ಮಹದೇವಪುರ ಕ್ಷೇತ್ರದಲ್ಲಿ ಹೀಗೊಂದು ಮಾದರಿ ಕಾರ್ಯಕ್ರಮ
ಬೆಂಗಳೂರು, ಏಪ್ರಿಲ್ 29: ವೈಟ್ಫೀಲ್ಡ್ ರೈಸಿಂಗ್ ಸಂಘಟನೆ ಮತದಾರರೊಂದಿಗೆ ತಮ್ಮ ಅಭ್ಯರ್ಥಿಗಳನ್ನು ಮುಖಾಮುಖಿಗೊಳಿಸಿ ಸಂವಾದ ನಡೆಸುವ ಮಾದರಿ ಕಾರ್ಯಕ್ರಮವನ್ನು ಮಾರತಹಳ್ಳಿಯ ರಾಡಿಸನ್ ಬ್ಲೂ ಹೊಟೆಲ್ನಲ್ಲಿ ಹಮ್ಮಿಕೊಂಡಿತ್ತು.
ಮಹದೇವಪುರ ಮತಕ್ಷೇತ್ರದಿಂದ ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಪ್ರಮುಖ ಅಭ್ಯರ್ಥಿಗಳಾಗಿರುವ ಬಿಜೆಪಿಯ ಅರವಿಂದ ಲಿಂಬಾವಳಿ, ಕಾಂಗ್ರೆಸ್ನ ಎಸಿ ಶ್ರೀನಿವಾಸ್, ಜನತಾದಳ ಪಕ್ಷದ ಸತೀಶ್ ಕೆ, ಸ್ವರಾಜ್ ಇಂಡಿಯಾ ಪಕ್ಷದ ರಮೇಶ್ ಚಂದೆರ್, ಎಎಪಿಯ ಭಾಸ್ಕರ್ ಪ್ರಸಾದ್ ಅವರುಗಳನ್ನು ಮತದಾರರುಗಳು ಮತದಾರರೊಂದಿಗೆ ಮುಖಾ-ಮುಖಿಯಾದರು.
ಮಹದೇವಪುರ: ಲಿಂಬಾವಳಿ ಹ್ಯಾಟ್ರಿಕ್ ಗೆ ಬ್ರೇಕ್ ಹಾಕುವುದೇ ಕೈ ಪಡೆ
ಅಭ್ಯರ್ಥಿಗಳ ಪಕ್ಷಗಳ ಬಗ್ಗೆ ಹೊರತುಪಡಿಸಿ ಸಂವಾದವನ್ನು ಕೇವಲ ಮಹದೇವಪುರ ಕ್ಷೇತ್ರದ ಸಮಸ್ಯೆಗಳಿಗೆ ಮಾತ್ರವೇ ಸೀಮಿತಗೊಳಿಸಲಾಗಿತ್ತು. ಮತದಾರರ ಪರವಾಗಿ 'ವೈಟ್ಫೀಲ್ಡ್ ರೈಸಿಂಗ್' ಸಂಸ್ಥೆಯ ಸದಸ್ಯರು ಅಭ್ಯರ್ಥಿಗಳಿಗೆ ಪ್ರಶ್ನೆಗಳನ್ನು ಕೇಳಿದರು. ಅಭ್ಯರ್ಥಿಗಳು ನೀಡಿದ ಉತ್ತರಗಳನ್ನು ದಾಖಲಿಸಿಕೊಳ್ಳಲಾಯಿತು.
ಮಹದೇವಪುರ ಕ್ಷೇತ್ರದ ಕಸದ ಸಮಸ್ಯೆ, ಡಂಪಿಂಗ್ ಯಾರ್ಡ್ ಸಮಸ್ಯೆ, ವಲಸಿಗರ ಕಾಟ, ಕಾನೂನು ಸುವ್ಯವಸ್ಥೆ, ಟ್ರಾಫಿಕ್, ಪಾದಾಚಾರಿ ಮಾರ್ಗ, ಜನಸಂದಣಿ, ಸರ್ಕಾರಿ ಕಚೇರಿಗಳಲ್ಲಿನ ಭ್ರಷ್ಟಾಚಾರ, ಮೂಲ ಸೌಕರ್ಯ ಕೊರತೆ, ಮಹದೇವಪುರ ಮತಕ್ಷೇತ್ರ ವ್ಯಾಪ್ತಿಗೆ ಬರುವ ಗ್ರಾಮಗಳ ಸಮಸ್ಯೆಗಳು ಸಂವಾದದಲ್ಲಿ ಚರ್ಚೆಗೆ ಬಂದವು. ಹೆಚ್ಚು ಚರ್ಚಿತವಾದ ವಿಷಯ ಸೊಳ್ಳೆ ಕಾಟ!
ಪ್ರತಿಯೊಬ್ಬ ಅಭ್ಯರ್ಥಿಯೂ ತಾವು ಮಹದೇವಪುರ ಸಮಸ್ಯೆಗಳನ್ನು ಕಂಡ ರೀತಿ ಅದಕ್ಕೆ ಗುರುತಿಸಿರುವ ಕಾರಣಗಳು ಮತ್ತು ಶಾಸಕರಾಗಿ ಆಯ್ಕೆಯಾದರೆ ಸಮಸ್ಯೆಗಳ ನಿವಾರಣೆಗೆ ತಮ್ಮ ಉಪಾಯಗಳೇನು ಎಂಬುದನ್ನು ಮತದಾರರಿಗೆ ತಿಳಿಸಿ ಹೇಳಿದರು.
ಮತದಾರರಿಂದ ಮೊದಲೇ ಸ್ವೀಕರಿಸಲಾಗಿದ್ದ ಪ್ರಶ್ನೆಗಳಲ್ಲಿ ಸಮಯದ ಅಭಾವದಿಂದಾಗಿ ಆಯ್ದ ಕೆಲವನ್ನಷ್ಟೆ ಅಭ್ಯರ್ಥಿಗಳಿಗೆ ಕೇಳಲಾಯಿತು.
ಕೊನೆಗೆ 'ವೈಟ್ಫೀಲ್ಡ್ ರೈಸಿಂಗ್' ಸಂಸ್ಥೆ ತಯಾರಿಸಿದ್ದ ಪ್ರಣಾಳಿಕೆಯನ್ನು ಎಲ್ಲ ಅಭ್ಯರ್ಥಿಗಳಿಗೆ ನೀಡಿ ಅವರ ಕೈಲಿ ಪ್ರಣಾಳಿಕೆಗೆ ಸಹಿ ಹಾಕಿಸಿಕೊಂಡು ಪ್ರಣಾಳಿಕೆಯಲ್ಲಿನ ಭರವಸೆಗಳನ್ನು ಈಡೇರುತ್ತೇವೆಂದು ಅಭ್ಯರ್ಥಿಗಳಿಂದ ಖಾತ್ರಿ ಪಡೆಯಲಾಯಿತು.