ಯಡಿಯೂರಪ್ಪ ಭೇಟಿ ಬಳಿಕ ಅನರ್ಹ ಶಾಸಕ ಸುಧಾಕರ್ ಹೇಳಿದ್ದೇನು?
Recommended Video
ಬೆಂಗಳೂರು, ಆಗಸ್ಟ್ 3: ಬೆಳ್ಳಂಬೆಳಗ್ಗೆ ಅತೃಪ್ತ ಹಾಗೂ ಅನರ್ಹ ಶಾಸಕ ಕೆ ಸುಧಾಕರ್ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮೌಲ್ಯಗಳಿಗೆ ಪ್ರತಿಪಾದಕರಂತೆ ರಮೇಶ್ ಕುಮಾರ್ ನಟಿಸುತ್ತಿದ್ದಾರೆ. ಅವರ ಆದೇಶ ಅನೈತಿಕವಾಗಿದ್ದು, ಅದನ್ನು ಪ್ರಶ್ನಿಸಿ ಸುಪ್ರೀಂ ಮೆಟ್ಟಿಲೇರಿದ್ದೇವೆ, ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆ ಇದೆ, ಇಂತವರಿಂದ ಸಂವಿಧಾನಕ್ಕೆ ಅಪಚಾರ ಆಗುತ್ತಿದೆ. ತೀರ್ಪು ನಿಧಾನವಾದರೂ ಪರವಾಗಿಲ್ಲ, ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಹೇಳಿದ್ದಾರೆ.
ನಮ್ಮ ಪಕ್ಷದ ರಾಜಕೀಯ ಧೋರಣೆಯಿಂದ ಮನನೊಂದು ರಾಜೀನಾಮೆ ನೀಡಿದ್ದೇನೆ, ಕ್ಷೇತ್ರದ ಜನರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಸಂಪುಟದಲ್ಲಿ ನನಗೆ ಸ್ಥಾನ ನೀಡುತ್ತಾರೋ ಇಲ್ಲವೋ ಎನ್ನುವುದು ತಿಳಿದಿಲ್ಲ, ಕ್ಷೇತ್ರದ ಅಭಿವೃದ್ಧಿಗೋಸ್ಕರ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಯಡಿಯೂಪ್ಪ ಅವರು ಸಿಎಂ ಆಗಿ ಅಧಿಕಾರ ಸ್ವೀಕಾರ ಮಾಡಿದಾಗ ನಾನು ಇರಲಿಲ್ಲ, ಹಾಗಾಗಿ ಈಗ ಬಂದು ಅಭಿನಂದ ಸಲ್ಲಿಸುತ್ತಿದ್ದೇನೆ. ರಾಜಕೀಯವಾಗಿ ಏನೂ ಚರ್ಚೆ ನಡೆಸಿಲ್ಲ. ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರವಾಗಿ ಮಾತ್ರ ಚರ್ಚೆ ನಡೆಸಿದ್ದೇನೆ. ಅಭಿವೃದ್ಧಿಗೆ ಅನುದಾನ ನೀಡುತ್ತಾರೆ ಎನ್ನುವ ಭರವಸೆ ನನಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.