ವೈಟ್ಫೀಲ್ಡ್ ಪ್ರದೇಶದವರಿಗೆ ನಮ್ಮ ಮೆಟ್ರೋದಿಂದ ಸಿಹಿ ಸುದ್ದಿ
ಬೆಂಗಳೂರು ಜು.6: ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ನಮ್ಮ ಮೆಟ್ರೋ ಮಾರ್ಗವು ಈ ವರ್ಷಾಂತ್ಯಕ್ಕೆ ಸಾರ್ವಜನಿಕರಿಗೆ ಮುಕ್ತಗೊಳಿಸುವ ಉದ್ದೇಶ ಹೊಂದಿದ್ದೇವೆ ಎಂದು ಬಿಎಂಆರ್ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಮ್ ಪರ್ವೇಜ್ ತಿಳಿಸಿದ್ದಾರೆ.
ಕಾಮಗಾರಿ ಕೆಲಸ ಪ್ರಗತಿಯಲ್ಲಿರುವ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗವು ವಾಣಿಜ್ಯ ಕಾರ್ಯಾಚರಣೆಗೆ ತೆರೆದ ನಂತರ ನಮ್ಮ ಮೆಟ್ರೋ ಸೇವೆಗೆ ಒಟ್ಟು ಸುಮಾರು 2.5 ರಿಂದ 3 ಲಕ್ಷ ಹೆಚ್ಚುವರಿ ಪ್ರಯಾಣಿಕರು ಸೇರಿಕೊಳ್ಳಲು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.
ಒಟ್ಟು 15 ಕಿ. ಮೀ. ಉದ್ದದ ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದಲ್ಲಿ 13 ಮೆಟ್ರೋ ನಿಲ್ದಾಣಗಳಿವೆ. 44 ಎಕರೆ ಪ್ರದೇಶದಲ್ಲಿ ಕಾಡುಗೋಡಿಯಲ್ಲಿ ನಿಲ್ದಾಣ ನಿರ್ಮಾಣಗೊಂಡಿರುವುದು ವಿಶೇಷ. ಕಾರಿಡಾರ್ ನಲ್ಲಿರುವ ಮೆಟ್ರೋ ನಿಲ್ದಾಣಗಳು ಕೆ. ಆರ್. ಪುರಂ, ಹೂಡಿ ಜಂಕ್ಷನ್, ಕಾಡುಗೋಡಿ ಮತ್ತು ವೈಟ್ಫೀಲ್ಡ್. ಮೆಟ್ರೋ ನಿಲ್ದಾಣ, ಲೈನ್ ಗಳ ಕಾಮಗಾರಿ ಚುರುಕಿನಿಂದ ನಡೆಯುತ್ತಿದೆ.
ಕಾಮಗಾರಿಯನ್ನು ಶೀಘ್ರವೇ ಪೂರ್ಣಗೊಳಿಸಿ ಇದೇ ವರ್ಷದ ಸೆಪ್ಟೆಂಬರ್ನಲ್ಲಿ ಬೈಯಪ್ಪನಹಳ್ಳಿ- ವೈಟ್ ಫೀಲ್ಡ್ ಮಾರ್ಗಕ್ಕೆ ಪ್ರಾಯೋಗಿಕ ಚಾಲನೆ ನಿಗದಿಪಡಿಸಿದ್ದೇವೆ. ವರ್ಷಾಂತ್ಯದ ಹೊತ್ತಿಗೆ ಸಾರ್ವಜನಿಕ ಸೇವೆ ಈ ಮಾರ್ಗದಲ್ಲಿ ಆರಂಭವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮೆಟ್ರೋ ಮಾರ್ಗ ಕಾರ್ಯಾರಂಭವಾದ ಬಳಿಕ ಬಿಎಂಆರ್ಸಿಎಲ್ ಸೇವೆ ಗಮನಾರ್ಹವಾಗಿ ಹೆಚ್ಚಲಿದೆ. ಕಾರಣ ಈ ಮಾರ್ಗದ ಅಕ್ಕ ಪಕ್ಕ ಹಾಗೂ ಸಮೀಪ ಸಾಕಷ್ಟು ಐಟಿ ಕಂಪನಿಗಳಿಗೆ, ಕಾರ್ಖಾನೆಗಳಿವೆ. ಇದೊಂದು ಐಟಿ ಕಾರಿಡಾರ್ ಆಗಿದ್ದರಿಂದ ಇಲ್ಲಿ ಕೆಲಸ ಮಾಡುವ ಸಾವಿರಾರು ಉದ್ಯೋಗಿಗಳು ಈ ಮೆಟ್ರೋ ಮಾರ್ಗದ ಪ್ರಯೋಜನ ಪಡೆಯಲಿದ್ದಾರೆ.
ಕಾಮಗಾರಿಗೆ ಚುರುಕು
ವೈಟ್ಫೀಲ್ಡ್ ಮೆಟ್ರೋ ಲೇನ್ ಕಾಮಗಾರಿಯಲ್ಲಿ ಬಾಕಿ ಉಳಿದಿರುವ ವಿವಿಧ ಪ್ರದೇಶಗಳ್ಲಿ ನಡೆಯುತ್ತಿರುವ ಕೆಲಸಗಳಿಗೆ ಚುರುಕು ಮುಟ್ಟಿಸಲಾಗಿದೆ. ಕಾರ್ಮಿಕರು ಸೇರಿದಂತೆ ಕಾಮಗಾರಿಯಲ್ಲಿ ಬಳಕೆ ಆಗುತ್ತಿದ್ದ ಮಾನವ ಸಂಪನ್ಮೂಲಗಳಲ್ಲಿ ತುಸು ಬದಲಾವಣೆ ತರುವ ಮೂಲಕ ಕೆಲಸ ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ರೈಲು ಸೇವೆಗಳ ಕಾರ್ಯಾಚರಣೆಗೆ ಅಗತ್ಯವಿರುವ ಎಲ್ಲಾ ನಿರ್ಣಾಯಕ ಘಟಕಗಳನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಲಾಗುವುದು. ಬಿಎಂಆರ್ಸಿಎಲ್ 2022ರ ಅಂತ್ಯಕ್ಕೆ ಈ ಮಾರ್ಗವನ್ನು ತೆರೆಯುವ ಗುರಿ ಹೊಂದಿದೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ವಾಹನ ಸವಾರರಿಗೆ ಸಿಹಿ ಸುದ್ದಿ
ಬೈಯಪ್ಪನಹಳ್ಳಿ-ವೈಟ್ಫೀಲ್ಡ್ ಮಾರ್ಗದ ಮೆಟ್ರೋದ ಎರಡನೇ ಹಂತದ ಯೋಜನೆಯಾಗಿದ್ದು, 2016 ರಲ್ಲಿ ಪ್ರಾರಂಭವಾಯಿತು. ಅಲ್ಲಿಂದ ಅನೇಕ ಗಡುವುಗಳನ್ನು ಪಡೆದರೂ ಈವರೆಗೆ ಕಾಮಗಾರಿ ಪೂರ್ಣಗೊಂಡಿರಲಿಲ್ಲ. ಮೆಟ್ರೋ ಎಲಿವೇಟೆಡ್ ಕಾರಿಡಾರ್ ನಿರ್ಮಾಣದ ಸಮಯದಲ್ಲಿ ವೈಟ್ಫೀಲ್ಡ್ ರಸ್ತೆ ಬಳಕೆ ಆಗುತ್ತಿದೆ .ಇದರಿಂದ ಈ ರಸ್ತೆಯಲ್ಲಿ ಸಂಚರಿಸುವ ಸಾಕಷ್ಟು ವಾಹನ ಸವಾರರಿಗೆ ವರ್ಷಗಳಿಂದಲೂ ತೊಂದರೆ ಆಗಿದೆ. ಈ ವರ್ಷಾಂತ್ಯಕ್ಕೆ ಟ್ರಾಫಿಕ್ ಕಿರಿಕಿರಿ ತಪ್ಪಿ ನೆಮ್ಮದಿಯ ನಿಟ್ಟುಸಿರುವ ಬಿಡಬಹುದಾಗಿದೆ.
ವಿಳಂಬಕ್ಕೆ ಕಾರಣ
ವೈಟ್ಫೀಲ್ಡ್ ಮಾರ್ಗವು ಸಾಕಷ್ಟು ಸಮಸ್ಯೆಗಳನ್ನು ಎದುರಿಸಿದೆ. ಟಿನ್ ಫ್ಯಾಕ್ಟರಿ ಸಮೀಪ ಮೆಟ್ರೋ ಅಲೈನ್ ಮೆಂಟ್ನಲ್ಲಿ ಬದಲಾವಣೆ ತರಲಾಯಿತು. ಕಾಡುಗೋಡಿ ಭಾಗದಲ್ಲಿ ಯೋಜನೆಗೆ ಅಗತ್ಯವಿದ್ದ ಭೂಸ್ವಾಧೀನ ಸುಲಭವಾಗಿ ಆಗದೆ ವಿಳಂಬವಾಗಿತು. ಕೋವಿಡ್ ಕಾರಣ ಕಾರ್ಮಿಕರ ಕೊರತೆ ಸೇರಿದಂತೆ ಇನ್ನಿತರ ಕಾರಣಗಳಿಂದ ಕಾಮಗಾರಿ ಪೂರ್ಣಗೊಳಿಸುವುದು ತಡವಾಯಿತು. ಇನ್ನು ಇತ್ತೀಚೆಗೆ ರಷ್ಯಾ ಮತ್ತು ಉಕ್ರೇನ್ ಮಧ್ಯದ ಯುದ್ಧದಿಂದಾಗಿ ದೇಶೀಯ ಮಾರುಕಟ್ಟೆಯಲ್ಲಿ ಉನ್ನತ ದರ್ಜೆಯ ಉಕ್ಕಿನ ಕೊರತೆ ಉಂಟಾಗಿತ್ತು. ಇದು ಕೂಡ ಕಾಮಗಾರಿ ವಿಳಂಬಕ್ಕೆ ಕಾರಣವಾಗಿದೆ.
ಕೆಂಗೇರಿಯಿಂದ ವೈಟ್ಫೀಲ್ಡ್ಗೆ ಸಂಚಾರ
ಇನ್ನು ನಗರದ ಪೂರ್ವದ ನೇರಳೆ ಮಾರ್ಗವು ವಿಸ್ತರಿಸಿದ ನಂತರ ಪ್ರಯಾಣಿಕರು ಕೆಂಗೇರಿಯಿಂದ ವೈಟ್ಫೀಲ್ಡ್ವರೆಗೂ ಪ್ರಯಾಣಿಸಬಹುದು. ಕಳೆದ ಆಗಸ್ಟ್ ನಲ್ಲಿ ಮೈಸೂರು ರಸ್ತೆಯಿಂದ ಕೆಂಗೇರಿವರೆಗೆ ವಿಸ್ತರಿಸಿದ ನೇರಳೆ ಮಾರ್ಗವನ್ನು ಸಂಚಾರಕ್ಕೆ ಮುಕ್ತ ಮಾಡಲಾಗಿತ್ತು. ವೈಟ್ಫೀಲ್ಡ್ ಮೆಟ್ರೋ ಮಾರ್ಗದ ಬಳಿಕ ಆರ್. ವಿ. ಬೊಮ್ಮಸಂದ್ರ (ಹಳದಿ ರೇಖೆ) ಲೇನ್ ಸೇವೆ 2023ರ ಮಧ್ಯದಲ್ಲಿ ತೆರೆಯಲಾಗುವುದು ಎಂದು ಅಂಜುಮ್ ಪರ್ವೇಜ್ ಹೇಳಿದ್ದಾರೆ.