ಜಲಮಂಡಳಿ ಕಾಮಗಾರಿ ಲೋಪ: ಎಲ್ & ಟಿ ಕಂಪೆನಿ ವಿರುದ್ಧ ಕ್ರಮದ ಎಚ್ಚರಿಕೆ
ಬೆಂಗಳೂರು, ಮೇ 27: ಎಲ್ & ಟಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ. ಹೀಗಿದ್ದರೂ ಅವರಿಂದಾದ ಕಾಮಗಾರಿಗಳಿಗೆ ಬಿಲ್ ಅನ್ನು ಹೇಗೆ ಪಾಸ್ ಮಾಡಲಾಗುತ್ತಿದೆ? ನಮ್ಮ ತಕರಾರುಗಳಿಗೆ ಅವರು ಸ್ಪಂದಿಸದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಎಚ್ಚರಿಕೆ ನೀಡಿದರು.
ಯಶವಂತಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಬಿಬಿಎಂಪಿಗೆ ಸೇರ್ಪಡೆಗೊಂಡ 110 ಹಳ್ಳಿ ಪ್ರದೇಶಗಳಲ್ಲಿ ಹಾಲಿ ಪ್ರಗತಿಯಲ್ಲಿರುವ ಕಾವೇರಿ ಕುಡಿಯುವ ನೀರಿನ ಸಂಪರ್ಕ ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸಚಿವರು ಎಚ್ಚರಿಕೆ ನೀಡಿದರು.
ಸಚಿವ ಸೋಮಶೇಖರ್ ಮನವಿಗೆ ಸ್ಪಂದಿಸಿದ ಸುಧಾ ಮೂರ್ತಿ
ಒಂದು ಕಾಲದಲ್ಲಿಎಲ್ & ಟಿ ಕಂಪನಿಯೆಂದರೆ ಒಳ್ಳೆಯ ಹೆಸರಿತ್ತು. ಈಗೇಕೆ ಕಾಮಗಾರಿಗಳ ಅನುಷ್ಠಾನದಲ್ಲಿ ಉದಾಸೀನ ತೋರಲಾಗುತ್ತಿದೆ. ಇಂಥವುಗಳನ್ನು ನಾನು ಸಹಿಸಲಾರೆ. ಕಾಮಗಾರಿಗಳ ತ್ವರಿತ ಅನುಷ್ಠಾನಕ್ಕೆ ಎರಡು ಇಲಾಖೆಗಳ ಇಂಜಿನಿಯರ್ ಗಳು ಸಮನ್ವಯ ಸಾಧಿಸಿ ಕೆಲಸ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಮಣ್ಣು ಸಾಗಿಸದಿದ್ದರೆ ದಂಡ
110 ಹಳ್ಳಿ ವ್ಯಾಪ್ತಿಯಲ್ಲಿ ಎಲ್ & ಟಿ ವತಿಯಿಂದ ಕೈಗೊಂಡಿರುವ ಒಳಚರಂಡಿ ಕಾಮಗಾರಿಯ ಗುಣಮಟ್ಟ ಸರಿಯಾಗಿಲ್ಲ. ಬಿಬಿಎಂಪಿ ಸಹಾವಾಣಿಗೆ ಜನ ಕರೆ ಮಾಡಿ ಸಾಕಷ್ಟು ದೂರುಗಳನ್ನು ನೀಡುತ್ತಿದ್ದಾರೆ. ತಮಗೆ ಇದರಿಂದ ತೊಂದರೆಯಾಗುತ್ತಿದೆ. ಪರಿಹಾರ ನೀಡಿ ಎಂದು ಸಾರ್ವಜನಿಕರು ಅಳಲು ತೋಡಿಕೊಳ್ಳುತ್ತಿದ್ದಾರೆ. ಒಳಚರಂಡಿ ಪೈಪ್ ಲೈನ್ ಕಾಮಗಾರಿ ಮುಗಿದ ನಂತರ ಒಂದು ಬಾರಿ ಮಣ್ಣು ಹಾಕಿ ಮತ್ತು ವಾರದ ಬಳಿಕ ಪುನಃ ಅದರ ಮೇಲೆ ಇನ್ನೊಂದು ಬಾರಿ ಮಣ್ಣು ಹಾಕಿ ಸಮತಟ್ಟು ಮಾಡಲಾಗುತ್ತದೆ. ಇಷ್ಟಾದರೂ ಅಲ್ಲಿ ಮಣ್ಣು ಉಳಿದಿರುತ್ತದೆ. ಆದರೆ, ಆ ಮಣ್ಣನ್ನು ತೆಗೆದುಕೊಂಡು ಬೇರೆಡೆ ಹಾಕುವ ಕೆಲಸವನ್ನು ಮಾಡದೇ ಅಲ್ಲಿಯೇ ಬಿಟ್ಟು ಹೋಗಲಾಗಿರುತ್ತದೆ. ಇದರಿಂದ ಸಾರ್ವಜನಿಕ ಸಂಚಾರಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಇನ್ನು ಮುಂದೆ ಕಾಮಗಾರಿ ನಡೆದು 15 ದಿನಗಳ ನಂತರ ಮಣ್ಣನ್ನು ಹೊತ್ತೊಯ್ಯದಿದ್ದರೆ ಎಲ್ & ಟಿ ಗುತ್ತಿಗೆದಾರರಿಗೆ 10 ಸಾವಿರ ರೂ. ದಂಡ ವಿಧಿಸುವಂತೆ ಬಿಬಿಎಂಪಿ ಅಧಿಕಾರಿಗಳಿಗೆ ಜಲಮಂಡಳಿ ಅಧ್ಯಕ್ಷರಾದ ತುಷಾರ್ ಗಿರಿನಾಥ್ ಸೂಚನೆ ನೀಡಿದರು.
ಅಮಾನತು ಮಾಡುವ ಎಚ್ಚರಿಕೆ
ಆರ್ ಸಿ ಚೇಂಬರ್ ಹಾಗೂ ಮ್ಯಾನ್ ಹೋಲ್ ಸರಿ ಮಾಡದೇ ಮುಂದಿನ ಒಳಚರಂಡಿ ಪೈಪ್ ಲೈನ್ ಅಳವಡಿಸುವ ಕೆಲಸಕ್ಕೆ ಅನುಮತಿ ಕೊಡಲೇಬಾರದು ಎಂದು ಸೂಚಿಸಿದಾಗ, ಎಲ್ & ಟಿ ಅವರಿಂದ ಯಾವುದೇ ಸಹಕಾರ ಸಿಗುತ್ತಿಲ್ಲ ಎಂದು ಇಂಜಿನಿಯರಿಂಗ್ ಆರೋಪಿಸಿದರು. ಎಲ್ & ಟಿ ಅವರು ಮಾತು ಕೇಳುತ್ತಿಲ್ಲ, ಸರಿಯಾಗಿ ಕೆಲಸ ಮಾಡಿಲ್ಲ ಎಂದರೆ ಅವರ ಬಿಲ್ ಅನ್ನು ಹೇಗೆ ಕ್ಲಿಯರ್ ಮಾಡಲಾಯಿತು. ಕೆಲಸ ಮಾಡಲು ಆಸಕ್ತಿ ಇಲ್ಲದಿದ್ದರೆ ಎಂಜಿನಿಯರ್ ಗಳನ್ನು ಬದಲಾಯಿಸುವುದಿಲ್ಲ. ಬದಲಾಗಿ ತನಿಖೆ ನಡೆಸಿ, ಎಲ್ & ಟಿ ಇಲ್ಲವೇ ಇಂಜಿನಿಯರ್ ಗಳಲ್ಲಿ ಯಾರದ್ದು ತಪ್ಪು ಎಂದು ತಿಳಿಯುತ್ತದೋ ಅಂಥವರನ್ನು ಅಮಾನತು ಮಾಡಲಾಗುವುದು ಎಂದು ತುಷಾರ್ ಗಿರಿನಾಥ್ ಎಚ್ಚರಿಸಿದರು.
ಆಗಿದ್ದು 35.70 ಕಿ.ಮೀ. ಮಾತ್ರ
110 ಹಳ್ಳಿ ವ್ಯಾಪ್ತಿಯಲ್ಲಿಯುಜಿಡಿ ವತಿಯಿಂದ 348.5 ಕಿ.ಮೀನಷ್ಟು ಕಾಮಗಾರಿಗಳಿಗೆ ಈಗಾಗಲೇ ಅನುಮತಿ ದೊರೆತಿದ್ದರೆ, ಅದರಲ್ಲಿ 181.1 ಕಿ.ಮೀ ನಷ್ಟು ಪೈಪ್ ಅಳವಡಿಕೆ ಮತ್ತು ಎಂಎಚ್ ಲೈಯಿಂಗ್ ಕಾಮಗಾರಿ ಪೂರ್ಣಗೊಂಡಿದೆ. ಇದರಲ್ಲಿ ಎಲ್ಲ ಹಂತಗಳೂ ಪೂರ್ಣಗೊಂಡು ರಸ್ತೆ ಡಾಂಬರೀಕರಿಸಲು ಸಿದ್ಧವಿರುವುದು ಕೇವಲ 35.70 ಕಿ.ಮೀ. ಮಾತ್ರ ಎಂಬ ಮಾಹಿತಿಯನ್ನು ಸಭೆಯಲ್ಲಿ ನೀಡಲಾಯಿತು.
ನೀರು ವಾಪಸ್ ಬಂದು ನಿಲ್ಲುತ್ತಿದೆ
2010ರಲ್ಲಿ ಕೆಎಂಆರ್ ಪಿಎಲ್ (KMRPL) ವತಿಯಿಂದ ಯಶವಂತಪುರ ವಿಧಾನಸೌಧ ಕ್ಷೇತ್ರದ ವ್ಯಾಪ್ತಿಯಲ್ಲಿ ಹಾದುಹೋಗಿರುವ ಸ್ಯಾನಿಟರಿ ಪೈಪ್ ಲೈನ್ ನಲ್ಲಿ ಶಿಲ್ಟಪ್ ಆಗಿ ಒಳಚರಂಡಿ ನೀರು ವಾಪಸ್ ಬಂದು ನಿಲ್ಲುತ್ತಿದೆ. ಆದ್ದರಿಂದ ಸಂಪೂರ್ಣವಾಗಿ ಲೈನ್ ಪರಿಶೀಲಿಸಿ ಶಿಲ್ಟ್ ತೆಗೆಯುವ ಕೆಲಸ ಆಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಯಿತು.