರೆಗೆ ಹಣ ಮರು ಪಾವತಿಸುವುದಾಗಿ ಆಯೋಜಕರು ತಿಳಿಸಿದ್ದಾರೆ.
ಬಳಸದ ಟಿಕೆಟ್ ಅನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಎಚ್ಎಎಲ್ ಕಾರ್ಪೊರೇಟ್ ಕಚೇರಿಯಲ್ಲಿ ನೀಡಿದರೆ ಆನ್ಲೈನ್ನಲ್ಲೇ ಖಾತೆಗೆ ಹಣ ಮರುಪಾವತಿ ಮಾಡಲಾಗುತ್ತದೆ.