ಬೆಡ್ ಬೆಂಕಿ ಹಾಕಿ ಸುಡ್ತೀವಿ, ಕಾಟ್ ಬಳಸಿಕೊಳ್ಳುತ್ತೇವೆ: ಡಿಕೆಶಿಗೆ ಸಿಎಂ ಬಿಎಸ್ವೈ
ಬೆಂಗಳೂರು, ಜುಲೈ 21: ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯವನ್ನು ಉದ್ದೇಶಿಸಿ ಇಂದು (ಜು 21) ಮಾತನಾಡಿದರು. ಲಾಕ್ ಡೌನ್ ಇನ್ನು ಮುಂದೆ ಇರುವುದಿಲ್ಲ ಎಂದು ಸ್ಪಷ್ಟ ಪಡಿಸಿದರು.
Recommended Video
ಭಾಷಣದ ಆರಂಭದಲ್ಲಿ, ಮೊದಮೊದಲು ವಿರೋಧ ಪಕ್ಷದ ನಾಯಕರ ಹೆಸರನ್ನು ಹೇಳಲು ತಡಪಡಿಸಿದ ಸಿಎಂ ಬಿಎಸ್ವೈ, ಅದಾದ ನಂತರ, ಕೋವಿಡ್ ನಿಯಂತ್ರಿಸಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್, ಎಚ್.ಡಿ.ಕುಮಾರಸ್ವಾಮಿ ಮತ್ತು ಮಾಧ್ಯಮಗಳ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ರಾಜ್ಯಾದ್ಯಂತ ಲಾಕ್ಡೌನ್: ಸಿಎಂ ಕೊಟ್ಟ ಸಂಪೂರ್ಣ ಮಾಹಿತಿ ಇಲ್ಲಿದೆ!
"ಇಂದು ಸಿದ್ದರಾಮಯ್ಯನವರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಸಿದ್ಧವಾಗುತ್ತಿರುವ ಕೊರೊನಾ ಚಿಕಿತ್ಸಾ ಕೇಂದ್ರಕ್ಕೆ ಭೇಟಿ ನೀಡಿದ್ದಾರೆ. ವಿರೋಧ ಪಕ್ಷದ ನಾಯಕರಾಗಿ ಅವರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಅವರು ನೀಡುವ ಸಲಹೆಗಳನ್ನು ಸ್ವೀಕರಿಸಲು ಸಿದ್ದರಿದ್ದೇವೆ"ಎಂದು ಬಿಎಸ್ವೈ, ಹೇಳಿದರು.
"ಡಿ.ಕೆ.ಶಿವಕುಮಾರ್, ಕೋವಿಡ್ ಆರೈಕೆ ಕೇಂದ್ರಕ್ಕೆ ಬಳಸಲಾಗುವ ಮಂಚ, ಹಾಸಿಗೆಯ ಬಗ್ಗೆ ಮಾತನಾಡಿದ್ದಾರೆ. ನಾವು, ಕೊರೊನಾ ರೋಗಿಗಳು ಬಳಸುವ ಬೆಡ್ ಅನ್ನು ಬೆಂಕಿ ಹಾಕಿ ಸುಡುತ್ತೇವೆ. ಮಂಚವನ್ನು ಸರಕಾರೀ ವಸತಿ ನಿಲಯಗಳಿಗೆ ಬಳಸಿಕೊಳ್ಳುತ್ತೇವೆ"ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.
"ಕೋವಿಡ್ ರೋಗಿಗಳು ಬಳಸುವ ಹಾಸಿಗೆಗಳನ್ನು ಸರ್ಕಾರಿ ಹಾಸ್ಟೆಲ್ಗಳಿಗೆ ವಿತರಿಸುವ ಸರ್ಕಾರದ ನಡೆ ಅಮಾನವೀಯ. ಸರ್ಕಾರ ಈ ಹಾಸಿಗೆಗಳನ್ನು ಮಂತ್ರಿಗಳು, ಶಾಸಕರು, ಅಧಿಕಾರಿಗಳಿಗೆ ನೀಡಲಿ. ನಾವು ಸರ್ಕಾರದ ಈ ಕ್ರಮದ ವಿರುದ್ಧ ಹೋರಾಟ ರೂಪಿಸುತ್ತೇವೆ. ಪೋಷಕರು, ವಿದ್ಯಾರ್ಥಿಗಳು ಯುವಕರಿಗೂ ಸಹ ಧ್ವನಿ ಎತ್ತಲು ಮನವಿ ಮಾಡುತ್ತೇನೆ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದರು.
ಬೆಂಗಳೂರು ಸೇರಿದಂತೆ ರಾಜ್ಯದ ಯಾವ ಜಿಲ್ಲೆಗಳಲ್ಲೂ ಲಾಕ್ಡೌನ್ ಇಲ್ಲ
"20,000 ಹಾಸಿಗೆಗಳನ್ನು ಖರೀದಿಸಿ, ಕೋವಿಡ್ ರೋಗಿಗಳ ಚಿಕಿತ್ಸೆ ಬಳಸಿದ ಬಳಿಕ ಸರ್ಕಾರಿ ಹಾಸ್ಟಲ್ ಗಳಿಗೆ ಕಳುಹಿಸಬೇಕು ಎಂಬ ಅಧಿಕಾರಿಗಳ ಸಲಹೆಗೆ ಸರ್ಕಾರ ಒಪ್ಪಿಗೆ ನೀಡಿದೆ. ಇಂಥಹ ಸಲಹೆ ಕೊಟ್ಟ ಅಧಿಕಾರಿಗಳಿಗೆ ಮಾನವೀಯತೆ ಇದೆಯೇ? ಆಳುವವರಿಗೆ ಬುದ್ಧಿವಂತಿಕೆ ಇಲ್ಲದಿದ್ದರೂ ಕನಿಷ್ಠ ಪ್ರಜ್ಞಾವಂತಿಕೆ ಇರಬೇಕು"ಎಂದು ಡಿಕೆಶಿ, ಸರಕಾರದ ವಿರುದ್ದ ಕಿಡಿಕಾರಿದ್ದರು.