ಸರ್ಕಾರಿ ನೌಕರರೆಂದು ಪರಿಗಣಿಸುವಂತೆ ಮುಷ್ಕರ ಕೈಗೊಂಡಿರುವ ರಹಸ್ಯ ಏನು ?
ಬೆಂಗಳೂರು, ಡಿಸೆಂಬರ್ 12: ಸಾರಿಗೆ ನೌಕರರು ತಮ್ಮನ್ನು ಸರ್ಕಾರಿ ನೌಕರರು ಎಂದು ಪರಿಗಣಿಸುವಂತೆ ಒತ್ತಾಯಿಸಿ ಕೆಲಸ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿರುವುದಕ್ಕೆ ಕಾರಣ ಏನು ? ಈ ಪರಿ ಯಶಸ್ವಿಯಾಗಲು ಕಾರಣವೇನು ? ಸರ್ಕಾರಿ ನೌಕರರಿಗೂ ಸಾರಿಗೆ ನೌಕರಿಗೂ ಅಂತಹ ವ್ಯತ್ಯಾಸ ಏನಿದೆ ? ಇಂತಹ ಪ್ರಶ್ನೆಗಳು ಮುಷ್ಕರದ ಈ ಸಂದರ್ಭದಲ್ಲಿ ಸಾಮಾನ್ಯ. ಇದರ ಹಿಂದೆ ಮಹತ್ವದ ಕಾರಣವಿದೆ.
ರಾಜ್ಯದಲ್ಲಿ ನಾಲ್ಕು ನಿಗಮಗಳಲ್ಲಿ ಸುಮಾರು 1.39 ಲಕ್ಷ ಸಾರಿಗೆ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಸಾರಿಗೆ ನೌಕರರು ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾದರೆ ಅವರಿಗೆ ಸಿಗುವ ಪಿಂಚಣಿ ಕೇವಲ 2 ರಿಂದ 4 ಸಾವಿರ ಮಾತ್ರ. ಮೂವತ್ತು ವರ್ಷ ಕೆಲಸ ಮಾಡಿ ನಿವೃತ್ತಿಯಾದ ಮೇಲೆ ಈ ಮೊತ್ತದಲ್ಲಿ ಹೇಗೆ ಜೀವನ ಸಾಗಿಸುವುದು? ಅದೇ ಸರ್ಕಾರಿ ನೌಕರರಿಗೆ ಅವರ ಮೂಲ ವೇತನದಲ್ಲಿ ಶೇ. ಇಷ್ಟು ಪ್ರಮಾಣ ಎಂದು ಪರಿಗಣಿಸಿ ಕನಿಷ್ಠ 15 ರಿಂದ 20 ಸಾವಿರ ( ವೇತನ ಆಧರಿಸಿ) ಬರುತ್ತದೆ.
ತೀವ್ರ ಸ್ವರೂಪ ಪಡೆದುಕೊಂಡ ಸಾರಿಗೆ ನೌಕರರ ಮುಷ್ಕರ
ಸರ್ಕಾರಿ ನೌಕರರಿಗಿಂತಲೂ ಹೆಚ್ಚು ಕೆಲಸ ಮಾಡುವ ಸಾರಿಗೆ ನೌಕರರು ನಿವೃತ್ತಿ ನಂತರ ನಿಕೃಷ್ಟ ಜೀವನ ನಡೆಸಬೇಕು. ಚಾಲಕ ವೃತ್ತಿ ಮಾಡುವರಂತೂ ವಯೋ ಸಹಜ ಕಾಯಿಲೆಗಳಿಗೆ ತುತ್ತಾಗುತ್ತಾರೆ. ಪಿಂಚಣಿ ನಂಬಿ ಜೀವನ ನಡೆಸಲು ಕಷ್ಟ ಸಾಧ್ಯ.ಹೀಗಾಗಿ ಮೂವತ್ತು ವರ್ಷ ಸೇವೆ ಸಲ್ಲಿಸಿ ನಿವೃತ್ತಿ ಬಳಿಕವೂ ಅನಿವಾರ್ಯವಾಗಿ ಬೇರಡೆ ಕೆಲಸ ಮಾಡುವಂತಹ ಪರಿಸ್ಥಿತಿ ಎದುರಿಸಬೇಕಾಗುತ್ತದೆ. ಅದೇ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿದಲ್ಲಿ ಕನಿಷ್ಠ ಪಿಂಚಣಿ ಸಿಗಲಿದೆ. ಇದರಿಂದ ನಿವೃತ್ತಿ ಬದುಕು ನಡೆಸಲಿಕ್ಕೆ ಚಾಲಕರು ಮತ್ತು ನಿವಾರ್ಹಕರಿಗೆ ಅನುಕೂಲವಾಗಲಿದೆ ಎಂಬುದೇ ಮುಷ್ಕರಕ್ಕೆ ಮೂಲ ಕಾರಣ.
ಸರ್ಕಾರಿ ರಜೆಗಳಿಲ್ಲ :
ವಾರಕ್ಕೊಂದು ರಜೆ ಹೊರತು ಪಡಿಸಿದರೆ ಸಾರಿಗೆ ನೌಕರರಿಗೆ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ಸೌಲಭ್ಯವಿಲ್ಲ. ಸರ್ಕಾರಿ ರಜೆಗಳು ಸಹ ಪೂರ್ಣ ಪ್ರಮಾಣದಲ್ಲಿ ಲಭ್ಯವಾಗಲ್ಲ. ಹಬ್ಬಗಳಿಗೆ ಒಂದಷ್ಟು ರಜೆ ಹೊರತು ಪಡಿಸಿ ರಜೆ ಸೌಲಭ್ಯವೂ ಸಿಗಲ್ಲ. ಅದೇ ಸರ್ಕಾರಿ ನೌಕರರ ವಿಚಾರಕ್ಕೆ ಬಂದರೆ ಇದೆಲ್ಲಾ ಸೌಲಭ್ಯ ಸಿಗುತ್ತದೆ. ಸರ್ಕಾರಿ ನೌಕರರಷ್ಟೇ ಶ್ರಮ ವಹಿಸಿ ಕೆಲಸ ನಿರ್ವಹಿಸುವ ನಮಗೆ ಯಾಕೆ ಆ ಸೌಲಭ್ಯ ಕೊಡುವುದಿಲ್ಲ ಎಂಬ ಕೂಗು ಮೊದಲಿನಿಂದಲೂ ಕೇಳಿ ಬರುತ್ತಿತ್ತು.ಇದೀಗ ಮುಷ್ಕರವಾಗಿ ಹೊರ ಬಿದ್ದಿದೆ. ಇನ್ನು ಹೆಚ್ಚುವರಿ ಕೆಲಸ ನಿರ್ವಹಿಸಿದರೆ ಹೆಚ್ಚುವರಿ ಭತ್ಯೆ ನೀಡಲಾಗುತ್ತಿತ್ತು. ಇತ್ತೀಚೆಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅದನ್ನೂ ನಿಲ್ಲಿಸಿದೆ. ಮಾಹಿತಿ ಹಕ್ಕು ಅಧಿನಿಯಮದಡಿ ಪಡೆದಿರುವ ದಾಖಲೆಗಳಲ್ಲಿ ಕೂಡ ಜನವರಿ 2020 ರಿಂದ ಈವರೆಗೂ ಹೆಚ್ಚುವರಿ ವೇತನ ನೀಡಿಲ್ಲ. ಕೆಲಸದ ಅವಧಿ ಎಂಟು ಗಂಟೆ ಮುಗಿದು, ಹೆಚ್ಚುವರಿ ನಾಲ್ಕು ತಾಸು ಕೆಲಸ ನಿರ್ವಹಿಸಿದರೂ ಅದರ ಪ್ರಯೋಝನ ಸಿಕ್ಕಿಲ್ಲ. ಈ ಕಾರಣಕ್ಕಾಗಿಯೇ ಬಿಎಂಟಿಸಿ ನೌಕರರ ಮುಷ್ಕರ ಯಶಸ್ವಿಯಾಗಲು ಕಾರಣ ಎಂದು ಹೇಳುತ್ತಾರೆ ಹೋರಾಟ ನೇತೃತ್ವ ವಹಿಸಿಕೊಂಡಿರುವ ಮುಖಂಡರು.
ವೇತನ ಪರಿಷ್ಕರಣೆ ಇಲ್ಲ:
ರಾಜ್ಯದ ನಾಲ್ಕು ಸಾರಿಗೆ ನಿಗಮದ ನೌಕರರ ವೇತನ ಪರಿಷ್ಕರಣೆ 2020 ಜನವರಿಯಲ್ಲಿಯೇ ಆಗಬೇಕಿತ್ತು. ಈ ಹಿಂದೆ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ವೇತನ ಪರಿಷ್ಕರಣೆಯಾಗಿತ್ತು. ಅದಾದ ನಂತರ ಜಗದೀಶ್ ಶೆಟ್ಟರ್, ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಪ್ರತಿ ನಾಲ್ಕು ವರ್ಷಕ್ಕೊಮ್ಮೆ ಕನಿಷ್ಠ ಶೇ. 4 ರಿಂದ ಗರಿಷ್ಠ ಶೇ. 10 ವೇತನ ಪರಿಷ್ಕರಣೆಯಾಗಿದೆ. ಅದರ ಪ್ರಕಾರ ಕಳೆದ ಜನವರಿಯಲ್ಲಿಯೇ ವೇತನ ಪರಿಷ್ಕರಣೆ ಮಾಡಬೇಕಿತ್ತು. ಕರೋನಾ ನೆಪದಲ್ಲಿ ವೇತನ ಪರಿಷ್ಕರಣೆ ಮಾಡಿಲ್ಲ. ಇದರ ಬಗ್ಗೆ ಕೂಡ ಸಾರಿಗೆ ನೌಕರರು ಬೇಸತ್ತಿದ್ದರು. ವೇತನ ಪರಿಷ್ಕರಣೆ ಮಾಡಲು ಮನವಿ ಮಾಡಿದರೂ ಸರ್ಕಾರ ಸ್ಪಂದಿಸಿರಲಿಲ್ಲ. ಈ ಆಕ್ರೋಶ ತೀವ್ರ ಸ್ವರೂಪದ ಹೋರಾಟವಾಗಿ ಹೊರ ಬಿದ್ದಿದೆ.
ಸರ್ಕಾರಿ ನೌಕರರು ಎಂದು ಪರಗಿಣಿಸಿದ್ದೇ ಆದಲ್ಲಿ ಸೇವಾ ನಿಯಮಗಳ ಪ್ರಕಾರ ಪ್ರತಿ ವರ್ಷಕ್ಕೊಮ್ಮೆ ವೇತನ ಪರಿಷ್ಕರಣೆಯಾಗಲಿದೆ. ಜತೆಗೆ ಸರ್ಕಾರಿ ರಜೆಗಳ ಸೌಲಭ್ಯ ಸಿಗಲಿದೆ. ನಿವೃತ್ತಿ ನಂತರ ಜೀವನ ಸಾಗಿಸಲು ಅಗತ್ಯ ಪಿಂಚಣಿ ಸಿಗಲಿದೆ. ಸರ್ಕಾರಿ ನೌಕರರಿಗಿಂತಲೂ ಕಷ್ಟಕರ ಕೆಲಸ ಮಾಡುವ ಸಾರಿಗೆ ನೌಕರರು ಈ ಸೌಲಭ್ಯ ಪಡೆಯಲು ನಮಗೂ ಹಕ್ಕಿದೆ. ಅದನ್ನು ಧಕ್ಕಿಸಿಕೊಳ್ಳವ ನಿಟ್ಟಿನಲ್ಲಿ ಹೋರಾಟ ಆರಂಭಿಸಿದ್ದಾರೆ.
ಆಂಧ್ರ ಪ್ರದೇಶ ಹೋರಾಟ ಯಶಸ್ವಿ:
ವರ್ಷದ ಹಿಂಧೆ ಇದೇ ರೀತಿಯ ಹೋರಾಟ ನೆರೆ ರಾಜ್ಯ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ನಡೆದಿತ್ತು. ಆಂಧ್ರ ಪ್ರದೇಶದಲ್ಲಿ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸಿ ಅಲ್ಲಿನ ಮುಖ್ಯಮಂತ್ರಿ ಜಗನ ಮೋಹನ್ ರೆಡ್ಡಿ ಆದೇಶ ಹೊರಡಿಸಿದ್ದರು. ಇದೇ ಅವಧಿಯಲ್ಲಿ ನಿವೃತ್ತಿ ಅವಧಿಯನ್ನು 60 ವರ್ಷಕ್ಕೆ ಹೆಚ್ಚಿಸಿ ಆದೇಶ ಮಾಡಿದ್ದರು. ಮಾತ್ರವಲ್ಲ ಐವತ್ತೆರಡು ಸಾವಿರ ಸಾರಿಗೆ ನೌಕರರನ್ನು ಸರ್ಕಾರಿ ನೌಕರರನ್ನಾಗಿ ಪರಿಗಣಿಸುವುದರಿಂದ ಸರ್ಕಾರಕ್ಕೆ ಹೊರೆಯಾಗಲಿದ್ದ 3600 ಕೋಟಿ ಹಣ ಭರಿಸಲು ಸರ್ಕಾರ ಸಿದ್ಧವಿದೆ. ನೌಕರರ ಸಂತೋಷವೇ ನಮ್ಮ ಸಂತೋಷ ಎಂದು ಘೋಷಣೆ ಮಾಡಿದ್ದರು. ಸಾರಿಗ ನೌಕರರನ್ನು ಸರ್ಕಾರಿ ನೌಕರನ್ನಾಗಿ ಪರಿಗಣಿಸಲು ಎದುರಾಗುವ ತಾಂತ್ರಿಕ ಸಮಸ್ಯೆ, ವೇತನ, ಇತರೆ ವಿಷಯಗಳ ಬಗ್ಗೆ ಅಧ್ಯಯನ ನಡೆಸಿ ವರದ ನೀಡಲು ಸಮಿತಿ ರಚನೆ ಮಾಡಿದ್ದರು. ಮುಖ್ಯಮಂತ್ರಿಗಳ ಆದೇಶದಂತೆ 2020 ಜನವರಿಯಿಂದಲೇ ಆಂಧ್ರ ಪ್ರದೇಶದ ಸಾರಿಗೆ ನೌಕರರನ್ನು ಸರ್ಕಾರಿ ನೌಕರರು ಎಂದು ಪರಗಣಿಸಲಾಗಿದೆ. ಸಮಿತಿ ಶಿಫಾರಸು ನೀಡಿದ ಬಳಿಕ ಸಾರಿಗೆ ನೌಕರರಿಗೆ ಸಿಗಬೇಕಾದ ಸೌಲಭ್ಯಗಳನ್ನು ನೀಡಲಿದೆ.
ತೆಲಂಗಾಣ ಹೋರಾಟಕ್ಕೆ ಮಣಿದಿದ್ದ ಕೆಸಿಆರ್:
ನಾನಾ ಬೇಡಿಕೆಗೆ ಈಡೇರಿಸಿ ತೆಲಂಗಾಣದಲ್ಲೂ ಸಾರಿಗೆ ನೌಕರರು ಅನಿಧಿಷ್ಠ 55 ದಿನ ಮುಷ್ಕರ ಕೈಗೊಂಡಿದ್ದರು. ಹಿಂಸಾಚಾರಕ್ಕೆ ತಿರುಗಿ ಕೆಲವರು ಮೃತಪಟ್ಟಿದ್ದರು. ನೌಕರರ ಮುಷ್ಕರಕ್ಕೆ ಮಣಿದ ಕೆಸಿಆರ್ ಸರ್ಕಾರ ನೌಕರರಿಗೆ ಬಂಪರ್ ಕೊಡುಗೆ ನೀಡಿದ್ದರು. ಬಜೆಟ್ ನಲ್ಲಿ ಸಾರಿಗೆ ನೌಕರರಿಗೆ ಪ್ರತಿ ವರ್ಷ ಸಾವಿರ ಕೋಟಿ ಮೀಸಲು, ಸಾರಿಗೆ ನೌಕರರು ಕೆಲಸದ ಅವಧಿಯಲ್ಲಿ ಮೃತಪಟ್ಟಲ್ಲಿ ಕುಟುಂಬಸ್ಥರಿಗೆ ಉದ್ಯೋಗ, ಮಹಿಳಾ ನೌಕರರಿಗೆ ರಾತ್ರಿ ಪಾಳಿ ಸ್ಥಗಿತ, ಮುಷ್ಕರದ ಅವಧಿಯ ವೇತನ ಪಾವತಿ, ಸಾರಿಗೆ ನೌಕರರಿಗೆ ಸರ್ಕಾರದಿಂದ ಪ್ರತ್ಯೇಕ ಗೃಹ ಯೋಜನೆ, ನೌಕರರ ಕುಟುಂಬಕ್ಕೆ ವಿಮೆ ಸೌಲಭ್ಯ ಸೇರಿದಂತೆ ಬಂಪರ್ ಆಫರ್ ನೀಡಿದ ಬಳಿಕ ಮುಷ್ಕರ ಸ್ಥಗಿತಗೊಂಡಿತ್ತು. ನೆರೆ ಎರಡು ರಾಜ್ಯಗಳ ಹೋರಾಟ ಯಶಸ್ವಿ ಹಿನ್ನೆಲೆಯಲ್ಲಿ ಇದೀಗ ನಮ್ಮ ರಾಜ್ಯದಲ್ಲಿ ಹೋರಾಟ ಶುರುವಾಗಿದ್ದು, ಇಲ್ಲಿಯೂ ಸಹ ಯಶಸ್ವು ಸಾಧಿಸುವ ವರೆಗೂ ಹೋರಾಟ ಕೈ ಬಿಡಿವುದಿಲ್ಲ ಎಂದು ಹೋರಾಟಗಾರರು ಸ್ಪಷ್ಟಪಡಿಸಿದ್ದಾರೆ.