ಅನರ್ಹ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು?
ಬೆಂಗಳೂರು, ಡಿಸೆಂಬರ್ 10 : 15 ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಮುಗಿದಿದೆ. ಬೆಂಗಳೂರು ನಗರದ ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದು ಮುಂದಿನ ರಾಜಕೀಯ ಬೆಳವಣಿಗೆ ಬಗ್ಗೆ ಕುತೂಹಲವನ್ನು ಉಂಟು ಮಾಡಿದೆ.
15 ಅನರ್ಹ ಶಾಸಕರ ಪೈಕಿ ಶಿವಾಜಿನಗರ ಕ್ಷೇತ್ರದ ರೋಷನ್ ಬೇಗ್ ಬಿಜೆಪಿಗೆ ಸೇರಿರಲಿಲ್ಲ. ಉಪ ಚುನಾವಣೆಯಿಂದಲೂ ಅವರು ದೂರ ಉಳಿದರು. ಈಗ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ ಗೆಲುವು ಕಂಡಿದ್ದಾರೆ.
ಶಿವಾಜಿನಗರದ ರೋಷನ್ ಬೇಗ್ ಏಕೆ ಬಿಜೆಪಿ ಸೇರುತ್ತಿಲ್ಲ?
ಒಂದು ಕಡೆ ಬಿಜೆಪಿಗೂ ಸೇರಿಲ್ಲ, ಮತ್ತೊಂದು ಕಡೆ ಶಿವಾಜಿನಗರದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಲ್ಲ. ಆದ್ದರಿಂದ, ಮಾಜಿ ಶಾಸಕ ರೋಷನ್ ಬೇಗ್ ಮುಂದಿನ ನಡೆ ಏನು ಎಂಬುದು ಕುತೂಹಲ ಕೆರಳಿಸಿದೆ. ಬಿಜೆಪಿಯಲ್ಲಿ ಅವರಿಗೆ ಸೂಕ್ತ ಸ್ಥಾನಮಾನ ಸಿಗಲಿದೆಯೇ? ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ರಿಜ್ವಾನ್ ಅರ್ಷದ್ 'ಕೈ' ಹಿಡಿದ ಶಿವಾಜಿನಗರ ಕ್ಷೇತ್ರದ ಮತದಾರ
ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ನ ರಿಜ್ವಾನ್ ಅರ್ಷದ್ 49,887 ಮತಗಳನ್ನು ಪಡೆದು 13,521 ಮತಗಳ ಅಂತರದಿಂದ ಬಿಜೆಪಿಯ ಎಂ. ಸರವಣರನ್ನು ಉಪ ಚುನಾವಣೆಯಲ್ಲಿ ಸೋಲಿಸಿದರು. ಸರವಣ 36,367 ಮತಗಳನ್ನು ಪಡೆದು ದ್ವಿತೀಯ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಐಎಂಎ ಹಗರಣ: ರೋಷನ್ ಬೇಗ್ ಗೆ ರಾಜ್ಯಪಾಲ ವಜುಭಾಯಿ ರಕ್ಷಣೆ?
ರೋಷನ್ ಬೇಗ್ ಬಿಜೆಪಿ ಸೇರಲಿಲ್ಲ
ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಅನರ್ಹ ಶಾಸಕರು ಬಿಜೆಪಿ ಸೇರಿದರು. ಆದರೆ,ರೋಷನ್ ಬೇಗ್ ಬಿಜೆಪಿ ಸೇರದ ಕಾರಣ ಉಪ ಚುನಾವಣೆಗೆ ಅವರು ಅಭ್ಯರ್ಥಿಯಾಗಲಿಲ್ಲ. ಪಕ್ಷ ಎಂ. ಸರವಣಗೆ ಟಿಕೆಟ್ ನೀಡಿತು. ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲು ಶ್ರಮ ಹಾಕುವುದಾಗಿ ರೋಷನ್ ಬೇಗ್ ಭರವಸೆ ನೀಡಿದ್ದರು.
ಉಪ ಚುನಾವಣೆ ಅಭ್ಯರ್ಥಿ ಬದಲು
ರೋಷನ್ ಬೇಗ್ ಬಿಜೆಪಿ ಸೇರದ ಕಾರಣ ಉಪ ಚುನಾವಣೆಗೆ ಅವರು ಅಭ್ಯರ್ಥಿಯಾಗಲಿಲ್ಲ. ಎಂ. ಸರವಣ ಅಭ್ಯರ್ಥಿಯಾದರು. ಯಡಿಯೂರಪ್ಪ ಭೇಟಿ ಮಾಡಿದ ರೋಷನ್ ಬೇಗ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವ ಭರವಸೆ ಕೊಟ್ಟರು. ಆದರೆ, ಉಪ ಚುನಾವಣೆಯಲ್ಲಿ ಕ್ಷೇತ್ರ ಕೈ ವಶವಾಯಿತು.
ಐಎಂಎ ಹಗರಣದ ಕಾರಣ?
ಮಾಜಿ ಸಚಿವ ರೋಷನ್ ಬೇಗ್ ಹೆಸರು ಐಎಂಎ ಹಗರಣದಲ್ಲಿ ಕೇಳಿ ಬಂದಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾದ ಬಳಿಕ ಹಗರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ. ಆದ್ದರಿಂದ, ರೋಷನ್ ಬೇಗ್ ಕ್ಲೀನ್ ಚಿಟ್ ಪಡೆಯುವ ತನಕ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳದಿರಲು ಬಿಜೆಪಿ ಹೈಕಮಾಂಡ್ ತೀರ್ಮಾನಿಸಿದೆ. ಈಗ ಉಪ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಬಿಜೆಪಿ ಸೋತ ಬಳಿಕ ರೋಷನ್ ಬೇಗ್ ನಡೆ ಕುತೂಹಲಕ್ಕೆ ಕಾರಣವಾಗಿದೆ.
ರೋಷನ್ ಬೇಗ್ ಪುತ್ರನಿಗೆ ಸ್ಥಾನ
ಬಿಜೆಪಿ ಮಾಜಿ ಸಚಿವ ರೋಷಬ್ ಬೇಗ್ ಬದಲು ಅವರ ಪುತ್ರನಿಗೆ ಸೂಕ್ತ ಸ್ಥಾನಮಾನ ನೀಡುವ ನಿರೀಕ್ಷೆ ಇದೆ. ಈ ಮೂಲಕ ರೋಷನ್ ಬೇಗ್ಗೆ ನೀಡಿದ ಮಾತು ಉಳಿಸಿಕೊಳ್ಳಬಹುದು. ರೋಷನ್ ಬೇಗ್ ರಾಜ್ಯಸಭಾ ಸದಸ್ಯತ್ವದ ಮೇಲೆ ಕಣ್ಣಿಟ್ಟಿದ್ದಾರೆ ಎಂಬ ಸುದ್ದಿಯೂ ಇದೆ.