ಕಾನೂನು ಪಾಲನೆ ಎಲ್ಲರ ಪರಮ ಕರ್ತವ್ಯವಾಗಬೇಕು: ಅಬ್ಬೂರು ರಾಜಶೇಖರ್
ಬೆಂಗಳೂರು, ನ. 05: ಕಾನೂನು ಪಾಲನೆ ಎಲ್ಲರ ಪರಮ ಕರ್ತವ್ಯವಾಗಬೇಕು. ಕೊರೊನಾ ಸಂದರ್ಭದಲ್ಲಿ ಮಾಸ್ಕ್ ಧರಿಸುವುದರಿಂದ ವಾಯು ಮಾಲಿನ್ಯದಿಂದ ಉಂಟಾಗುತ್ತಿದ್ದ ಶ್ವಾಸಕೋಶ ಸಂಬಂಧಿಸಿತ ಕಾಯಿಲೆಗಳು ಕಡಿಮೆಯಾಗಿವೆ ಎಂದು ಹಿರಿಯ ಪತ್ರಕರ್ತ ಅಬ್ಬೂರು ರಾಜಶೇಖರ್ ಅವರು ಹೇಳಿದ್ದಾರೆ. ಯಶವಂತಪುರ ಪ್ರಾದೇಶಿಕ ಸಾರಿಗೆ ಕಚೇರಿಯಲ್ಲಿ ವಾಯುಮಾಲಿನ್ಯ ನಿಯಂತ್ರಣ ಮಾಸಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊರೊನಾ ಸಂಕಷ್ಟದ ನಂತರವೂ ಮಾಸ್ಕ್ ಧರಿಸುವುದನ್ನು ಕಡ್ಡಾಯವಾಗಿ ಪಾಲನೆ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದರು.
ಅನಿವಾರ್ಯ ಸಂದರ್ಭಗಳಲ್ಲದೆ ಸಣ್ಣಪುಟ್ಟ ಕೆಲಸಗಳಿಗೂ ಸ್ವಂತ ವಾಹನ ಬಳಸುವ ಬದಲು ಸಮೂಹ ಸಾರಿಗೆಯನ್ನು ಹೆಚ್ಚಾಗಿ ಬಳಸಿದರೆ ಪರಿಸರ ಮಾಲಿನ್ಯ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಸಾಧ್ಯವಿದೆ ಎಂದು ಯಶವಂತಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ಆರ್. ಮಂಜುನಾಥ್ ಅವರು ಹೇಳಿದರು. ಕಾರ್ ಪೂಲಿಂಗ್, ಬಸ್, ರೈಲುಗಳಂತಹ ಸಮೂಹ ಸಾರಿಗೆಯನ್ನು ಹೆಚ್ಚು ಬಳಸಬೇಕು. ಸಿಂಗ್ನಲ್ಗಳಲ್ಲಿ ಇಂಜಿನ್ ಆಫ್ ಮಾಡಬೇಕು. ವೇಗ ಮಿತಿಯನ್ನು ವೈಜ್ಞಾನಿಕವಾಗಿ ಪಾಲನೆ ಮಾಡಬೇಕು. ಈ ಮೂಲಕ ವಾಯು ಹಾಗೂ ಶಬ್ದ ಮಾಲಿನ್ಯವನ್ನು ನಿಯಂತ್ರಿಸಬಹುದು ಎಂದರು.
Recommended Video
ವಾಯುಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ ವಾಹನಗಳನ್ನು ಪ್ರಾಮಾಣಿಕವಾಗಿ ತಪಾಸಣೆ ಮಾಡಿ ಮಾಲಿನ್ಯದ ಪ್ರಮಾಣ ಹೆಚ್ಚಿದ್ದರೆ ವಾಹನದ ನಿರ್ವಹಣೆಯನ್ನು ಸೂಕ್ತ ರೀತಿಯಲ್ಲಿ ಮಾಡುವಂತೆ ಸೂಚನೆ ನೀಡಬೇಕು. ಆ ಮೂಲಕ ವಾಯುಮಾಲಿನ್ಯ ನಿಯಂತ್ರಣಕ್ಕೆ ಅಳಿಲು ಸೇವೆ ಸಲ್ಲಿಸಬೇಕು. ಮರ, ಗಿಡಗಳನ್ನು ಹೆಚ್ಚಾಗಿ ಬೆಳೆಸಬೇಕು. ಮಕ್ಕಳಲ್ಲಿ ಕಾನೂನಿನ ಅರಿವು ಮೂಡಿಸಬೇಕು ಎಂದು ಸಾರಿಗೆ ಅಧಿಕಾರಿ ಆರ್ ಮಂಜುನಾಥ್ ಹೇಳಿದರು.