ಪೊಲೀಸರಿಗೆ ವಾರದ ರಜೆ ಕಡ್ಡಾಯ: ಮೇಘರಿಖ್
ಬೆಂಗಳೂರು, ಜೂನ್ 03: ಪೊಲೀಸರ ಪ್ರತಿಭಟನೆ ಕೂಗಿಗೆ ಆರಂಭಿಕ ಜಯ ಸಿಕ್ಕಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಎಸ್.ಮೇಘರಿಖ್ 'ಪೊಲೀಸರಿಗೆ ವಾರದ ರಜೆ ಕಡ್ಡಾಯಗೊಳಿಸಿ' ಎಂಬ ಆದೇಶ ಹೊರಡಿಸಿದ್ದಾರೆ.
ಪೊಲೀಸರು ಇಟ್ಟಿರುವ ಬೇಡಿಕೆಯಲ್ಲಿ ವಾರದ ರಜೆಯೂ ಪ್ರಮುಖವಾದದ್ದು. ಇದೀಗ ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿವಿಲ್, ಸಂಚಾರ ಮತ್ತು ನಗರ ಸಶಸ್ತ್ರ ಮೀಸಲು ಪಡೆಯ ಎಲ್ಲ ಸಿಬ್ಬಂದಿಗೆ ಕಡ್ಡಾಯವಾಗಿ ವಾರದ ರಜೆ ನೀಡಬೇಕೆಂದು ಮೇಘರಿಖ್ ಗುರುವಾರ ಆದೇಶ ನೀಡಿದ್ದಾರೆ.[ನಯವಾದ ಮಾತಿಗೆ ಬಗ್ಗದ ಪೊಲೀಸರು ಕವನಕ್ಕೆ ಬಗ್ಗುವರೆ?]
ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಯಾವುದೇ ಕಾರಣಕ್ಕೂ ಸಿಬ್ಬಂದಿಯ ವಾರದ ರಜೆ ತಡೆಹಿಡಿಯುವಂತಿಲ್ಲ. ಒಂದು ವೇಳೆ ರಜಾ ದಿನವೂ ಕೆಲಸ ಮಾಡಬೇಕಾಗಿ ಬಂದರೆ, ಕೆಲಸ ಮಾಡಿದ ಸಿಬ್ಬಂದಿ ಹಿರಿಯ ಅಧಿಕಾರಿಗಳಿಂದ ಲಿಖಿತ ಪತ್ರ ಪಡೆದು ಅಂದೇ ದಿನದ ರಜೆ ಭತ್ಯೆ ಪಡೆಯಬಹುದು ಎಂದು ಕಮಿಷನರ್ ಸುತ್ತೋಲೆಯಲ್ಲಿ ಹೇಳಿದ್ದಾರೆ.[ಪ್ರತಿಭಟನೆಗೆ ಮುಂದಾದ ಪೊಲೀಸರ 31 ಬೇಡಿಕೆಗಳು]
'ನಗರ ಸಶಸ್ತ್ರ ಮೀಸಲು ಪಡೆಗೆ ಹೊಸದಾಗಿ 300 ಕಾನ್ಸ್ಟೆಬಲ್ಗಳ ನೇಮಕವಾಗಿದೆ. ಅವರನ್ನು ಗಸ್ತು ಕಾರ್ಯಕ್ಕೆ ಬಳಸಿಕೊಳ್ಳಲು ನಿರ್ಧರಿಸಿಕೊಳ್ಳಲಾಗಿದೆ. ಇದರಿಂದ ಸಿಬ್ಬಂದಿಗೆ ಒತ್ತಡ ಕಡಿಮೆ ಆಗಲಿದೆ. ಹಾಗೆಯೇ ಗೃಹ ಇಲಾಖೆಯಿಂದ ಹೊಸದಾಗಿ 400 ಹೊಯ್ಸಳ ವಾಹನಗಳು ಮಂಜೂರಾಗಿದ್ದು, ಗಸ್ತು ಕೆಲಸ ಸುಲಭವಾಗಲಿದೆ ಎಂದು ಮೇಘರಿಖ್ ತಿಳಿಸಿದ್ದಾರೆ.[ಎಸ್ಮಾ ಎಂದರೇನು? ಜಾರಿಯಾದರೆ ಪರಿಣಾಮ ಏನಾಗತ್ತೆ?]
ಜೂನ್ 4 ರಂದು ರಾಜ್ಯದ ಪೊಲೀಸರು ಸಾಮೂಹಿಕ ರಜೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಪ್ರತಿಭಟನೆ ಮಾಡದಂತೆ ಎಚ್ಚರಿಕೆ ನೀಡಿದ್ದ ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ಸಿಬ್ಬಂದಿ ಮೇಲೆ ಎಸ್ಮಾ ಸಹ ಜಾರಿ ಮಾಡಿದೆ.