ಬೆಂಗಳೂರಿಗೆ ಬಂದ ವೆಂಕಯ್ಯನಾಯ್ಡು ದಕ್ಷಿಣ ಭಾರತೀಯರ ಬಗ್ಗೆ ಏನಂದ್ರು?
ಬೆಂಗಳೂರು, ಜನವರಿ 7: 'ವಿಶ್ವದ ಬುದ್ಧಿವಂತರು, ಉದ್ಯಮಗಳಲ್ಲಿ ಅತಿ ಎತ್ತರಕ್ಕೇರಿದವರಲ್ಲಿ ದಕ್ಷಿಣ ಭಾರತೀಯರೆ ಹೆಚ್ಚು' ಎಂದು ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ದಕ್ಷಿಣ ಭಾರತೀಯರನ್ನು ಕೊಂಡಾಡಿದರು.
ಬೆಂಗಳೂರಿಗೆ ಆಗಮಿಸಿರುವ ಅವರು ರಾಜಭವನದಲ್ಲಿ ನಡೆದ 'ರಾಷ್ಟ್ರೀಯ ಮೌಲ್ಯಮಾಪನಾ ಮತ್ತು ಮಾನ್ಯತೆ ಮಂಡಳಿ ರಜತಮಹೋತ್ಸವ' ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಾಲೆಗಳಲ್ಲಿ ದೈಹಿಕ ಶಿಕ್ಷಣ ಕಡ್ಡಾಯ ಮಾಡಬೇಕು, ಅದಕ್ಕೆ ಅಂಕಗಳನ್ನು ಕೊಡಬೇಕು, ಅದಕ್ಕೆ ಪ್ರಧಾನಿಯವರು ಫಿಟ್ನೆಸ್ ಇಂಡಿಯಾಗೆ ಕರೆ ನೀಡಿದ್ದಾರೆ, ಆಹಾರ ಮತ್ತು ಧಿರಿಸು ನಿಮ್ಮ ಆಯ್ಕೆ ಎಂದರು.
ಬ್ರಿಟಿಷರು ಭಾರತಕ್ಕೆ ಇಂಗ್ಲಿಷ್ ತಂದರು, ಇಂಗ್ಲಿಷ್ ವಸಾಹತುಕರಣದ ಸಂಕೇತ, ಹಾಗಾಗಿ ಒಂದು ಭಾಷೆಯಾಗಿ ಇಂಗ್ಲಿಷ್ನ್ನೂ ಕಲಿಯಿರಿ, ಆದರೆ ಶಿಕ್ಷಣ ಮಾತ್ರ ಮಾತೃಭಾಷೆಯಲ್ಲೇ ಪಡೆಯುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಾವು ತಿನ್ನುವ ಆಹಾರ ಉಪಯುಕ್ತವಾಗಿರಬೇಕು
ಆದರೆ ನಾವು ತಿನ್ನುವ ಆಹಾರ ಅತ್ಯಂತ ಉಪಯುಕ್ತವಾಗಿರಬೇಕು, ಆರೋಗ್ಯಕರವಾಗಿರಬೇಕು, ಇಲ್ಲಿನ ರಾಗಿಮುದ್ದೆ, ಬಿಸಿಬೇಳೆ ಬಾತು, ಎಷ್ಟು ಆರೋಗ್ಯಕರ, ರಾಗಿಮುದ್ದೆ ನಾಟಿಕೊಳಿ ಸಾರು ಎಷ್ಟು ಚೆನ್ನಾಗಿರುತ್ತದೆ?
ಜನಾರ್ಧನ ಹೋಟೆಲ್ ದೋಸೆ ನೆನಪಿಸಿಕೊಂಡ ನಾಯ್ಡು
ನಾನು ಯಾವಾಗ ಬೆಂಗಳೂರಿಗೆ ಬಂದರೂ ಕೂಡ ಇಲ್ಲಿನ ಜನಾರ್ದನ ಹೊಟೇಲ್ ಗೆ ಹೋಗಿ ದೋಸೆ ತಿನ್ನುತ್ತಿದ್ದೆ, ಯಾರು ಬೇಕಾದರೂ ಬೆಳಗ್ಗೆ ಎಂಟು ಗಂಟೆಗೆ ಯಾವುದೇ ಅಪಾಯಿಂಟ್ಮೆಟ್ ಇಲ್ಲದೆ ನನ್ನ ಅಲ್ಲಿ ಭೇಟಿಯಾಗಬಹುದಿತ್ತು ಎಂದು ಹಳೆಯ ನೆನಪು ಮೆಲುಕು ಹಾಕಿದರು.
ಇವತ್ತೂ ಅಷ್ಟೇ ನಾನು ಜನಾರ್ದನ ಹೊಟೇಲ್ ನ ಅಡುಗೆಯವರನ್ನು ರಾಜಭವನಕ್ಕೆ ಕರೆಸಿಕೊಂಡು ದೋಸೆ ಮಾಡಿಸಿಕೊಂಡು ತಿಂದೆ ಎಂದರು.
ಶಿಕ್ಷಣ ಕ್ರಮದಲ್ಲಿ ಮಕ್ಕಳಲ್ಲಿ ದೇಶಭಕ್ತಿ ತುಂಬ ಬೇಕು
ಭಾರತ್ ಮಾತಾ ಕಿ ಜೈ ಎಂದು ಕೂಗುವುದಷ್ಟೆ ದೇಶಭಕ್ತಿಯಲ್ಲ, ರಾಷ್ಟ್ರದ ಪ್ರತಿಯೊಂದು ರಾಜ್ಯದ ಜನರೂ ಒಬ್ಬರನ್ನೊಬ್ಬರು ಗೌರವಿಸಬೇಕು, ಜಾತಿ ಮತ ಧರ್ಮ, ಭಾಷೆ ಪ್ರಾಂತ್ಯಬೇಧವಿಲ್ಲದೆ ಸಕಲ ಭಾರತೀಯರು ಒಂದೇ ಎಂದು ಪರಿಗಣಿಸುವುದೇ ನಿಜವಾದ ದೇಶಭಕ್ತಿ, ಎಲ್ಲ ಶಾಲೆಗಳಲ್ಲಿ ಮಕ್ಕಳಿಗೆ ಮಾತೃಭಾಷೆಯಲ್ಲೇ ಪ್ರಾಥಮಿಕ ಶಿಕ್ಷಣ ನೀಡುವುದು ಅಗತ್ಯ, ಕ್ರಮೇಣ ಉನ್ನತ ಶಿಕ್ಷಣವನ್ನೂ ಮಾತೃಭಾಷೆಯಲ್ಲಿ ಕೊಡುವಂತಾಗಬೇಕು.
ಎಲ್ಲಾ ಭಾಷೆಯನ್ನೂ ಕಲಿಯಿರಿ ಮಾತೃಭಾಷೆ ಮರೆಯಬೇಡಿ
ಇಂಗ್ಲಿಷ್, ಪರ್ಷಿಯನ್ ಸೇರಿದಂತೆ ಎಲ್ಲ ಭಾಷೆಯನ್ನೂ ಕಲಿಯಿರಿ ಆದರೆ ಕನ್ನಡವನ್ನು ಮರೆಯಬೇಡಿ, ಮಾತೃಭಾಷೆ ನಮ್ಮ ಕಣ್ಣುಗಳು, ಅನ್ಯಭಾಷೆಗಳು ಅದರ ಮೇಲೆ ಹಾಕಿಕೊಳ್ಳುವ ಕನ್ನಡಕದಂತೆ.