ಕುತೂಹಲಕರ; 'ಪಾಕಿಸ್ತಾನ್ ಜಿಂದಾಬಾದ್' ಎಂದಿದ್ದ ಅಮೂಲ್ಯಳ ಕನಸೇನಾಗಿತ್ತು?
ಬೆಂಗಳೂರು, ಫೆಬ್ರವರಿ 24: ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಪ್ರಕರಣದಡಿ ಬಂಧನಕ್ಕೊಳಗಾಗಿರುವ ಅಮೂಲ್ಯ ಲಿಯೋನಾಳ ಬಗ್ಗೆ ಸ್ವಾರಸ್ಯಕರ ಸಂಗತಿಗಳು ಬೆಳಕಿಗೆ ಬಂದಿವೆ.
ಕಳೆದ ಗುರುವಾರ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಹಿಂದೂ ಮುಸ್ಲಿಂ ಸಿಖ್ ಇಸಾಯಿ ಫೌಂಡೇಶನ್ ಆಯೋಜಿಸಿದ್ದ ಸಿಎಎ ವಿರೋಧಿ ಸಮಾವೇಶದಲ್ಲಿ ಮೈಕ್ ತೆಗೆದುಕೊಂಡು ಭಾಷಣ ಮಾಡುವ ವೇಳೆ ಚಿಕ್ಕಮಗಳೂರು ಮೂಲದ ಕಾಲೇಜು ವಿದ್ಯಾರ್ಥಿನಿ ಅಮೂಲ್ಯ ಲಿಯೋನಾ, 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದಳು.
ಪಾಕ್ ಪರ ಘೋಷಣೆ; ಸಮಾವೇಶ ಆಯೋಜಿಸಿದ್ದ ಸಂಘಟಕರಿಗೆ ಪೊಲೀಸ್ ಬುಲಾವ್
ಅಮೂಲ್ಯ ಹೇಳಿಕೆಗೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಮೋದಿ, ಅಮಿತ್ ಷಾ, ಬಿಜೆಪಿ, ಆರ್ಎಸ್ಎಸ್ ಕಡು ವಿರೋಧಿಯಾಗಿದ್ದ ಲಿಯೋನಾ, ಇತ್ತೀಚೆಗೆ ಹತ್ಯೆಯಾದ ಲೇಖಕಿ ಗೌರಿ ಲಂಕೇಶ ರೀತಿ ತಾನೂ ಕೂಡ ಹೆಸರು ಮಾಡಬೇಕು, ಅದೇ ರೀತಿಯಲ್ಲಿ ಬೆಳೆಯಬೇಕು ಎಂದು ಕನಸು ಕಂಡಿದ್ದಳು ಎಂದು ತಿಳಿದು ಬಂದಿದೆ.
ಪ್ರತಿಭಟನೆಗಳನ್ನು ನಡೆಸಲು ಪ್ರಾರಂಭಿಸಿದ್ದಳು
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೊಳಿಸಿದ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ ತೀವ್ರ ಹೋರಾಟಗಳು ಪ್ರಾರಂಭವಾಗಿದ್ದವು. ಕರ್ನಾಟಕದಲ್ಲೂ ಅನೇಕ ಹೋರಾಟಗಳು ನಡೆದವು. ಮೊದಲಿನಿಂದಲೂ ಎಡಪಂಥೀಯ ಸಂಘಟನೆಗಳ ಮುಖಂಡರ ಜೊತೆ ಸಂಪರ್ಕ ಇರಿಸಿಕೊಂಡಿದ್ದ ಅಮೂಲ್ಯ ಸಿಎಎ ವಿರೋಧಿ ಹೋರಾಟದಲ್ಲಿ ತಾನೊಬ್ಬಳೇ ಕೆಲ ಹುಡುಗರ ಗುಂಪು ಕಟ್ಟಿಕೊಂಡು ಪ್ರತಿಭಟನೆಗಳನ್ನು ನಡೆಸಲು ಪ್ರಾರಂಭಿಸಿದ್ದಳು. ಸಿಎಎ ವಿರೋಧಿ ಹೋರಾಟದಲ್ಲಿ ಸ್ವಯಂಪ್ರೇರಿತವಾಗಿ ಹೋಗಿ ಪಾಲ್ಗೊಂಡು ಮೈಕ್ ಹಿಡಿದು ಭಾಷಣ ಮಾಡುತ್ತಿದ್ದಳು ಎಂದು ಅವಳ ಸ್ನೇಹಿತರ ವಿಚಾರಣೆಯಲ್ಲಿ ಗೊತ್ತಾಗಿದೆ.
ಗೌರಿಯಂತೆ ತಾನೂ ಬೆಳೆಯುತ್ತೇನೆ
ಗೌರಿ ಲಂಕೇಶ್ ಹತ್ಯೆಯಾದಾಗಲೂ ಅಮೂಲ್ಯ ಹೋರಾಟಗಳಲ್ಲಿ ಪಾಲ್ಗೊಳ್ಳುತ್ತಿದ್ದಳು. ನಂತರ ಗೌರಿಯಂತೆ ತಾನೂ ಬೆಳೆಯುತ್ತೇನೆ. ನಾನೂ ಹೆಸರು ಮಾಡಬೇಕು ಎಂದು ಅವಳ ಸ್ನೇಹಿತರ ಬಳಿ ಹೇಳಿಕೊಳ್ಳುತ್ತಿದ್ದಳಂತೆ ಎಂಬುದಾಗಿ ಅವಳ ಸ್ನೇಹಿತರೇ ಪೊಲೀಸ್ ವಿಚಾರಣೆಯಲ್ಲಿ ತಿಳಿಸಿರುವುದಾಗಿ ವರದಿಯಾಗಿದೆ.
ಅಷ್ಟಕ್ಕೂ ಅಮೂಲ್ಯ 'ಪಾಕಿಸ್ತಾನ್ ಜಿಂದಾಬಾದ್' ಎಂದಿದ್ದೇಕೆ?
24 ಭಾಷಣಗಳು ಪ್ರಚೋಧನಕಾರಿ
ಅಮೂಲ್ಯ ಬಿಜೆಪಿ, ಆರ್ಎಸ್ಎಸ್, ಅಮಿತ್ ಷಾ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ವಿರೋಧಿಸಿ ಸಭೆ ಸಮಾರಂಭಗಳಲ್ಲಿ ಇದುವರೆಗೂ 77 ಭಾಷಣಗಳನ್ನು ಮಾಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಅದರಲ್ಲಿ 24 ಭಾಷಣಗಳು ಪ್ರಚೋಧನಕಾರಿ ಆಗಿಯೇ ಇವೆ ಎಂದು ತಿಳಿದು ಬಂದಿದೆ. ಅಮೂಲ್ಯ ಸಭೆ ಸಮಾರಂಭಗಳಲ್ಲಿ ಮಾಡಿದ ಭಾಷಣಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಇಂದು ಪೊಲೀಸ್ ಕಸ್ಟಡಿಗೆ
ಉಪ್ಪಾರಪೇಟೆ ಪೊಲೀಸರಿಂದ ಬಂಧನಕ್ಕೆ ಒಳಗಾಗಿ ಪರಪ್ಪನ ಅಗ್ರಹಾರದಲ್ಲಿರುವ ಅಮೂಲ್ಯಳನ್ನು ಸೋಮವಾರ ಪೊಲೀಸರು ವಶಕ್ಕೆ ತೆಗೆದುಕೊಳ್ಳಲಿದ್ದಾರೆ. ಈ ಕುರಿತು ಅಮೂಲ್ಯಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತಿದೆ. ಅಮೂಲ್ಯಳನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಅಲ್ಲದೇ ಇತ್ತ ಪೊಲೀಸರು ಸಮಾವೇಶ ಆಯೋಜಿಸಿದ್ದ ಸಂಘಟಕರ ಬಗ್ಗೆಯೂ ವಿಚಾರಣೆಯನ್ನು ತೀವ್ರಗೊಳಿಸಿದ್ದಾರೆ.