ದೂರು ವಾಪಸು ಪಡದರೆ ಕಲ್ಲಹಳ್ಳಿಗೆ ಎದುರಾಗಲಿದೆ ಭಾರೀ ಸಂಕಷ್ಟ ?
ಬೆಂಗಳೂರು, ಮಾರ್ಚ್ 07: ಪೊಲೀಸ್ ಆಯುಕ್ತರಿಗೆ ದೂರು ಸಲ್ಲಿಸುವ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಅಶ್ಲೀಲ ಸಿಡಿ ಬಿಡುಗಡೆ ಮಾಡಿದ್ದ ದಿನೇಶ್ ಕಲ್ಲಹಳ್ಳಿ ಇತ್ತೀಚಿನ ನಡೆ ಆತನನ್ನು ಸಂಕಷ್ಟಕ್ಕೆ ತಂದೊಡ್ಡುತ್ತಿದೆಯೇ ? ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ಮುಂದಿಟ್ಟುಕೊಂಡು ದೂರು ವಾಪಸು ಪಡೆಯಲು ದಿನೇಶ್ ಕಲ್ಲಹಳ್ಳಿ ಮುಂದಾಗಿದ್ದಾರೆ. ಇನ್ನೂ ಕೆಲವರಿಗೆ ತಾಂತ್ರಿಕ ತೋಷದ ನೆಪವೊಡ್ಡಿ ದೂರು ವಾಪಸು ಪಡೆದಿದ್ದೇ ಆದಲ್ಲಿ ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆಯೇ ?
ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿಡಿ ಹಿಂದೆ ಐದು ಕೋಟಿ ರೂ. ಡೀಲ್ ನಡೆದಿದೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಮೈಸೂರಿನಲ್ಲಿ ಹೇಳಿಕೆ ನೀಡಿದ್ದರು. ಇದು ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಇದನ್ನೇ ಮುಂದಿಟ್ಟು ಕೊಂಡು ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ದಿನೇಶ್ ಕಲ್ಲಹಳ್ಳಿ, ಕುಮಾರಣ್ಣ ಅವರು ಮೈಸೂರಿನಲ್ಲಿ ಹೇಳಿದ್ದಾರೆ. ದೂರು ಕೊಟ್ಟವರು ಐದು ಕೋಟಿಗೆ ಡೀಲ್ ಆಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ವಿರುದ್ಧ ನೀಡಿದ್ದ ದೂರು ವಾಪಸ್ ಪಡೆದ ದಿನೇಶ್ ಕಲ್ಲಹಳ್ಳಿ?
ಕುಮಾರಣ್ಣ ಅವರ ಹೇಳಿಕೆಯಿಂದ ನನ್ನನ್ನು ಸಂಶಯದಿಂದ ನೋಡುವಂತಾಗಿದೆ. ಇದರಿಂದ ನನ್ನ ಸಾಮಾಜಿಕ ಜೀವನಕ್ಕೆ ಧಕ್ಕೆಯಾಗಿದೆ. ಹೀಗಾಗಿ ನಾನು ದೂರು ವಾಪಸು ಪಡೆಯಲು ಮುಂದಾಗಿದ್ದೇನೆ. ನಮ್ಮ ವಕೀಲರನ್ನು ಸಂಪರ್ಕಿಸಿ ದೂರು ವಾಪಸು ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದಾರೆ. ಕುಮಾರಸ್ವಾಮಿ ಹೇಳಿಕೆ ಮುಂದಿಟ್ಟುಕೊಂಡು ದೂರು ವಾಪಸು ಪಡೆದು ವಿವಾದ ಮುಕ್ತನಾಗಲು ಹೊರಟಿರುವ ದಿನೇಶ್ ನನ್ನು ಮತ್ತಷ್ಟು ಸಂಕಷ್ಟಕ್ಕೆ ಎಡೆ ಮಾಡಿಕೊಡಲಿದೆ ಎಂಬುದು ಕಾನೂನು ತಜ್ಞರ ಅಭಿಮತ.
ಸಂತ್ರಸ್ತ ಯುವತಿಗೆ ಆಗಿರುವ ಅನ್ಯಾಯದ ಬಗ್ಗೆ ಕೇವಲ ದೂರು ಮಾತ್ರ ನೀಡಿಲ್ಲ. ಬದಲಿಗೆ ಮಾಜಿ ಸಚಿವರ ಅಶ್ಲೀಲ ಸಿಡಿ ಕೂಡ ಬಿಡುಗಡೆ ಮಾಡಿದ್ದಾರೆ. ಹೀಗಾಗಿ ದೂರು ವಾಪಸು ಪಡೆದರೂ, ದೂರಿಂದ ಗಂಭೀರ ಸ್ವರೂಪದ ಅಪರಾಧದ ಮಾಹಿತಿ ಒಳಗೊಂಡಿದೆ. ಹೀಗಾಗಿ ಒಂದು ಅಪರಾಧ ಪ್ರಕರಣ ಬೆಳಕಿಗೆ ಬಂದ ನಂತರ ಅದನ್ನು ಪೊಲೀಸರು ತನಿಖೆ ನಡೆಸಬೇಕು. ಹೀಗಾಗಿ ದೂರು ವಾಪಸು ಪಡೆದ ಮಾತ್ರಕ್ಕೆ ಈ ಪ್ರಕರಣ ಇಲ್ಲಿಗೆ ನಿಂತು ಹೋಗತ್ತದೆ ಎಂದು ಭಾವಿಸಲು ಅಸಾಧ್ಯ.
ಸಂತ್ರಸ್ತ ಯುವತಿ ಪತ್ತೆಯಾಗಿ, ನನಗೂ ಈ ಸಿಡಿಗೆ ಸಂಬಂಧವಿಲ್ಲ ಎಂದು ಹೇಳಿಕೆ ದಾಖಲಿಸಿದರೆ ಪ್ರಕರಣಕ್ಕೆ ತಾರ್ಕಿಕ ಅಂತ್ಯ ಸಿಗಬಹುದು. ಆದರೆ ಆಗ ಸಂಬಂಧವಿಲ್ಲದ ಸಿಡಿ ಯಾಕೆ ಬಿಡುಗಡೆ ಮಾಡಿದರು ಎಂದು ದಿನೇಶ್ ಕಲ್ಲಹಳ್ಳಿ ವಿರುದ್ಧ ಮಾಜಿ ಸಚಿವರು ಕಾನೂನು ಸಮರ ನಡೆಸಬಹುದು. ಇಲ್ಲವೇ ಸಂತ್ರಸ್ತ ಯುವತಿ ಸಚಿವರಿಂದ ಅನ್ಯಾಯಕ್ಕೆ ಒಳಗಾಗಿರುವ ಬಗ್ಗೆ ಹೇಳಿಕೆ ದಾಖಲಿಸಿದಲ್ಲಿ ಈ ವೇಳೆ ದಿನೇಶ್, ದೂರಿನಿಂದ ಹಿಂದೆ ಸರಿದ ಬಗ್ಗೆ ಪೊಲೀಸರು ವಿಚಾರಣೆ ನಡೆಸಬಹುದು. ಅಂತೂ ಸಾಮಾಜಿಕ ನ್ಯಾಯ ಕೊಡಿಸುವ ಯತ್ನದಲ್ಲಿ ದಿನೇಶ್ ಇದೀಗ ಅಡ್ಡ ಕತ್ತರಿಯಲ್ಲಿ ಸಿಕ್ಕಿ ಹಾಕಿಕೊಂಡಂತಾಗಿದೆ.
ಈಗಾಗಲೇ ಸಂತ್ರಸ್ತ ಯುವತಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಒಂದು ಗಂಭೀರ ಸ್ವರೂಪದ ಅಪರಾಧ ನಡೆದಿರುವ ಬಗ್ಗೆ ಕಲ್ಲಹಳ್ಳಿ ನೀಡಿರುವ ಸಿಡಿ ಪ್ರಮುಖ ಸಾಕ್ಷಿ. ಹೀಗಾಗಿ ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆದರೂ ಸಿಡಿ ಇಟ್ಟುಕೊಂಡು ಪೊಲೀಸರು ತನಿಖೆ ನಡೆಸಬಹುದು. ಸಂತ್ರಸ್ತ ಯುವತಿಯನ್ನು ಪತ್ತೆ ಮಾಡಿ ಹೇಳಿಕೆ ಆಧರಿಸಿ ಕೇಸು ದಾಖಲಿಸುವ ಮೂಲಕ ಪ್ರಕರಣದ ಹೂರಣ ಪೊಲೀಸರು ಹೊರಗೆ ತರಬಹುದು.
ದಿನೇಶ್ ಕಲ್ಲಹಳ್ಳಿ ದೂರು ವಾಪಸು ಪಡೆದಿದ್ದನ್ನೇ ಮುಂದಿಟ್ಟುಕೊಂಡು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಮಾನನಷ್ಟ ಮೊಕದ್ದಮೆ ಹಾಕಬಹುದು. ಇಲ್ಲವೇ ನನ್ನ ರಾಜಕೀಯ ಭವಿಷ್ಯದ ತೇಜೋವಧೆಗಾಗಿ ಷಡ್ಯಂತ್ರ ನಡೆದಿರಬಹುದು ತನಿಖೆ ನಡೆಸಿ ಎಂದು ಸರ್ಕಾರದಿಂದಲೇ ಈ ಪ್ರಕರಣವನ್ನು ತನಿಖೆಗೆ ಒಳಪಡಿಸಲು ಮಾಜಿ ಸಚಿವರಿಗೆ ಬಲವಾದ ಕಾರಣ ನೀಡಿದಂತಾಗತ್ತದೆ.
Recommended Video
ಸಿಡಿ ಬಿಡುಗಡೆ, ದೂರು ಸಲ್ಲಿಕೆ, ಆನಂತರ ಬಿಡಗುಡೆ, ಸಂತ್ರಸ್ತ ಯುವತಿ ಕಣ್ಮರೆ, ಇದೀಗ ದೂರು ವಾಪಸು, ಇಷ್ಟೆಲ್ಲಾ ಬೆಳವಣಿಗೆ ನೋಡಿದರೆ, ಇಡೀ ಪ್ರಕರಣ ಸಂತ್ರಸ್ತ ಯುವತಿ ಮೇಲೆ ನಿಂತಿದೆ. ಆಕೆಯ ಪತ್ತೆಯ ಬಳಿಕವಷ್ಟೇ ಇದಕ್ಕೆ ತಾರ್ಕಿಕ ಅಂತ್ಯ ಸಿಗಬಹುದು.