ರಜೆ ಪರಿಷ್ಕರಣೆ, ನೀರಿನ ದರ ಏರಿಕೆ: ಸಂಪುಟ ಸಭೆಯ ಪ್ರಮುಖ ನಿರ್ಣಯಗಳು
ಬೆಂಗಳೂರು, ಜೂನ್ 6: ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ರಜೆ ಪರಿಷ್ಕರಣೆ, ಕುಡಿಯುವ ನೀರಿನ ದರ ಹೆಚ್ಚಳ ಸೇರಿದಂತೆ ಹಲವು ಮಹತ್ವದ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ರಾಜ್ಯ ಸರ್ಕಾರಿ ಗ್ರೂಪ್ 'ಸಿ' ಮತ್ತು 'ಡಿ' ದರ್ಜೆಯ ನೌಕರರ ವರ್ಗಾವಣೆಯಲ್ಲಿ ಪಾರದರ್ಶಕತೆ ತರಲು ಕೌನ್ಸಿಲಿಂಗ್ ವ್ಯವಸ್ಥೆ ಜಾರಿಗೊಳಿಸಲು ಕರಡು ಕಾನೂನಿಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣಬೈರೇಗೌಡ ಹೇಳಿದರು.
ಸಚಿವ ಸಂಪುಟ ಸಭೆಯ ನಂತರ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿಮಾತನಾಡಿದ ಅವರು ಗ್ರೂಪ್ 'ಸಿ' ಮತ್ತು 'ಡಿ' ದರ್ಜೆಯ ನೌಕರರು ವರ್ಗಾವಣೆ ಸಮಯದಲ್ಲಿ ಅನೇಕ ಅನನುಕೂಲತೆಗಳನ್ನು ಎದುರಿಸುತ್ತಿದ್ದಾರೆ. ಅದನ್ನು ನಿವಾರಿಸಲು ನಿಟ್ಟಿನಲ್ಲಿ ಕೌನ್ಸಲಿಂಗ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ ಇದರ ಮೂಲಕ ಇಡೀ ರಾಜ್ಯದಲ್ಲಿ ಜಿಲ್ಲಾವಾರು ಹಾಲಿ ಖಾಲಿ ಇರುವ ಹುದ್ದೆಗಳ ಸಮಾನ ಹಂಚಿಕೆಗೆ ಅನುಕೂಲವಾಗುತ್ತದೆ ಎಂದು ಅವರು ಹೇಳಿದರು.
ಸರ್ಕಾರಿ ನೌಕರರಿಗೆ ಡಬಲ್ ಧಮಾಕ: ಜಯಂತಿ ರಜೆಗೆ ಅಡ್ಡಿಯಿಲ್ಲ
ವರ್ಗಾವಣೆ ಸಮಯದಲ್ಲಿ ವೃಂದವಾರು ಹಂಚಿಕೆ, ಕನಿಷ್ಠ ಸೇವಾವಧಿಯನ್ನು ಸಹ ಪರಿಗಣಿಸಲಾಗುತ್ತದೆ ಎಂದು ಅವರು ತಿಳಿಸಿದರು. ಈ ಸಂಬಂಧ ವಿಧೇಯಕವನ್ನು ಮುಂದಿನ ವಿಧಾನಮಂಡಲದಲ್ಲಿ ಮಂಡಿಸಲಾಗುತ್ತದೆ ಎಂದು ಅವರು ಹೇಳಿದರು.
ರಜೆಗಳ ಪರಿಷ್ಕರಣೆಗೆ ಸಚಿವ ಸಂಪುಟ ಸಭೆ ಒಪ್ಪಿಗೆ
ಸರ್ಕಾರಿ ರಜೆಗಳ ಪರಿಷ್ಕರಣೆಗೆ ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಪ್ರತಿ ಎರಡನೇ ಶನಿವಾರ ಮತ್ತು ನಾಲ್ಕನೇ ಶನಿವಾರ ರಜೆ ನೀಡಲಾಗುವುದು ಬದಲಾಗಿ ಸರ್ಕಾರಿ ನೌಕರರಿಗೆ ನೀಡಲಾಗುತ್ತಿದ್ದ 15 ಸಾಂದರ್ಭಿಕ ರಜೆಯನ್ನು ಕಡಿತಗೊಳಿಸಿ 10ಕ್ಕೆ ಇಳಿಸಲಾಗುವುದು. ಆದರೆ ಯಾವುದೇ ಜಯಂತಿ ಅಥವಾ ಹಬ್ಬಗಳ ರಜೆಯನ್ನು ಕಡಿತ ಮಾಡುವುದಿಲ್ಲ ಎಂದು ಅವರು ಹೇಳಿದರು.
ಕೆಎಎಸ್ ಅಧಿಕಾರಿಗಳ ಸೇವಾ ಭದ್ರತೆ
1998ನೇ ಸಾಲಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದಿಂದ ನೇಮಕಗೊಂಡ ಕೆಎಎಸ್ ಅಧಿಕಾರಿಗಳ ಪರಿಷ್ಕೃತ ಆಯ್ಕೆ ಪಟ್ಟಿಯಿಂದ ಹಲವು ಅಧಿಕಾರಿಗಳಿಗೆ ಸೇವಾಭದ್ರತೆ ಸಿಗದೇ ಇರುವ ಕಾರಣದಿಂದ ಅವರಿಗೆ ಸೇವಾಭದ್ರತೆ ಒದಗಿಸಲು ಸರ್ಕಾರ 'Karnataka Civil Services (Protection of Service of Persons appionted in pursuance to final selection list Pulished by Selection authority) Ordinance 2019 ಅನ್ನು ಜಾರಿಗೆ ತರಲು ಕಳೆದ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು ಆದರೆ ಈ ಸುಗ್ರೀವಾಜ್ಞೆ ತರುವ ಸಂದರ್ಭದಲ್ಲಿ 1998ರ ನಂತರ ನೇಮಕಗೊಂಡ ಗೆಜೆಡೆಡ್ ಪ್ರೋಬೇಷನರ್ಸ್ ಅಧಿಕಾರಿಗಳ ಮುಂಬಡ್ತಿಗಾಗಲಿ, ಅವರ ಹಿತಾಸಕ್ತಿಗಾಗಲಿ ಧಕ್ಕೆಯಾಗದಂತೆ ಅಗತ್ಯ ಕ್ರಮಕೈಗೊಳ್ಳಲು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಕೊಪ್ಪಳ ವೈದ್ಯಕೀಯ ಕಾಲೇಜಿನಲ್ಲಿ 104 ಕೋಟಿ ರೂ ಕಾಮಗಾರಿ
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಹೊಸದಾಗಿ ನಿರ್ಮಿಸುತ್ತಿರುವ 450 ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ಕಟ್ಟಡದ ಆವರಣದಲ್ಲಿ ಹೆಚ್ಚುವರಿ ಕಾಮಗಾರಿಗಳನ್ನು ಒಳಗೊಂಡಂತೆ 104 ಕೋಟಿ ರೂ.ಗಳ ಕಾಮಗಾರಿ ಕೈಗೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ಕೋಲಾರ, ಚಿಕ್ಕಬಳ್ಳಾಪುರ ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರು
ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ 126 ಕೆರೆಗಳಿಗೆ ಸಂಸ್ಕರಿಸಿದ ತ್ಯಾಜ್ಯ ನೀರನ್ನು ಹರಿಸಿ ತುಂಬಿಸಲು ಈ ಹಿಂದೆ 1280 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಿತ್ತು. ಈ ಯೋಜನೆಯ 2ನೇ ಹಂತದಲ್ಲಿ 200 ರಿಂದ 250 ಕೆರೆಗಳಿಗೆ ನೀರು ಹರಿಸಿ ತುಂಬಿಸಲು 455 ಕೋಟಿ ರೂ.ಗಳ ಮೊತ್ತದ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಿದೆ.
ಕುಡಿಯುವ ನೀರು ಘಟಕ ನಿರ್ವಹಣೆಗೆ ಟೆಂಡರ್
ಗ್ರಾಮೀಣ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಒಟ್ಟು 18,582 ನೀರು ಶುದ್ಧೀಕರಣ ಘಟಕಗಳ ಸ್ಥಾಪನೆ ಮಾಡಲಾಗಿದೆ. ಇದರಲ್ಲಿ 16,000 ಕುಡಿಯುವ ನೀರು ಘಟಕಗಳ ನಿರ್ವಹಣಾ ಅವಧಿ ಮುಗಿದಿದೆ.
ಇವುಗಳ ಸಮರ್ಪಕ ನಿರ್ವಹಣೆಗಾಗಿ ಇನ್ನು ಮುಂದೆ ಪ್ರತಿ ತಾಲ್ಲೂಕಿಗೆ ಒಂದರಂತೆ ನಿರ್ವಹಣಾ ಪ್ಯಾಕೇಜ್ನ್ನು ಟೆಂಡರ್ ಮೂಲಕ ಅರ್ಹ ಸಂಸ್ಥೆಗಳಿಗೆ ಒದಗಿಸಲು ಗ್ರಾಮ ಪಂಚಾಯತ್ಗೆ ಅಧಿಕಾರ ನೀಡಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯತ್ಗಳೇ ನಿರ್ವಹಣೆ ಮಾಡಲು ನಿರ್ಧರಿಸಿದಲ್ಲಿ ಅದಕ್ಕೂ ಅವಕಾಶ ನೀಡಲಾಗುತ್ತದೆ. ಒಂದು ತಾಲ್ಲೂಕಿನ 100 ಕ್ಕಿಂತ ಹೆಚ್ಚು ಘಟಕಗಳಿದ್ದಲ್ಲಿ ಹೆಚ್ಚುವರಿ ಪ್ಯಾಕೇಜ್ ಸಹ ನೀಡಲಾಗುತ್ತದೆ.
ಪ್ರತಿ ಲೀಟರ್ ನೀರಿನ ಬೆಲೆ 25 ಪೈಸೆ ಏರಿಕೆ
ಪ್ರಸ್ತುತ ಪ್ರತಿ ಲೀಟರ್ಗೆ 10 ಪೈಸೆ ದರದಂತೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಆದರೆ ನಿರ್ವಹಣಾ ವೆಚ್ಚ 25 ಪೈಸೆ ಆಗುತ್ತಿದೆ, ಇದನ್ನು ಸರಿದುಗಿಸಲು ಕಾಲಕಾಲಕ್ಕೆ ಪ್ರತಿ ಲೀಟರ್ಗೆ 25 ಪೈಸೆ ಏರಿಕೆ ಮಾಡಲು ಮತ್ತು 5 ವರ್ಷಗಳ ಕಾಲ ನಿರ್ವಹಣೆ ಮತ್ತು ಕಾರ್ಯಾಚರಣೆ ನಿಗದಿಗೊಳಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ನ್ಯಾಣ್ಯಗಳ ಬದಲು ಸ್ಮಾರ್ಟ್ಕಾರ್ಡ್ ಬೂತ್
ರಾಜ್ಯದ ಗ್ರಾಮೀಣ ಜನ ವಸತಿಗಳಲ್ಲಿ ಅನುಷ್ಠಾನಗೊಳಿಸಿರುವ ನೀರು ಶುದ್ಧೀಕರಣ ಘಟಕಗಳ ಪೈಕಿ ನಾಣ್ಯದ ಬೂತ್ ಇರುವ ಕಡೆ ನಾನಾರೀತಿಯ ವ್ಯವಸ್ಥೆಗಳಿಗೆ ಹಾಗೂ ತಾಂತ್ರಿಕ ದೋಷಗಳು ಎದುರಾಗುತ್ತಿದೆ. ಆದ್ದರಿಂದ ನಾಣ್ಯಗಳ ಬೂತ್ಗಳ ಬದಲಾಗಿ ಸ್ಮಾರ್ಟ್ಕಾರ್ಡ್ ಬೂತ್ಗಳನ್ನು ಒಳವಡಿಸಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಈ ಎಲ್ಲಾ ಕಾರ್ಯಗಳಿಗಾಗಿ 5 ವರ್ಷಗಳ ಅವಧಿಗೆ 223.73 ಕೋಟಿ ರೂ.ಗಳನ್ನು ಒದಗಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.
ಗುತ್ತಿಗೆ ಆಧಾರದ ಉಪನ್ಯಾಸಕರಿಗೆ ಪಿಂಚಣಿ
ಉನ್ನತ ಶಿಕ್ಷಣ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಉಪನ್ಯಾಸಕರನ್ನು ಕೋರ್ಟ್ ಆದೇಶದ ಮೇರೆಗೆ ಖಾಯಂಗೊಳಿಸಲಾಗಿತ್ತು ಇವರಿಗೆ ಸೇವಾ ನಿವೃತ್ತಿಯ ನಂತರ ಪಿಂಚಣಿ ನೀಡಲು ಇಂದಿನ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.