ಬನ್ನಂಜೆ ಗೋವಿಂದಾಚಾರ್ಯರ ಸಮಾರಂಭದ ವಿಶೇಷತೆಗಳೇನು?
ಬೆಂಗಳೂರು, ಡಿಸೆಂಬರ್, 22: 'ಬೆಳಕು ಇರುವಾಗ ಕಣ್ತುಂಬಿಕೊಳಬೇಕು, ಸೂರ್ಯನನ್ನು ನೋಡಲು ಸರದಿ ಯಾಕೆ'?, 'ದೊಡ್ಡವರ ಅಳತೆ ನಮಗೆ ತಿಳಿದಷ್ಟು-ಪಾತ್ರೆಯಂತೆ ನೀರು' ಹೀಗೆ ಸಣ್ಣ ಸಣ್ಣ ವಾಕ್ಯದಲ್ಲಿಯೇ ಬದುಕಿನ ಮೂಲ ತೋರಿಸುವ ಬನ್ನಂಜೆ ಗೋವಿಂದಾಚಾರ್ಯ ಅವರ ಮಾತುಗಳಿಂದ ಬದುಕು ಕಂಡುಕೊಂಡವರು ಎಷ್ಟೋ ಮಂದಿ.
ಕನ್ನಡ, ಸಂಸ್ಕೃತದ ವಿದ್ವಾನ್ ಪಂಡಿತ ಬನ್ನಂಜೆ ಗೋವಿಂದಾಚಾರ್ಯ ಅವರು ಆಗಸ್ಟ್ 3 ಕ್ಕೆ 80ನೇ ವಯಸ್ಸಿಗೆ ಕಾಲಿಟ್ಟಿದ್ದಾರೆ. ಇವರ ಈ 80ರ ಸಂಭ್ರಮದ ನೆನಪಿನಾರ್ಥ ಡಿಸೆಂಬರ್ 23 ರಿಂದ 27ರವರೆಗೆ ಬೆಂಗಳೂರಿನ ದಯಾನಂದ ಸಾಗರ ಕಾಲೇಜು ಆವರಣದಲ್ಲಿ ನಡೆಯುವ ಕಾರ್ಯಕ್ರಮದ ವಿಶೇಷತೆಗಳನ್ನು ಒನ್ ಇಂಡಿಯಾ ಕನ್ನಡದೊಂದಿಗೆ ವೀಣಾ ಬನ್ನಂಜೆ ಅವರು ಹಂಚಿಕೊಂಡಿದ್ದಾರೆ.[ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ: ಕಿರು ಪರಿಚಯ]
ಸಮಾರಂಭದಲ್ಲಿ ಏನೆಲ್ಲಾ ವಿಶೇಷತೆಗಳಿವೆ?
ವಿದ್ಯಾಭೂಷಣ್ ಮತ್ತು ಫಯಾಜ್ ಖಾನ್ ಅವರ ಜುಗಲ್ ಬಂಧಿ ಸಂಗೀತ, ನಿರೂಪಮ ನಿರಂಜನ ಅವರಿಂದ ನೃತ್ಯ ಪ್ರದರ್ಶನ, 9ನೇ ತರಗತಿ ಒಳಗಿನ ಮಕ್ಕಳಿಗಾಗಿ ಮಾತ್ರ ಬಾಲ ಕಲಾವಿದರಿಂದ ಡಿಸೆಂಬರ್ 26 ರಂದು ಅಭಿಮಾನ ಕಾಳಗ ಯಕ್ಷಗಾನ ಹಮ್ಮಿಕೊಂಡಿದ್ದೇವೆ. ಇದರ ಹೊರತಾಗಿ ನಗೆ ಹಾಸ್ಯ, ಸಂಗೀತ, ಭಗವದ್ಗೀತೆ, ಮಧ್ವಾಚಾರ್ಯ ಸಿನಿಮಾ ಪ್ರದರ್ಶನ ಇತರ ವಿಶೇಷತೆಗಳಿವೆ.
* ಬನ್ನಂಜೆ ಗೋವಿಂದಾಚಾರ್ಯ ಸಂಭ್ರಮದ ಕಾರ್ಯಕ್ರಮದಲ್ಲಿ ಏನಾದರೂ ಸ್ಮರಣಿಕೆ ಸಿಡಿ ಬಿಡುಗಡೆಗೊಳ್ಳುತ್ತಿದೆಯಾ?
ಸಿಡಿ, ಸ್ಮರಣಿಕೆ ಏನು ಬಿಡುಗಡೆ ಮಾಡುತ್ತಿಲ್ಲ. ಆದರೆ ಅವರ ಮತ್ತೆರಾಯನ ಕತೆ, ಮುಗಿಲ ಮಾತು, ನೆನಪಾದಳು ಶಕುಂತಲೆ (ಅನುವಾದ), ಉಪನ್ಯಾಸಗಳು, ಮಹಾಶ್ವೇತೆ, ಹೇಳದೆ ಉಳಿದದ್ದು (ಕವಿತೆಗಳು), ಋತುಸಂಹಾರ (ಅನುವಾದ), ಪರಾಶರ ಕಂಡ ಪರತತ್ತ್ವ, ಹೊಸಕವಿತೆಗಳು ಈ ಎಲ್ಲಾ ಕೃತಿಗಳ ಜೊತೆಗೆ ಬನ್ನಂಜೆ ಕೃತಿ ಸಮೀಕ್ಷೆ ಬ್ರಹ್ಮರಥ (2) ಎಂಬ ಸಮೀಕ್ಷೆ ಪುಸ್ತಕವನ್ನು ಬಿಡುಗಡೆಗೊಳಿಸಲಾಗುತ್ತಿದೆ. ಸಮಾರಂಭಕ್ಕೆ ಬಂದ ಗಣ್ಯರಿಗೆ ಈ 80 ಸಂಭ್ರಮದ ನೆನಪಿನಾರ್ಥ 'ರಮೇಶ ಬೆಳಗೋಡು' ಬರೆದಿರುವ 'ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಚಾರ್ಯ' ಎಂಬ ಪುಸ್ತಕವನ್ನು ನೀಡಲಿದ್ದೇವೆ.
ಎಷ್ಟು ಜನ ಅತಿಥಿಗಳು ಬರುವವರಿದ್ದಾರೆ?
ಈ ಸಮಾರಂಭಕ್ಕೆ 80-100 ಮಂದಿ ಅತಿಥಿಗಳು ಆಗಮಿಸಲಿದ್ದಾರೆ. ರಾಷ್ಟ್ರೀಯ, ಅಂತರಾಷ್ಟ್ರೀಯ ಕಲಾವಿದರು 20 ಮಂದಿ, ದೇಶ ವಿದೇಶ ಸೇರಿದಂತೆ 80 ಜನ ಅತಿಥಿಗಳು, 20 ಮಂದಿ ಪರಮಪೂಜ್ಯ ಸ್ವಾಮೀಜಿಗಳು ಆಗಮಿಸಲಿದ್ದಾರೆ. ಒಟ್ಟಿನಲ್ಲಿ ಸಾವಿರಾರು ಮಂದಿಯ ಸಮಾಗಮದಲ್ಲಿ ಈ ಕಾರ್ಯಕ್ರಮ ಕಳೆಗಟ್ಟಲಿದೆ.['ವಿದ್ಯಾವಾಚಸ್ಪತಿ' ಬನ್ನಂಜೆ ಗೋವಿಂದಾಚಾರ್ಯ 80ರ ಸಂಭ್ರಮ]
ಈ ಸಮಾರಂಭದ ನಂತರ ಮುಂದಿನ ಬೆಳವಣಿಗೆ ಏನು?
ನೂರಾರು ಗಣ್ಯರ ಸಮಾಗಮದಲ್ಲಿ ನಡೆಯುವ ಈ ಸಮಾರಂಭದಲ್ಲಿ ಪ್ರತಿಯೊಬ್ಬರ ಮಾತುಗಳು ವೇದ ವಾಕ್ಯಗಳಾಗಿರುತ್ತವೆ. ಅತಿಥಿ ಗಣ್ಯರ ಮಾತುಗಳನ್ನು ಜನತೆಗೆ ತಲುಪಿಸುವ ನಿಟ್ಟಿನಲ್ಲಿ ಎಲ್ಲಾ ಗಣ್ಯರ ಮಾತುಗಳನ್ನು ಕಲೆಹಾಕಿ 'ಬನ್ನಂಜೆ ಗೋವಿಂದಾಚಾರ್ಯರ ೮೦ ಸಂಭ್ರಮ ನೆನಪು' ಎಂಬ ಪುಸ್ತಕವನ್ನು ಪ್ರಕಟಿಸಲಿದ್ದೇವೆ ಎಂದು ವೀಣಾ ಬನ್ನಂಜೆ ಅವರು ತಿಳಿಸಿದ್ದಾರೆ.