ಡಿಸೆಂಬರ್ 9ರ ನಂತರ ಗುಡ್ ನ್ಯೂಸ್: ಮಲ್ಲಿಕಾರ್ಜುನ್ ಖರ್ಗೆ
ಬೆಂಗಳೂರು, ಡಿಸೆಂಬರ್ 01: ಡಿಸೆಂಬರ್ 09 ರ ನಂತರ ರಾಜ್ಯದ ಜನತೆಗೆ ಶುಭ ಸುದ್ದಿ ನೀಡಲಿದ್ದೇವೆ ಎಂದು ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ. ಈ ಹೇಳಿಕೆ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಖರ್ಗೆ, ಇತ್ತೀಚಿಗೆ ರಾಷ್ಟ್ರ ಮತ್ತು ರಾಜ್ಯದಲ್ಲಿ ಬಿಜೆಪಿಯಿಂದ ಅಧಿಕಾರದ ದುರುಪಯೋಗ ನಡೆಯುತ್ತಿದೆ, ಪ್ರತಿಯೊಂದು ಚುನಾವಣೆಯ್ಲಿಯೂ ಇದನ್ನು ಕಾಣಬಹುದು, ಬೇರೆ ಪಕ್ಷದ ಅಭ್ಯರ್ಥಿಗಳಿಗೆ ಹೆದರಿಸುವ ಕೆಲಸ ಮಾಡ್ತಿದ್ದಾರೆ ಎಂದರು.
ರಾಜ್ಯಸಭಾ ಉಪ ಚುನಾವಣೆ; ಮಲ್ಲಿಕಾರ್ಜುನ ಖರ್ಗೆ ಅಭ್ಯರ್ಥಿ?
ಕರ್ನಾಟಕದಲ್ಲಿ ನಡೆಯುವ ಉಪ ಚುನಾವಣೆಯಲ್ಲಿ ಬಿಜೆಪಿಯ ಅಭ್ಯರ್ಥಿಗಳು ಸೋಲಲಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಮತ್ತು ಎನ್ಸಿಪಿ ಯಿಂದ ಬಿಜೆಪಿಗೆ ಹೋದವರಲ್ಲಿ ಶೇ.79 ಜನ ಸೋತಿದ್ದಾರೆ. ರಾಜ್ಯದಲ್ಲಿಯೂ ಪಕ್ಷಾಂತರ ಮಾಡಿದವರಿಗೆ ಜನತೆ ನೂರಕ್ಕೆ ನೂರರಷ್ಟು ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಡಿಸೆಂಬರ್ 09ರ ವರೆಗೆ ಕಾಯಿರಿ
ಈ ಉಪ ಚುನಾವಣೆ ರಾಜ್ಯದಲ್ಲಿ ಮಾತ್ರವಲ್ಲ, ಬೇರೆ ರಾಜ್ಯಗಳಲ್ಲಿಯೂ ಪರಿಣಾಮ ಬೀರಲಿದೆ ಎಂದರು. ಸಿದ್ದರಾಮಯ್ಯನಿಂದ ಕೆಲಸ ಪಡೆದವರೇ ಈಗ ಅವರನ್ನು ಬಿಟ್ಟು ಹೋಗಿದ್ದಾರೆ, ಇದಕ್ಕೆ ಏನು ಹೇಳಬೇಕು ಎಂದರು. ನಾನು ಕೂಡಾ ಪಕ್ಷದ ಪರವಾಗಿ ಪ್ರಚಾರ ಮಾಡಲಿದ್ದೇನೆ, ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಲಿದ್ದೇನೆ ಎಂದು ತಿಳಿಸಿದರು.
ಜೆಡಿಎಸ್ ಜೊತೆಗಿನ ಮೈತ್ರಿ ಕುರಿತು ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ಡಿಸೆಂಬರ್ 09 ರ ವರೆಗೂ ತಾಳ್ಮೆಯಿಂದ ಕಾಯಿರಿ, ನಂತರ ಗುಡ್ ನ್ಯೂಸ್ ನೀಡಲಿದ್ದೇವೆ ಎಂದು ಜೆಡಿಎಸ್ ಜೊತೆಗಿನ ಮೈತ್ರಿಯ ಕುರಿತು ಸುಳಿವು ನೀಡಿದರು.
ಎಲ್ಲವೂ ಹೈಕಮಾಂಡ್ ನಿರ್ಧಾರ
ಸಿದ್ದರಾಮಯ್ಯ ಮುಂದಿನ ಸಿಎಂ ಆಗುತ್ತಾರೆ ಎಂಬ ಪ್ರಶ್ನೆ ಉದ್ಭವಿಸುವುದಿಲ್ಲ, ಯಾರು ಮುಂದಿನ ಮುಖ್ಯಮಂತ್ರಿ? ನಾಯಕತ್ವದ ಜವಾಬ್ದಾರಿ ಯಾರು ತೆಗೆದುಕೊಳ್ಳಬೇಕು ಎಂಬುದನ್ನು ಹೈಕಮಾಂಡ್ ನಿರ್ಧಾರ ಮಾಡಲಿದೆ ಎಂದರು.
ಪುನಃ ಕಾಂಗ್ರೆಸ್-ಜೆಡಿಎಸ್ ಮೈತ್ರಿ : ಯಾರು, ಏನು ಹೇಳಿದರು?
ಪ್ರತಿ ಬಾರಿಯೂ ನೀವು ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಎಂದು ಹೇಳಿಯೇ ನನ್ನ ಇಲ್ಲಿ ಕೂರಿಸಿದ್ದೀರಾ ಎಂದು ಖರ್ಗೆ ಮಾಧ್ಯಮದವರಿಗೆ ಹಾಸ್ಯ ಚಟಾಕಿ ಹಾರಿಸಿದರು.
ಧರ್ಮ ರಾಜಕೀಯ ಬಿಜೆಪಿಯ ಗುಣ
ಬಿಜೆಪಿ ಹಣಬಲದ ಮೇಲೆ ಚುನಾವಣೆ ನಡೆಸುತ್ತಿದ್ದು ಈ ಪ್ರಯತ್ನ ಈಡೇರುವುದಿಲ್ಲ, ಕೆಲವು ಬಾರಿ ಈ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ, ಈಗಲೂ ಈ ಪ್ರಯತ್ನ ಮಾಡಲಿದ್ದಾರೆ ಎಂದರು.
ಹಣ ನಡೆಯಿಲಿಲ್ಲ ಎಂದರೆ ಧರ್ಮ, ಜಾತಿ ಮಾತುಗಳನ್ನಾಡಿ ಜನರನ್ನ ಮೂರ್ಖರನ್ನಾಗಿ ಮಾಡುತ್ತಿದ್ದಾರೆ. ಜನರಿಗೆ ಭಾವುಕತೆಯ ಮಾತುಗಳನ್ನಾಡಿ ಸಿಂಪಥಿ ಮೂಲಕ ಮತ ಪಡೆಯಲು ಮುಂದಾಗುತ್ತಿದ್ದಾರೆ, ಧರ್ಮದ ಹೆಸರಲ್ಲಿ ಸಮಾಜ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಹರಿಹಾಯ್ದರು.
ಪ್ರವಾಹಕ್ಕೆ ಸ್ಪಂದಿಸದ ಕೇಂದ್ರ ಸರ್ಕಾರ
ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನಮ್ಮ ಸರ್ಕಾರ ಬಂದರೆ ಹಣದ ಹೊಳೆ ಹರಿಯುತ್ತೆ ಎಂದು ಹೇಳಿದ್ದರು, ಆದರೆ ರಾಜ್ಯದಲ್ಲಿ ಪ್ರವಾಹ ಉಂಟಾದಾಗ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಕಿಡಿಕಾರಿದರು.
ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕಕ್ಕೆ ಬರಲೇ ಇಲ್ಲ, ಇತ್ತ ಕಡೆ ಮೂಸಿಯೂ ನೋಡಲಿಲ್ಲ, ಯಡಿಯೂರಪ್ಪನವರ ಮೇಲಿನ ಸಿಟ್ಟನ್ನು ಕರ್ನಾಟಕದ ಜನತೆಯ ಮೇಲೆ ತೀರಿಸಿಕೊಂಡಿದ್ದಾರೋ ಗೊತ್ತಿಲ್ಲ ಎಂದರು.
ಸಂವಿಧಾನ ಉಳಿಸುವುದೇ ನಮ್ಮ ಗುರಿ
ಪ್ರವಾಹಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ನಾಯಕರು ಕೇಂದ್ರದಿಂದ ಪರಿಹಾರ ತರಲು ಪ್ರಯತ್ನಿಸಿಲ್ಲ, ರಾಜ್ಯದಲ್ಲಿಯೂ ಕೂಡಾ ಆಡಳಿತ ಯಂತ್ರ ಕುಸಿದಿದ್ದು, ಸರ್ಕಾರವನ್ನು ಹೇಗೆ ಉಳಿಸಿಕೊಳ್ಳಬೇಕು ಎಂದು ಚಿಂತಿಸುತ್ತಿದ್ದಾರೆ ಎಂದರು.
ಭಾರತದ ಸಂವಿಧಾನ ಉಳಿಯಬೇಕು ಹಾಗಾಗಿ ಮೈತ್ರಿ ಪಕ್ಷಗಳ ಜೊತೆ ಮಾತುಕತೆ ನಡೆಸುತ್ತಿದ್ದೇವೆ, ಅದಕ್ಕೆ ವೇದಿಕೆಯೂ ಸಿದ್ದವಾಗಿದೆ ಎಂದರು. ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ಅಧಿಕಾರದಿ೦ದ ದೂರ ಇಡಬೇಕು ಎಂಬ ಉದ್ದೇಶದಿಂದ ನಮ್ಮ ರಾಷ್ಟ್ರೀಯ ಅಧ್ಯಕ್ಷರನ್ನು ಒಪ್ಪಿಸಿದ್ದೇವೆಂದರು.