ಪಾಕ್ ಪರ ಘೋಷಣೆ ಕೂಗಿದ ಯುವತಿ ಯಾರು? ಆಕೆಯ ಹಿನ್ನೆಲೆ ಏನು?
ಬೆಂಗಳೂರು, ಫೆಬ್ರವರಿ 21: ಅಮೂಲ್ಯ ಲಿಯೋನಾ ವಿರುದ್ಧ ಟೌನ್ ಹಾಲ್ ಬಳಿ ಪ್ರತಿಭಟನೆ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಯುವತಿಯ ಹೆಸರು ಅರುದ್ರಾ ಎಂದು ಗುರುತಿಸಲಾಗಿದೆ.
ಸಿಎಎ ವಿರೋಧಿ ಪ್ರತಿಭಟನೆ ವೇಳೆ ಗುರುವಾರ ಫ್ರೀಡಂ ಪಾರ್ಕ್ನಲ್ಲಿ 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನಾ ವಿರುದ್ಧ ವಿವಿಧ ಕನ್ನಡಪರ ಸಂಘಟನೆಗಳು ಶುಕ್ರವಾರ ಟೌನ್ ಹಾಲ್ ಮುಂಭಾಗ ಪ್ರತಿಭಟನೆ ನಡೆಸುತ್ತಿದ್ದವು. ಆಗ ಅರುದ್ರಾ 'ಈ ಕೂಡಲೇ, ಮುಸಲ್ಮಾನ್ ಮುಕ್ತಿ, ದಲಿತ ಮುಕ್ತಿ, ಕಾಶ್ಮೀರಿ ಮುಕ್ತಿ, ಟ್ರಾನ್ಸ್ ಮುಕ್ತಿ, ಆದಿವಾಸ ಮುಕ್ತಿ' ಎಂದು ಬರೆದಿದ್ದ ಭಿತ್ತಿಪತ್ರ ಪ್ರದರ್ಶಿಸಿದ್ದಳು. ಅಲ್ಲದೆ, ಈ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.
Breaking: ಪಾಕಿಸ್ತಾನ ಪರ ಘೋಷಣೆ ಕೂಗಿದ ಮತ್ತೊಬ್ಬ ಯುವತಿ
ಅರುದ್ರಾಳನ್ನು ಬಂಧಿಸಿದ ಬಳಿಕ ಸ್ನೇಹಿತರು ಎಸ್ಜೆ ಪಾರ್ಕ್ ಠಾಣೆಗೆ ಆಗಮಿಸಿದ್ದರು. ಅರುದ್ರಾ ಕಾಣೆಯಾಗಿದ್ದಾಳೆ. ಆಕೆ ನಿಮ್ಮ ಠಾಣೆಯಲ್ಲಿ ಇದ್ದಾಳೆ. ಕಳುಹಿಸಿಕೊಡಿ ಎಂದು ಪೊಲೀಸರ ಬಳಿ ಅವರು ಕೇಳಿದ್ದಾರೆ. ಆ ವೇಳೆ ಪ್ರತಿಭಟನಾಕಾರರಿಗೂ ಅವರಿಗೂ ವಾಕ್ಸಮರ ನಡೆದಿದೆ ಎನ್ನಲಾಗಿದೆ.
ಗ್ರಾಫಿಕ್ ಡಿಸೈನರ್ ಕೆಲಸ
ಅರುದ್ರಾ ಮಲ್ಲೇಶ್ವರ ನಿವಾಸಿಯಾಗಿದ್ದು, ಆಕೆ ಖಾಸಗಿ ಕಾಲೇಜೊಂದರಲ್ಲಿ ಪದವಿ ಪೂರ್ಣಗೊಳಿಸಿ ಖಾಸಗಿ ಕಂಪೆನಿಯಲ್ಲಿ ಗ್ರಾಫಿಕ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ಅರುದ್ರಾ, ಅಮೂಲ್ಯ ಲಿಯೋನಾಗೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾಳೆ ಎನ್ನಲಾಗಿದೆ.
ಅಪ್ಪ ಅಮ್ಮನಿಂದ ದೂರವಾಗಿದ್ದ ಅರುದ್ರಾ
ಅರುದ್ರಾಳ ಮೂಲ ಹೆಸರು ಅನ್ನಪೂರ್ಣ. ತಾಯಿ ರಮಾ, ತಂದೆ ನಾರಾಯಣ್. ಎರಡು ವರ್ಷದ ಹಿಂದೆಯೇ ಅಪ್ಪ ಅಮ್ಮನಿಂದ ದೂರವಾಗಿದ್ದ ಆಕೆ, ಮಲ್ಲೇಶ್ವರಂನ ಅಜ್ಜಿ ಮನೆಯಲ್ಲಿ ಕೆಲವು ಸಮಯ ಇದ್ದಳು. ಬಳಿಕ ಸ್ನೇಹಿತೆ ಜತೆ ವಾಸವಿದ್ದಳು. ಎಡಪಂಥೀಯ ಚಿಂತನೆಗಳತ್ತ ಸೆಳೆತ ಹೊಂದಿದ್ದ ಅರುದ್ರಾ, ತನ್ನ ಹೆಸರು ಬದಲಿಸಿಕೊಂಡು ಮನೆಯವರಿಂದ ದೂರವಿದ್ದು ವಾಸವಿದ್ದಳು ಎಂದು ಹೇಳಲಾಗಿದೆ.
ಠಾಣೆಯಲ್ಲಿ ವಾಗ್ವಾದ
ಟೌನ್ ಹಾಲ್ ಬಳಿ ಅರುದ್ರಾಳನ್ನು ವಶಕ್ಕೆ ಪಡೆದುಕೊಂಡು ಎಸ್ಜೆ ಪಾರ್ಕ್ ಠಾಣೆಗೆ ಕರೆದೊಯ್ಯಲಾಯಿತು. ಅಲ್ಲಿಗೂ ಪ್ರತಿಭಟನಾಕಾರರು ಧಾವಿಸಿದ್ದರು. ಅಲ್ಲಿ ಅರುದ್ರಾಳನ್ನು ಬಿಡಿಸಿಕೊಂಡು ಹೋಗಲು ಇಬ್ಬರು ಆಗಮಿಸಿದ್ದರು. ಅಮೂಲ್ಯ ಬಂಧನದ ವೇಳೆಯೂ ಅದೇ ವ್ಯಕ್ತಿಗಳಿಬ್ಬರು ಉಪ್ಪಾರಪೇಟೆ ಠಾಣೆಗೆ ತೆರಳಿದ್ದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಪ್ರತಿಭಟನಾಕಾರರಿಗೂ ವ್ಯಕ್ತಿಗಳಿಗೂ ಮಾತಿನ ಚಕಮಕಿ ನಡೆದಿದೆ. ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.
ಎಫ್ಐಆರ್ ದಾಖಲು
ಎಸ್ಜೆ ಪಾರ್ಕ್ ಠಾಣೆಗೆ ಭೇಟಿ ನೀಡಿದ ಬೆಂಗಳೂರು ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ, ಅರುದ್ರಾಳನ್ನು ವಿಚಾರಣೆಗೆ ಒಳಪಡಿಸಿದರು. ಅರುದ್ರಾ ವಿರುದ್ಧ ಎಸ್ಜೆ ಪಾರ್ಕ್ ಪೊಲೀಸರು ಸ್ವಯಂಪ್ರೇರಣೆಯಿಂದ ದೂರು ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಅರುದ್ರಾ ವಿರುದ್ಧ ಐಪಿಸಿ ಸೆಕ್ಷನ್ 153 ಎ ಅಡಿ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದೆ.
ಪ್ರತಿಭಟನೆ ವೇಳೆ ಘೋಷಣೆ
ಕರವೇ ಪ್ರವೀಣ್ ಶೆಟ್ಟಿ ಬಣ ಮತ್ತು ಹಿಂದೂಪರ ಸಂಘಟನೆಗಳು ಮೈಸೂರು ಬ್ಯಾಂಕ್ ವೃತ್ತದಿಂದ ಟೌನ್ ಹಾಲ್ವರೆಗೆ ಮೆರವಣಿಗೆ ಬಂದು ಪ್ರತಿಭಟನೆ ನಡೆಸುತ್ತಿದ್ದವು. ಹಿಂದೂ ಜನಜಾಗೃತಿ ವೇದಿಕೆ, ಶ್ರೀರಾಮಸೇನೆ ಹಾಗೂ ಇತರೆ ಸಂಘಟನೆಗಳು ಇದರಲ್ಲಿ ಭಾಗಿಯಾಗಿದ್ದವು. ಈ ಸಂದರ್ಭದಲ್ಲಿ ಅರುದ್ರಾ ಪ್ಲೇಕಾರ್ಡ್ ಪ್ರದರ್ಶಿಸಿ ಘೋಷಣೆ ಕೂಗಿದ್ದಾಳೆ ಎನ್ನಲಾಗಿದೆ.