ಎಲ್ಲೋ ಇದ್ದ ಜಮೀರ್ ಅಹ್ಮದ್ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಸಿದ ಅಚ್ಚರಿಯ ಹಿಂದಿನ ಆ ರಾಜಕೀಯ ಶಕ್ತಿ!
ಸುಮಾರು ಒಂದೂವರೆ ದಶಕಗಳ ಹಿಂದಿನ ಮಾತು. ಮಾಜಿ ಸಿಎಂ ಎಸ್.ಎಂ.ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿ ನಿಯೋಜನೆಗೊಂಡು ಮುಂಬೈ ತೆರಳುತ್ತಾರೆ. ಅವರಿಂದ ಖಾಲಿಯಾದ ಬೆಂಗಳೂರು ನಗರ ವ್ಯಾಪ್ತಿಯ ಚಾಮರಾಜಪೇಟೆ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗುತ್ತದೆ.
ಈ ಚುನಾವಣೆಗೆ ಜೆಡಿಎಸ್ ಪಕ್ಷ ಅಚ್ಚರಿಯ ಅಭ್ಯರ್ಥಿಯಾಗಿ ಸಾರಿಗೆ ಉದ್ಯಮಿ, ಭಾರೀ ಕುಳ ಜಮೀರ್ ಅಹ್ಮದ್ ಖಾನ್ ಅವರನ್ನು ಕಣಕ್ಕಿಳಿಸುತ್ತದೆ. ಜಮೀರ್ ತಮ್ಮ ಪ್ರತಿಸ್ಪರ್ಧಿ, ಕಾಂಗ್ರೆಸ್ಸಿನ ಆರ್.ವಿ ದೇವರಾಜ್ ಅವರನ್ನು 3.678 ಮತಗಳ ಅಂತರದಿಂದ ಸೋಲಿಸುವ ಮೂಲಕ, ಸಕ್ರಿಯ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ.
ದುಡ್ಡಿಲ್ಲದೆ ಖಾಲಿ ಡಬ್ಬದಂತಿದ್ದ ಕುಮಾರಸ್ವಾಮಿ; ಜಮೀರ್ ಟ್ವೀಟ್
ಕಾಂಗ್ರೆಸ್ಸಿನ ಪ್ರಬಲ ಕೋಟೆಯಾಗಿದ್ದ ಚಾಮರಾಜಪೇಟೆಯಲ್ಲಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರ 'ದರಿದ್ರ ನಾರಾಯಣ' ಕಾರ್ಯಕ್ರಮ ಕಾಂಗ್ರೆಸ್ ಅನ್ನು ಬೆಚ್ಚಿಬೀಳಿಸುತ್ತದೆ. ರಾಜ್ಯ ರಾಜಕಾರಣಕ್ಕೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರನ್ನಾಗಿ ಜಮೀರ್ ಅವರನ್ನು ಗೌಡ್ರು ಪರಿಚಯಿಸಿ, ತಮ್ಮ ರಾಜಕೀಯ ಹೇಗೆ ಇರುತ್ತೆ ಎನ್ನುವುದನ್ನು ರಾಜ್ಯಕ್ಕೆ ಮತ್ತೊಮ್ಮೆ ಜಾಹೀರು ಪಡಿಸುತ್ತಾರೆ.
ಅಂದು ಜಮೀರ್ ಗೆಲುವಿನ ಹಿಂದಿನ ಶಕ್ತಿ ಸ್ಪಷ್ಟವಾಗಿ ದೇವೇಗೌಡ್ರು. ಆದರೆ, ಸಿಕ್ಕ ಅವಕಾಶವನ್ನು ರಾಜಕೀಯದಲ್ಲಿ ಹೇಗೆ ಬಳಸಿಕೊಳ್ಳಬೇಕು ಎನ್ನುವ ಗುರಿಯನ್ನು ಹೊಂದಿರುವ ಜಮೀರ್, ಈ ಹಂತಕ್ಕೆ ಬೆಳೆಯಲು ಕಾರಣವಾದ ರಾಜಕೀಯ ಶಕ್ತಿ ಯಾವುದು?
ಮಹದೇಶ್ವರನ ಸನ್ನಿಧಾನದಲ್ಲಿ ಮಹಾ ಶಿವರಾತ್ರಿ ಪೂಜೆ: ವಾವ್ ಸಿದ್ದರಾಮಯ್ಯ, ಜಮೀರ್!
ದೊಡ್ಡಗೌಡ್ರು ಎನ್ನುವ ನಿಯತ್ತು ಇಟ್ಟುಕೊಂಡಿದ್ದ ಜಮೀರ್
ರಾಜಕೀಯದಲ್ಲಿ ಒಂದು ಮಾತಿದೆ. 'ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರೂ ಇಲ್ಲ, ಜೊತೆಗೆ ಇದು ನಿಂತ ನೀರೂ ಅಲ್ಲ' ಎಂದು. ಬಿಜೆಪಿ ಜೊತೆಗೆ ಕುಮಾರಸ್ವಾಮಿಯವರ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬರಲು ಜಮೀರ್ ಕೊಡುಗೆ ಏನೂ ಕಮ್ಮಿಯಿರಲಿಲ್ಲ. ತಮ್ಮನ್ನು ಶಾಸಕರನ್ನಾಗಿ ಮಾಡಿದ್ದೇ ದೊಡ್ಡಗೌಡ್ರು ಎನ್ನುವ ನಿಯತ್ತು ಇಟ್ಟುಕೊಂಡಿದ್ದ ಜಮೀರ್ ಗೆ, ಅದೇನಾಯಿತೋ ಏನೋ, ಎಚ್ಡಿಕೆ ಜೊತೆ ಇವರ ಸಂಬಂಧ ಹಾಳಾಗಲಾರಂಭಿಸಿತು. ಅಲ್ಲಿಗೆ, ಗೌಡ್ರ ಕುಟುಂಬ ಅವರಿಂದ ದೂರವಾಗಲಾರಂಭಿಸಿತು.
ಸಿದ್ದರಾಮಯ್ಯ ಎಲ್ಲೇ ಹೋದರೂ, ಜಮೀರ್ ಅವರ ಅಕ್ಕಪಕ್ಕ ಖಾಯಂ
ಇದರಿಂದ, ಕಾಂಗ್ರೆಸ್ಸಿನ ಜೊತೆ ಹಸ್ತಚಾಚಲು ಆರಂಭಿಸಿದ ಜಮೀರ್ ಗೆ ಅಲ್ಲಿಂದ ಉತ್ತಮ ಸ್ಪಂದನೆಯೂ ಸಿಕ್ಕಿತು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಆಪ್ತರಾಗುತ್ತಾ ಸಾಗುವ ಜಮೀರ್ಗೆ ಅದೇ ಪಕ್ಷದ ಇನ್ನೊಂದು ಗುಂಪಿನ ವಿರೋಧವೂ ವ್ಯಕ್ತವಾಯಿತು. ಆದರೆ, ಸಿದ್ದರಾಮಯ್ಯ ತೋರಿದ ಅಭಯ ಹಸ್ತ, ಅವರನ್ನು ಇಂದು ಅವರ ಬಲಗೈ ಬಂಟನನ್ನಾಗಿ ಮಾಡಿತು. ಸಿದ್ದರಾಮಯ್ಯ ಎಲ್ಲೇ ಹೋದರೂ, ಜಮೀರ್ ಅವರ ಅಕ್ಕಪಕ್ಕ ಖಾಯಂ ಆಗಿರುವುದು ಗೊತ್ತಿರುವ ವಿಚಾರ.
ಸಮುದಾಯದ ನಾಯಕನಾಗಿ ಜಮೀರ್ ದಿನದಿಂದ ದಿನಕ್ಕೆ ಬೆಳೆದರು
ರಾಜಕೀಯದಲ್ಲಿ ಇದೊಂದು ಆಯಾಮವಾದರೆ, ತಮ್ಮ ಸಮುದಾಯದ ನಾಯಕನಾಗಿ ಜಮೀರ್ ದಿನದಿಂದ ದಿನಕ್ಕೆ ಬೆಳೆಯುತ್ತಿರುವುದು. ಜಾಫರ್ ಷರೀಫ್ ನಿಧನದ ನಂತರ ಮುಸ್ಲಿಂ ಸಮುದಾಯದ ಯಾವ ನಾಯಕರೂ ರಾಜ್ಯ ರಾಜಕಾರಣದಲ್ಲಿ ಬಲಾಢ್ಯರಾಗಿರಲಿಲ್ಲ. ರೋಷನ್ ಬೇಗ್ ಅವರದ್ದು ಒಂದು ಕಥೆಯಾದರೆ, ಇಬ್ರಾಹಿಂ ಭಾಷಣಕ್ಕಷ್ಟೇ ಸೀಮಿತರಾದರು.
ಯು.ಟಿ. ಖಾದರ್ ಅವರು ಕರಾವಳಿಯಲ್ಲಿ ತೋರಿದ ಖದರ್
ಇನ್ನು, ಯು.ಟಿ. ಖಾದರ್ ಅವರು ಕರಾವಳಿಯಲ್ಲಿ ತೋರಿದ ಖದರ್ ಅನ್ನು ರಾಜ್ಯದ ಬೇರೆ ಕಡೆ ಮುಂದುವರಿಸಲಿಲ್ಲ. ಜೊತೆಗೆ, ಶಾಂತಿನಗರ ಶಾಸಕ ಹ್ಯಾರಿಶ್ ಮತ್ತು ಕುಟುಂಬದ್ದು ಏನಾದರೊಂದು ಸಮಸ್ಯೆ. ಈ ಅವಕಾಶವನ್ನು ಜಮೀರ್ ಸಮರ್ಥವಾಗಿ ಬಳಸಿಕೊಂಡು, ಸಮುದಾಯದಲ್ಲೂ ಪ್ರಬಲರಾಗುತ್ತಾ ಸಾಗಿದರು.
ಸಿದ್ದರಾಮಯ್ಯನವರೇ ಮುಂದಿನ ಸಿಎಂ
ಸಿದ್ದರಾಮಯ್ಯನವರೇ ಮುಂದಿನ ಸಿಎಂ ಅಭ್ಯರ್ಥಿ ಎಂದು ಬಹಿರಂಗವಾಗಿ ಹೇಳಿಕೆಯನ್ನು ನೀಡುತ್ತಾ, ತಮ್ಮದೇ ಪಕ್ಷದ ಮುಖಂಡರ ವಿರೋಧವನ್ನು ಜಮೀರ್ ಕಟ್ಟಿಕೊಂಡರು. ಬಿಜೆಪಿ ಮತ್ತು ಜೆಡಿಎಸ್ ಮುಖಂಡರು 'ಜಮೀರ್ ಒಬ್ಬ ಬಕೆಟ್ ರಾಜಕಾರಣಿ'ಎಂದು ಇವರನ್ನು ಜರಿದರೂ, ಕಾಲಕ್ಕೆ ತಕ್ಕಂತೆ ರಾಜಕೀಯ ಮಾಡುತ್ತಲೇ ಬರುತ್ತಿದ್ದಾರೆ.
Recommended Video
ಬಸವಕಲ್ಯಾಣ ಉಪಚುನಾವಣೆ
ಬಸವಕಲ್ಯಾಣ ಉಪಚುನಾವಣೆಯಲ್ಲಿ ಜೆಡಿಎಸ್ ಸ್ಪರ್ಧಿಸಲು ಕುಮಾರಸ್ವಾಮಿ ಹತ್ತು ಕೋಟಿ ಪಡೆದಿದ್ದಾರೆ ಎನ್ನುವ ವಿವಾದಕಾರಿ ಹೇಳಿಕೆ ನೀಡುವ ಹಂತಕ್ಕೆ ಜಮೀರ್ ಇಂದು ಬೆಳೆದು ನಿಂತಿದ್ದಾರೆ. ಎಚ್ಡಿಕೆ ಪ್ರತಿಕ್ರಿಯೆಗೆ ಕಾಂಗ್ರೆಸ್ ನಾಯಕರೂ ನಾಚಿಸುವಂತೆ ತಿರುಗೇಟು ನೀಡಿದ್ದಾರೆ. ಹೀಗಾಗಿ, ಸ್ವಾಭಾವಿಕವಾಗಿ 'ದರಿದ್ರ ನಾರಾಯಣ'ಮರೆತೀರಾ ಎಂದು ಜೆಡಿಎಸ್ ಜಮೀರ್ ಅವರನ್ನು ಪ್ರಶ್ನಿಸುತ್ತಿದೆ.