ಮಾಫಿಯಾ ರಾಜ್ ಕಿತ್ತು ಬಿಸಾಡುತ್ತೇವೆ : ಅನಂತ್ ಕುಮಾರ್
Recommended Video
ಬೆಂಗಳೂರು, ಮಾರ್ಚ್ 02 : 'ಬೆಂಗಳೂರು ರಕ್ಷಿಸಿ' ಪಾದಯಾತ್ರೆ ಬೆಂಗಳೂರು ನಗರದ ಗಲ್ಲಿಗಲ್ಲಿಗಳಲ್ಲಿಯೂ ಸಂಚರಿಸಲಿದೆ. ಬೆಂಗಳೂರನ್ನು ಆಳುತ್ತಿರುವ ಮಾಫಿಯಾ ರಾಜ್ ಅನ್ನು ಬೇರು ಸಹಿತ ಕಿತ್ತೊಗೆಯುತ್ತೇವೆ. ಸಿದ್ದರಾಮಯ್ಯ ಸರಕಾರದ ಆಲಸ್ಯ, ಉದಾಸೀನತೆ ಮತ್ತು ನಿರ್ಲಕ್ಷತೆಯನ್ನು ಕಿತ್ತು ಬಿಸಾಡುತ್ತೇವೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಅವರು ಅಬ್ಬರಿಸಿದ್ದಾರೆ.
ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಸ್ಥಾನದಿಂದ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಯಲ್ಲಿ ಭಾಗವಹಿಸಿ ಕೇಂದ್ರ ರಸಗೊಬ್ಬರ ಸಚಿವ, ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಅವರು, ಬಿಜೆಪಿಗೆ ಅಧಿಕಾರ ನೀಡಿ ನಾವು ಬೆಂಗಳೂರನ್ನು ವಿಶ್ವದರ್ಜೆಯ ನಗರವನ್ನಾಗಿ ಮಾಡುತ್ತೇವೆ ಎಂದು ಭಾಷಣದಲ್ಲಿ ಶುಕ್ರವಾರ ಹೇಳಿದರು.
ಬಿಜೆಪಿಯ 'ಬೆಂಗಳೂರು ರಕ್ಷಿಸಿ' ಪಾದಯಾತ್ರೆಗೆ ಚಾಲನೆ
ಈ ಪಾದಯಾತ್ರೆಯಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಮತ್ತು ಕರ್ನಾಟಕದ ಉಸ್ತುವಾರಿಯನ್ನು ವಹಿಸಿರುವ ಪ್ರಕಾಶ್ ಜಾವ್ಡೇಕರ್, ಮಾಜಿ ಉಪಮುಖ್ಯಮಂತ್ರಿ ಆರ್ ಅಶೋಕ್, ಅರವಿಂದ್ ಲಿಂಬಾವಳಿ, ಮಲ್ಲೇಶ್ವರದ ಶಾಸಕ ಡಾ. ಅಶ್ವತ್ಥ ನಾರಾಯಣ, ಬಸವನಗುಡಿ ಶಾಸಕ ರವಿ ಸುಬ್ರಮಣ್ಯ, ಬಸವನಗುಡಿಯಲ್ಲಿ ಟಿಕೆಟ್ಗೆ ಯತ್ನಿಸುತ್ತಿರುವ ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ, ಜಯನಗರದ ಶಾಸಕ ವಿಜಯ್ ಕುಮಾರ್ ಮುಂತಾದವರು ಭಾಗವಹಿಸಿದ್ದರು.
In Pics : ರಾಜ್ಯ ಸರಕಾರದ ವಿರುದ್ಧ ಬೆಂಗಳೂರು ರಕ್ಷಿಸಿ ಪಾದಯಾತ್ರೆ
ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಲ್ಲಿ 'ಬೆಂಗಳೂರು ರಕ್ಷಿಸಿ' ಅಭಿಯಾನವನ್ನು ಬಿಜೆಪಿ ನಡೆಸಲಿದೆ. ಶುಕ್ರವಾರ ಸಂಜೆ, ಯುಬಿ ಸಿಟಿಯ ಗಲಾಟೆಯಿಂದಾಗಿ ವಿವಾದದ ಸುಳಿಗೆ ಸಿಲುಕಿರುವ ಕಾಂಗ್ರೆಸ್ ಶಾಸಕ ಎನ್ ಎ ಹ್ಯಾರಿಸ್ ಕ್ಷೇತ್ರ ಶಾಂತಿನಗರಕ್ಕೆ ಲಗ್ಗೆ ಇಡಲಿದೆ ಬಿಜೆಪಿ. ಹ್ಯಾರಿಸ್ ಅವರ ಮಗ ಮೊಹಮ್ಮದ್ ನಲಪಾಡ್ ಪಬ್ ನಲ್ಲಿ ವಿದ್ವತ್ ಎಂಬ ಯುವಕನಿಗೆ ಮಾರಣಾಂತಿಕ ಹಲ್ಲೆ ಮಾಡಿದ್ದ.
ಗೂಂಡಾಗಿರಿಯಿಂದ ಮೋದಿಗಿರಿಗೆ ಬೆಂಗಳೂರು
ಗೂಂಡಾಗಿರಿಯಿಂದ ಮೋದಿಗಿರಿಗೆ ಬೆಂಗಳೂರು ಪರಿವರ್ತನೆ ಆಗಬೇಕಾಗಿದೆ. ಬೆಂಗಳೂರು ಹೊತ್ತಿ ಉರಿಯುತ್ತಿದ್ದಾಗ, ಸಿದ್ದರಾಮಯ್ಯ ನಿರ್ಲಿಪ್ತತೆಯಿಂದ ಇದ್ದರು. ಸಿದ್ದರಾಮಯ್ಯ ಅವರು ಕೆಂಪೇಗೌಡರ ಗೌರವಕ್ಕೇ ಧಕ್ಕೆ ತಂದಿದ್ದಾರೆ. ಪ್ರತಿಯೊಂದು ಟ್ರಾಫಿಕ್ ಜಾಮ್ ನಲ್ಲಿ ಸಿಲುಕಿಕೊಂಡವರು ಸಿದ್ದರಾಮಯ್ಯ ಅವರಿಗೆ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅನಂತ್ ಕುಮಾರ್ ಅವರು ಕಿಡಿ ಕಾರಿದರು.
'ಸಿದ್ದ ಬಿದ್ದ' ಮಾತುಗಳೇ ಪ್ರತಿಧ್ವನಿಸುತ್ತಿದೆ
ಈ ಸಂದರ್ಭದಲ್ಲಿ ಮಾತನಾಡಿದ ಪ್ರಕಾಶ್ ಜಾವ್ಡೇಕರ್ ಅವರು, ಕರ್ನಾಟಕದಲ್ಲಿ ಕಾಂಗ್ರೆಸ್ ಎಲ್ಲಿದೆ? ಇಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಕಾಂಗ್ರೆಸ್ಸಿಗೆ ಇದೇ ಗತಿ ಆಗುತ್ತಿದೆ. ಇಡೀ ಬೆಂಗಳೂರಲ್ಲಿ 'ಸಿದ್ದ ಬಿದ್ದ' ಎಂಬ ಮಾತುಗಳೇ ಪ್ರತಿಧ್ವನಿಸುತ್ತಿದೆ. ಬೆಂಗಳೂರನ್ನು ಮತ್ತೆ ಮೊದಲಿನಿಂದ ಕಟ್ಟಬೇಕಾಗಿದೆ. ಸಿಟಿಯಿಂದ ಗೂಂಡಾ ರಾಜ್ಯ ನಿರ್ನಾಮವಾಗಬೇಕು. ಬೆಂಗಳೂರನ್ನು ರಕ್ಷಿಸಲು ಎಲ್ಲರೂ ಕೈಜೋಡಿಸೋಣ ಎಂದರು.
ಡ್ರಗ್, ಟ್ಯಾಂಕರ್, ಬಿಲ್ಡರ್, ಮರಳು ಮಾಫಿಯಾ
ಮಹದೇವಪುರದ ಶಾಸಕ ಅರವಿಂದ ಲಿಂಬಾವಳಿ ಅವರು, ಡ್ರಗ್, ಟ್ಯಾಂಕರ್, ಬಿಲ್ಡರ್, ಮರಳು ಮಾಫಿಯಾ ಇಡೀ ಬೆಂಗಳೂರನ್ನು ಹಾಳುಗೆಡವಿವೆ. ಉತ್ತಮ ಅವಕಾಶ ಹುಡುಕಿಕೊಂಡು ಎಂಎನ್ಸಿಗಳು ಬೆಂಗಳೂರು ಬಿಟ್ಟು ನಿರ್ಗಮಿಸುತ್ತಿದ್ದಾರೆ. ಕಳೆದ 5 ವರ್ಷಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿ ನಿಂತ ನೀರಾಗಿದೆ. ಟ್ರಾಫಿಕ್ ಬೆಂಗಳೂರಿನ ಅತೀದೊಡ್ಡ ತಲೆನೋವಾಗಿದೆ ಎಂದು ಕಾಂಗ್ರೆಸ್ಸನ್ನು ಜಾಲಾಡಿದರು.
ಬೆಂಗಳೂರು 15 ವರ್ಷಗಳಷ್ಟು ಹಿಂದೆ ಹೋಗಿದೆ
ಬಸವನಗುಡಿಯ ಶಾಸಕ ರವಿ ಸುಬ್ರಮಣ್ಯ ಅವರು, ಸಿದ್ದರಾಮಯ್ಯನವರ ಉದಾಸೀನತೆಯಿಂದಾಗಿ ಬೆಂಗಳೂರು ನರಳಾಡುತ್ತಿದೆ. ಕಳೆದ 5 ವರ್ಷಗಳ ಆಡಳಿತದಿಂದಾಗಿ ಬೆಂಗಳೂರು 15 ವರ್ಷಗಳಷ್ಟು ಹಿಂದೆ ಹೋಗಿದೆ. ಕಾಂಗ್ರೆಸ್ಸನ್ನು ಕಿತ್ತೊಗೆಯಲು ಮತ್ತು ನಗರವನ್ನು ಮತ್ತೆ ಮೊದಲಿದ್ದ ಹಾಗೆ ನಿರ್ಮಿಸಲು ಬೆಂಗಳೂರಿಗೆ ಮತ್ತೊಂದು ಅವಕಾಶ ಸಿಕ್ಕಿದೆ ಎಂದು ಸಿದ್ದರಾಮಯ್ಯನವರು ವಿರುದ್ಧ ಕೆಂಡ ಕಾರಿದರು.
ಇಂದು ಅಪರಾಧಗಳ ನಗರ
ರೋಗ ತರುವ ಧೂಳಿನಿಂದ, ಕಿತ್ತೆದ್ದ ಫುಟ್ ಪಾತ್ ಗಳಿಂದ, ಅತ್ಯಾಚಾರಿಗಳಿಂದ, ಮರಗಳ ನಾಶದಿಂದ, ಕುಡಿಯುವ ನೀರಿನ ಕೊರತೆಯಿಂದ 'ಬೆಂಗಳೂರನ್ನು ರಕ್ಷಿಸಿ' ಎಂಬ ಭಿತ್ತಿಚಿತ್ರಗಳನ್ನು ಹಿಡಿದುಕೊಂಡು ನೂರಾರು ಬಿಜೆಪಿ ಕಾರ್ಯಕರ್ತರು ಬೆಂಗಳೂರಿನ ಬೀದಿಗಿಳಿದಿದ್ದಾರೆ. ಅಂದಿನ ಉದ್ಯಾನ ನಗರಿ ಇಂದು ಅಪರಾಧಗಳ ನಗರವಾಗಿದೆ ಎಂಬ ಬ್ಯಾನರ್ ಹಿಡಿದುಕೊಂಡು ಕಾಂಗ್ರೆಸ್ ವಿರುದ್ಧ ಯುದ್ಧಕ್ಕೆ ಇಳಿದಿದ್ದಾರೆ.
ಬಿಜೆಪಿ ಪಾದಯಾತ್ರೆ ಆರಂಭ, ಟ್ರಾಫಿಕ್ ಜಾಮ್ ಎದುರಿಸಿ