ವಿಧಾನಸೌಧ ಸುತ್ತಮುತ್ತ ನೆಟ್ವರ್ಕ್ ಪ್ರಾಬ್ಲಂಗೆ ಕಾರಣ ಏನು?
ಬೆಂಗಳೂರು, ನವೆಂಬರ್ 18: ವಿಧಾನಸೌಧದ ಸುತ್ತಮುತ್ತಲಿನಲ್ಲಿರುವ ಸರ್ಕಾರಿ ಕಚೇರಿಗಳಲ್ಲೂ ಕೂಡ ನೆಟ್ವರ್ಕ್ ಸಮಸ್ಯೆ ವಿಪರೀತವಾಗಿ ಕಾಡುತ್ತಿದೆ.
ಕಂದಾಯ ಕಚೇರಿ, ವಿಶ್ವೇಶ್ವರಯ್ಯ ಕಾಲೇಜು, ಮಹಾರಾಣಿ ಕಾಲೇಜು, ಎಂಎಸ್ ಬಿಲ್ಡಿಂಗ್, ಬೆಸ್ಕಾಂ ಕಚೇರಿ, ವಿಧಾನಸೌಧ ಸೇರಿದಂತೆ ಹಲವು ಕಡೆ ನೆಟ್ವರ್ಕ್ ಸಮಸ್ಯೆ ಎದುರಾಗಿದೆ.
ವಿಧಾನಸೌಧ, ವಿಕಾಸಸೌಧಕ್ಕೆ ಮಾಧ್ಯಮಗಳ ನಿರ್ಬಂಧ
ಸರ್ಕಾರಿ ಕಚೇರಿಗಳಿರುವ ಪ್ರದೇಶಗಳಲ್ಲಿ ಖಾಸಗಿ ಟವರ್ಗಳನ್ನು ನಿರ್ಮಿಸಲು ಅವಕಾಶ ನೀಡದಿರುವ ಕಾರಣ ಈ ಸಮಸ್ಯೆಯನ್ನು ಎದುರಿಸಬೇಕಿದೆ. ಕೆಆರ್ ಸರ್ಕಲ್, ನೃಪತುಂಗ ರಸ್ತೆ, ವಿಧಾನಸೌಧ ಸುತ್ತಮುತ್ತಲಿರುವ ಕಾಲೇಜು, ಕಚೇರಿಗಳಲ್ಲಿ ಕರೆ ಮಾಡುವುದು, ಎಸ್ಎಂಎಸ್ ಕಳುಹಿಸುವುದು ಕೂಡ ಸಾಧ್ಯವಾಗುತ್ತಿಲ್ಲ.
ಈ ತೊಂದರೆ ಹಲವು ವರ್ಷಗಳಿಂದ ಇದೆ, ಒಂದು ಬೇಸಿಕ್ ಪಿಡಿಎಫ್ ಫೈಲ್ ಕೂಡ ಕಳುಹಿಸಲು ಸಾಧ್ಯವಾಗುತ್ತಿಲ್ಲ. ಆ ಪ್ರದೇಶದಲ್ಲಿ ಬಿಎಸ್ಎನ್ಎಲ್ ಬಿಟ್ಟು ಯಾವುದೇ ಮೊಬೈಲ್ ಟವರ್ಗಳು ಇಲ್ಲ ಎಂದು ಎಂಎಸ್ ಬಿಲ್ಡಿಂಗ್ ನ ನೌಕರರೊಬ್ಬರು ತಿಳಿಸಿದ್ದಾರೆ.
ಕೇವಲ ಬಿಎಸ್ಎನ್ಎಲ್ ಸಿಗ್ನಲ್ ಸಿಗುತ್ತದೆ. ಸಾಕಷ್ಟು ಬಾರಿ ಲ್ಯಾಂಡ್ಲೈನ್ ಬಳಕೆ ಮಾಡಲಾಗುತ್ತದೆ. ಕಂದಾಯ ಇಲಾಖೆ ಅಧಿಕಾರಿಗಳು ಸರಿಯಾದ ಮೊಬೈಲ್ ನೆಟ್ವರ್ಕ್ ಕಲ್ಪಿಸಿಕೊಡುವಂತೆ ಸರ್ಕಾರಕ್ಕೆ ಈಗಾಗಲೇ ಪತ್ರ ಬರೆದಿದ್ದಾರೆ.
ಅಲ್ಲಿ ಸುತ್ತಮುತ್ತಲಿರುವ ಕಾಲೇಜುಗಳ ಆಡಳಿತ ಮಂಡಳಿಯೂ ಕೂಡ ಖಾಸಗಿ ಟವರ್ ನಿರ್ಮಾಣಕ್ಕೆ ಜಾಗ ನೀಡಲು ಹಿಂದುಮುಂದು ನೋಡುತ್ತಿದ್ದಾರೆ. ಒಂದೊಮ್ಮೆ ಸರ್ಕಾರ ಪ್ರಶ್ನೆಮಾಡಿದರೆ ಎನ್ನುವ ಭಯ ಅವರಲ್ಲಿದೆ. ಅಲ್ಲೇ ಇರುವ ಯುವಿಸಿಇ ಕಾಲೇಜಿನಲ್ಲಿ ಆನ್ಲೈನ್ನಲ್ಲಿ ಅಸೈನ್ಮೆಂಟ್ ಸಬ್ಮಿಷನ್ ಮಾಡುವುದು ಕೂಡ ಕಷ್ಟವಾಗಿದೆ.