ಎಲ್ಲಾ ಶಾಸಕರು ಸೇರಿ 'ಪೇಸಿಎಂ' ಪೋಸ್ಟರ್ ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ: ಡಿ.ಕೆ. ಶಿವಕುಮಾರ್
ಬೆಂಗಳೂರು, ಸೆ.22: ರಾಜ್ಯದಲ್ಲಿ ಭುಗಿಲೆದ್ದಿರುವ ಪೇ ಸಿಎಂ ಪೋಸ್ಟರ್ ವಿಚಾರಕ್ಕೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ನಾಳೆ ನಮ್ಮ ಎಲ್ಲಾ ಶಾಸಕರು ಸೇರಿ 'ಪೇಸಿಎಂ' ಪೋಸ್ಟರ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ ಎಂದು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ಹಿನ್ನೆಲೆ ಅವರನ್ನು ಮಾತನಾಡಿಸಲು ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ಬಂದಿದ್ದ ಡಿ.ಕೆ ಶಿವಕುಮಾರ್, ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.
Breaking: ಬೆಂಗಳೂರಿನ ಪೇಸಿಎಂ ಪೋಸ್ಟರ್ ಪ್ರಕರಣ ಸಿಸಿಬಿಗೆ ವರ್ಗಾವಣೆ
"ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಗಾಬರಿಯಾಗಿರುವುದು ಏಕೆ..? ಈ ಪೋಸ್ಟರ್ ಅಂಟಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿರುವುದು ಏಕೆ..?" ಎಂದು ಪ್ರಶ್ನಿಸಿದರು.
ನಾಳೆ ನಮ್ಮ ಎಲ್ಲಾ ಶಾಸಕರು ಸೇರಿ ಪೋಸ್ಟರ್ ಅಂಟಿಸುತ್ತೇವೆ!
ಬೆಂಗಳೂರಿನ ಹಲವೆಡೆಗಳಲ್ಲಿ ಪೇಸಿಎಂ ಪೋಸ್ಟರ್ ಅಂಟಿಸಿರುವುದಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ಪ್ರಕರಣಗಳ ತನಿಖೆಯನ್ನು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಕೇಂದ್ರೀಯ ತನಿಖಾ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ಡಿ.ಕೆ.ಶಿವಕುಮಾರ್, ಮುಖ್ಯಮಂತ್ರಿಗಳು ಪೋಸ್ಟರ್ ವಿಚಾರಕ್ಕೆ ಇಷ್ಟು ತಲೆ ಕೆಡಿಸಿಕೊಂಡು ಏಕೆ ಎಂದಿದ್ದಾರೆ. ಮುಂದುವರೆದು, "ನಾಳೆ ನಮ್ಮ ಎಲ್ಲಾ ಶಾಸಕರು ಸೇರಿ ಪೇಸಿಎಂ ಪೋಸ್ಟರ್ ಅನ್ನು ಸರ್ಕಾರಿ ಕಚೇರಿಗಳಲ್ಲಿ ಅಂಟಿಸುತ್ತೇವೆ. ಎಲ್ಲಿ ಅಂಟಿಸುತ್ತೇವೆ ಎಂದು ಮುಂದೆ ತಿಳಿಸುತ್ತೇವೆ" ಎಂದು ಹೇಳಿದರು.
ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿವೆ
"ಬಿಜೆಪಿ ಅವರು ನಮ್ಮ ಬಗ್ಗೆಯೂ ಕ್ಯೂಆರ್ ಕೋಡ್ ಹಾಕಿದ್ದಾರೆ. ನಾನು ವಿಚಾರಣೆಗೆ ಹೋದ ಸಮಯದಲ್ಲಿ ನಾನು ಕಂಬಿ ಹಿಂದೆ ಇರುವಂತೆ ಮಾಧ್ಯಮಗಳು ಫೋಟೋ ಹಾಕಿದ್ದರು. ಹಾಗೆಂದು ನಾನು ಅವರ ವಿರುದ್ಧ ದೂರು ನೀಡಲು ಸಾಧ್ಯವೇ..?" ಎಂದರು.
"ರಾಜಕೀಯದಲ್ಲಿ ಇರುವವರನ್ನು ಜನ ಪ್ರಶ್ನಿಸುವುದು, ಟೀಕಿಸುವುದು ಸಹಜ. ಅಧಿಕಾರದಲ್ಲಿ ಇರುವವರು ಇದನ್ನು ಜೀರ್ಣಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾಧ್ಯಮಗಳು ವರದಿ ಮಾಡಿವೆ. ಗುತ್ತಿಗೆದಾರರು ಆರೋಪ ಮಾಡಿದ್ದಾರೆ. ನಮ್ಮ ಅಭಿಯಾನದಲ್ಲಿ 8 ಸಾವಿರಕ್ಕೂ ಹೆಚ್ಚು ಮಂದಿ, ನಾವು ಭ್ರಷ್ಟಾಚಾರಕ್ಕೆ ಬಲಿಯಾಗಿದ್ದೇವೆ ಎಂದು ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು.
ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವುದು ನಮ್ಮ ಕರ್ತವ್ಯ
"ಪಕ್ಷದ ವತಿಯಿಂದ ನಾವೇ ಟೋಲ್ ಸಂಖ್ಯೆ ನೀಡಿ ನೋಂದಣಿ ಮಾಡಿಕೊಳ್ಳಲು ಜನರಿಗೆ ಹೇಳಿದ್ದೆವು' ಎಂದರು. 'ಬಿಜೆಪಿ ಅವರು ನಮ್ಮ ವಿರುದ್ಧ ಇಂತಹ ನೂರಾರು ಪೋಸ್ಟರ್ ಮಾಡಿದ್ದು, ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ' ಎಂದು ಮಾಹಿತಿ ನೀಡಿದರು.
'ನಾವು ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದು, ಬಿಜೆಪಿ ಅವರು ನಮ್ಮ ಬಗ್ಗೆಯೂ ಹಾಕಿದ್ದಾರೆ. ಇದು ದೇಶದಲ್ಲೇ ಅತ್ಯಂತ ಭ್ರಷ್ಟ ಸರ್ಕಾರವಾಗಿದ್ದು, ರಾಜ್ಯವನ್ನು ದೇಶದ ಭ್ರಷ್ಟಾಚಾರದ ರಾಜಧಾನಿಯನ್ನಾಗಿ ಮಾಡಿದ್ದಾರೆ. ಈ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡುವುದು ನಮ್ಮ ಕರ್ತವ್ಯ ಅದನ್ನು ಮಾಡುತ್ತೇವೆ" ಎಂದು ಡಿ.ಕೆ.ಶಿವಕುಮಾರ್ ಹೇಳಿದರು.
ಭ್ರಷ್ಟಾಚಾರ ವಿಚಾರ ಜನರ ಬಾಯಲ್ಲಿ ಹರಿದಾಡುತ್ತಿದೆ!
'ಇದು ಅಧಿಕಾರ ದುರ್ಬಳಕೆ, ಭಯ, ದ್ವೇಷದ ರಾಜಕಾರಣವಾಗಿದೆ. 40% ಕಮಿಷನ್ ಆರೋಪ ನಾವು ಮಾಡಿದ್ದೇವಾ? ಸಿಎಂ ಹುದ್ದೆಗೆ 2500 ಕೋಟಿ ನೀಡಬೇಕು ಎಂದು ನಾವು ಹೇಳಿದ್ದೇವಾ? ಬಿಜೆಪಿ ಶಾಸಕ ಯತ್ನಾಳ್ ಅವರೇ ಹೇಳಿದ್ದಾರೆ. ಹಗರಣದ ಬಗ್ಗೆ ಮಾತನಾಡಿದ ನಮ್ಮ ಶಾಸಕ ಪ್ರಿಯಾಂಕ್ ಖರ್ಗೆ ಅವರಿಗೆ ಸಮನ್ಸ್ ನೀಡುವ ಸರ್ಕಾರ ಯತ್ನಾಳ್, ವಿಶ್ವನಾಥ್, ಮಠದ ಸ್ವಾಮೀಜಿಗಳಿಗೆ ಸಮನ್ಸ್ ನೀಡಿಲ್ಲ ಯಾಕೆ..? ವಿಧಾನಸೌಧದ ಮುಂದೆ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದಾಗ ಯಾಕೆ ಕೇಸ್ ಹಾಕಲಿಲ್ಲ. ಈ ವಿಚಾರ ಜನರ ಬಾಯಲ್ಲಿ ಹರಿದಾಡುತ್ತಿದೆ. ನೀವು ನಮ್ಮ ಮೇಲೂ ಆರೋಪ ಮಾಡಿದ್ದೀರಿ. ತನಿಖೆ ಮಾಡಿ, ನಾವು ಅದನ್ನು ಸ್ವಾಗತಿಸುತ್ತೇವೆ' ಎಂದು ತಿಳಿಸಿದರು.
'40% ಕಮಿಷನ್ ವಿಚಾರದ ಚರ್ಚೆಗೆ ಗೊತ್ತುವಳಿ ನಿರ್ಣಯ ಮಂಡಿಸಿದ್ದು ಅಧಿವೇಶನದಲ್ಲಿಯೂ ನಮ್ಮ ಶಾಸಕಾಂಗ ಪಕ್ಷದ ನಾಯಕರು ಹೋರಾಟ ಮಾಡಲಿದ್ದಾರೆ ' ಎಂದರು.
ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿನ ಕಾಂಗ್ರೆಸ್ ಕಾರ್ಯಕರ್ತರ ಬಂಧನದ ಬಗ್ಗೆ, "7 - 8 ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿದ್ದು, ಅವರನ್ನು ನೋಡಿ ಮಾತನಾಡಿಸಿಕೊಂಡು ಹೋಗಲು ಬಂದಿದ್ದೇನೆ. ನಮ್ಮ ವಿರುದ್ಧ ಪ್ರಕರಣ ದಾಖಲಿಸಲು ಹೇಳಿದ್ದೇವೆ. 100 ಕೇಸ್ ಗಳ ನಂತರ ಇದು 101ನೇ ಕೇಸ್ ಆಗಲಿ. ಸಂಬಂಧ ಇಲ್ಲದವರನ್ನು ಬಂಧಿಸಿ ಕರೆ ತಂದು ಅವರನ್ನು ನಾಯಕರನ್ನಾಗಿ ಮಾಡುತ್ತಿದ್ದಾರೆ. ಮಾಡಲಿ" ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.
ಪೇಸಿಎಂ ಪೋಸ್ಟರ್ ಅಂಟಿಸಿರುವುದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಸದಾಶಿವನಗರ, ಹೈಗ್ರೌಂಡ್, ಶೇಷಾದ್ರಿಪುರಂ, ಭಾರತೀನಗರ, ಸೇರಿದಂತೆ ಐದು ಪೊಲೀಸ್ ಠಾಣೆೆಗಳಲ್ಲಿ ದೂರುಗಳನ್ನು ದಾಖಲಿಸಲಾಗಿದೆ.