ಐಟಿ ದಾಳಿಗೆ ಹೆದರಿ ಆತ್ಮಹತ್ಯೆ: ರಮೇಶ್ ಡೆತ್ನೋಟ್ನಲ್ಲಿ ಏನಿದೆ?
ಬೆಂಗಳೂರು, ಅಕ್ಟೋಬರ್ 12: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ದಾಳಿಯ ಬಳಿಕ ಆಘಾತಗೊಂಡಿದ್ದ ಕಾಂಗ್ರೆಸ್ ಮುಖಂಡ ಜಿ ಪರಮೇಶ್ವರ್ ಅವರ ಆಪ್ತ ಸಹಾಯಕ ರಮೇಶ್ ಶನಿವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನೀಡಿದ ಕಿರುಕುಳವೇ ಅವರ ಆತ್ಮಹತ್ಯೆಗೆ ಕಾರಣ ಎಂದು ಕುಟುಂಬದವರು ಹಾಗೂ ವಿರೋಧಪಕ್ಷದ ನಾಯಕರು ಆರೋಪಿಸಿದ್ದಾರೆ.
ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಸಾಯಿ ಗ್ರೌಂಡ್ಸ್ ಸಮೀಪದ ಮರವೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ರಮೇಶ್ ಅವರ ಶವ ಪತ್ತೆಯಾಗಿದೆ. ಐಟಿ ದಾಳಿ ನಡೆದ ಬೆನ್ನಲ್ಲೇ ಅವರು ಆತ್ಮಹತ್ಯೆಯ ನಿರ್ಧಾರಕ್ಕೆ ಮುಂದಾಗಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ರಮೇಶ್ ಅವರು ತಮ್ಮ ಆಪ್ತರ ಬಳಿ ತಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿಕೊಂಡಿದ್ದರು. ತಮಗೆ ಐಟಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗುತ್ತಿಲ್ಲ ಎಂದೂ ಅಳಲು ತೋಡಿಕೊಂಡಿದ್ದರು ಎಂಬುದಾಗಿ ವರದಿಯಾಗಿದೆ.
ಐಟಿಯವರ ಕಿರುಕುಳದಿಂದಲೇ ರಮೇಶ್ ಆತ್ಮಹತ್ಯೆ: ಸಿದ್ದರಾಮಯ್ಯ
ಸಾಯುವ ತೀರ್ಮಾನ ತೆಗೆದುಕೊಳ್ಳುವ ಮುನ್ನ ರಮೇಶ್ ಡೆತ್ ನೋಟ್ ಬರೆದಿಟ್ಟಿದ್ದಾರೆ. ಅದರಲ್ಲಿ ನೇರವಾಗಿ ಯಾವುದೇ ಆರೋಪ ಮಾಡದೆ ಇದ್ದರೂ ಐಟಿ ದಾಳಿಯಿಂದ ಅವರು ತೀವ್ರ ಆಘಾತಕ್ಕೆ ಒಳಗಾಗಿರುವುದು ವ್ಯಕ್ತವಾಗುತ್ತದೆ.
ಕಾರ್ನಲ್ಲಿ ಡೆತ್ ನೋಟ್
ರಮೇಶ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಮರದ ಸಮೀಪದಲ್ಲಿಯೇ ತಮ್ಮ ಕಾರನ್ನು ನಿಲ್ಲಿಸಿದ್ದರು. ಈ ಕಾರ್ನಲ್ಲಿ ಅವರ ಆತ್ಮಹತ್ಯೆ ಪತ್ರ ದೊರಕಿದೆ. ಅದರಲ್ಲಿ ತಮ್ಮ ಆತ್ಮಹತ್ಯೆಯ ತೀರ್ಮಾನಕ್ಕೆ ಕಾರಣ ವಿವರಿಸಿದ್ದಾರೆ.
ಐಟಿ ದಾಳಿ ಬೆನ್ನಲ್ಲೇ ಪರಮೇಶ್ವರ್ ಆಪ್ತ ಸಹಾಯಕ ಆತ್ಮಹತ್ಯೆ
ಐಟಿ ದಾಳಿಯಿಂದ ದಿಗ್ಭ್ರಾಂತ
'ಎಲ್ಲರಿಗೂ ನಮಸ್ಕಾರ, ಮೊನ್ನೆ ನನ್ನ ಮನೆಯಲ್ಲಿ ನಡೆದ ಐಟಿ ದಾಳಿಯಿಂದ ನಾನು ದಿಗ್ಬ್ರಾಂತನಾಗಿದ್ದೇನೆ. ಮರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ಬಡವರು ಬಡವರಾಗಿಯೇ ಉಳಿಯಬೇಕೆಂಬ ಸಂಸ್ಕೃತಿಯಿಂದ ತುಂಬಾ ಚಡಪಡಿಸುತ್ತಿದ್ದೇನೆ.
ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ
ಮಾನ್ಯ ಐಟಿ ಅಧಿಕಾರಿಗಳೇ ನನ್ನ ಹೆಂಡತಿ ಮಕ್ಕಳಿಗೆ ತೊಂದರೆ ಕೊಡಬೇಡಿ. ಸೌಮ್ಯ ನನ್ನನ್ನು ಕ್ಷಮಿಸು. ಮಕ್ಕಳನ್ನು ಚೆನ್ನಾಗಿ ನೋಡಿಕೋ. ಲಕ್ಷ್ಮೀದೇವಿ, ಪದ್ಮಾ, ಸತೀಶ್ ನಿಮ್ಮೊಂದಿಗೆ ಹುಟ್ಟಿ ನಿಮಗೆ ಸಹಾಯ ಮಾಡಬೇಕೆಂಬ ನನ್ನ ಆಸೆ ಇಂದಿಗೆ ಕಮರಿದೆ.
ನನ್ನನ್ನು ಕ್ಷಮಿಸಿ
ನನ್ನ ಮಕ್ಕಳಿಗೆ ಉಚಿತ ವಿದ್ಯಾಭ್ಯಾಸ ನೀಡುತ್ತಿರುವ ವಿಎಸ್ಎಸ್ ಶಾಲೆಯವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈ ವಯಸ್ಸಿನಲ್ಲಿ ನಿಮ್ಮನ್ನೆಲ್ಲಾ ಸಾಕಬೇಕಾಗಿದ್ದ ನಾನು ನಿಮ್ಮೆಲ್ಲರನ್ನೂ ಬಿಟ್ಟು ಹೋಗುತ್ತಿದ್ದೇನೆ, ಕ್ಷಮಿಸಿ' ಎಂದು ಪತ್ರದಲ್ಲಿ ಬರೆದಿದ್ದಾರೆ.