ಬೆಂಗಳೂರಿಗೆ ಕನ್ನಡಿಗ ಮೇಯರ್ ಬೇಕು: ಆಗ್ರಹ
ಬೆಂಗಳೂರು, ಅಕ್ಟೋಬರ್ 01: ಬಿಬಿಎಂಪಿಗೆ ಮೇಯರ್ ಆಗಿ ಬಿಜೆಪಿಯ ಗೌತಮ್ ಕುಮಾರ್ ಜೈನ್ ಅವರು ಇಂದು ಆಯ್ಕೆ ಆಗಿದ್ದಾರೆ. ಗೌತಮ್ ಆಯ್ಕೆ ಹಿಂದೆಯೇ ಮತ್ತೆ ಕನ್ನಡ-ಉತ್ತರ ಭಾರತ ಚರ್ಚೆ ಮುನ್ನೆಲೆಗೆ ಬಂದಿದೆ.
'ವೀ ವಾಂಟ್ ಕನ್ನಡಿಗ ಮೇಯರ್' (#wewantkannadigamayor) ಹ್ಯಾಷ್ಟ್ಯಾಗ್ ಟ್ರೆಂಡಿಂಗ್ ಆಗಿದ್ದು, ಕನ್ನಡಿಗರೇ ಮೇಯರ್ ಆಗಲಿ ಎಂಬ ಒತ್ತಾಯ ನೆಟ್ಟಿಗರಿಂದ ಕೇಳಿ ಬಂದಿದೆ.
ಬಿಬಿಬಿಎಂಪಿ 53ನೇ ಮೇಯರ್ ಗೌತಮ್ ಕುಮಾರ್ ಪರಿಚಯ
ಶಾಂತಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಜೋಗುಪಾಳ್ಯದ ಕಾರ್ಪೊರೇಟರ್ ಗೌತಮ್ ಕುಮಾರ್ ಜೈನ್ ಮೇಯರ್ ಆಗಿ ಆಯ್ಕೆಯಾದರು. ಕೆಲವು ದಿನಗಳ ಹಿಂದೆಯಷ್ಟೆ ಚರ್ಚೆ ಹುಟ್ಟುಹಾಕಿದ್ದ ಜೈನ-ಕನ್ನಡಿಗರ ವಿವಾದ ಈಗ ಮತ್ತೆ ಪ್ರಾರಂಭವಾಗಿದೆ.
'ಬೆಂಗಳೂರಿನ ಆಡಳಿತವನ್ನು ಮಾರ್ವಾಡಿಗಳ ಕೈಗೆ ನೀಡಲಾಗಿದೆ' ಎಂದು ಕನ್ನಡಪರ ಸಂಘಟನೆಗಳು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಬಿಎಂಪಿ ಮೇಯರ್ ಆಯ್ಕೆ; ಬಿಜೆಪಿ ವಿರುದ್ದ ಕನ್ನಡ ಸಂಘಟನೆಗಳು ಗರಂ
'ಇದು ಕರ್ನಾಟಕ ರಾಜಸ್ಥಾನವಲ್ಲ, ಈ ನಿಮ್ಮ ಮೇಯರ್ ಆಯ್ಕೆ ಬಿಜೆಪಿಯಲ್ಲಿ ಯಾವ ಗಟ್ಟಿ ನಾಯಕನೂ ಇಲ್ಲ ಎಂಬುದನ್ನು ತೋರಿಸುತ್ತಿದೆ' ಎಂದು ಹ್ಯಾಷ್ಟ್ಯಾಗ್ ಅಡಿಯಲ್ಲಿ ನವೀನ್ ಕಡಬಗೆರೆ ಎಂಬುವರು ಟ್ವೀಟ್ ಮಾಡಿದ್ದಾರೆ.
ಜೈನ ಯುವ ಸಂಘಟನೆ ಎಂಬ ಧರ್ಮದವರು ಹೊಸ ಮೇಯರ್ ಚಿತ್ರ ಹಾಕಿ 'ಜೈನ ಧರ್ಮೀ ಬೊಹರಾ' ಎಂದು ಬರೆದಿರುವ ಚಿತ್ರವನ್ನು ಟ್ವೀಟ್ ಮಾಡಿರುವ ಮತ್ತೊಬ್ಬರು, ಆ ಟ್ವೀಟ್ ಅನ್ನು ಸಂಸದ ತೇಜಸ್ವಿ ಸೂರ್ಯ ಅವರಿಗೆ ಟ್ಯಾಗ್ ಮಾಡಿದ್ದು, 'ಇದಕ್ಕೆ ಏನು ಹೇಳುತ್ತೀರಿ' ಎಂದು ಪ್ರಶ್ನೆ ಮಾಡಿದ್ದಾರೆ.