ಐಎಂಎ ಮನ್ಸೂರ್ ಖಾನ್ ಪತ್ತೆಹಚ್ಚಿದ ಎಸ್ಐಟಿ, ಸದ್ಯದಲ್ಲೇ ಅರೆಸ್ಟ್?
ಬೆಂಗಳೂರು, ಜೂನ್ 25: ಬಹುಕೋಟಿ ಐಎಂಎ ಹಗರಣದ ಆರೋಪಿಯಾಗಿರುವ ಮನ್ಸೂರ್ ಖಾನ್ ಎಲ್ಲಿದ್ದಾನೆಂದು ತಿಳಿದಿದೆ ಎಂದು ವಿಶೇಷ ತನಿಖಾ ದಳದ ಮುಖ್ಯಸ್ಥ ರವಿಕಾಂತೇ ಗೌಡ ಹೇಳಿದ್ದಾರೆ.
ಮನ್ಸೂರ್ ಖಾಲ್ ಎಲ್ಲಿದ್ದಾನೆ ಎನ್ನುವುದನ್ನು ಪತ್ತೆಹಚ್ಚಿದ್ದೇವೆ, ತನಿಖೆಯ ದೃಷ್ಟಿಯಿಂದ ಅದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ರವಿಕಾಂತೇ ಗೌಡ ಹೇಳಿರುವುದರಿಂದ, ಆರೋಪಿಯನ್ನು ಶೀಘ್ರವೇ ಪೊಲೀಸರು ಬಂಧಿಸುವ ಸಾಧ್ಯತೆಯಿದೆ.
ಮನ್ಸೂರ್ ವಿಡಿಯೋ ಬಗ್ಗೆ ತನಿಖಾಧಿಕಾರಿಯ ಮೊದಲ ಪ್ರತಿಕ್ರಿಯೆ
ಮನ್ಸೂರ್ ಬಿಡುಗಡೆ ಮಾಡಿರುವ ವಿಡಿಯೋ ಬಗ್ಗೆ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದೇವೆ. ಆತ ಮಾಡಿರುವ ಆರೋಪ, ನಿಜವೂ ಇರಬಹುದು, ಸುಳ್ಳೂ ಇರಬಹುದು. ತನಿಖೆಯಿಂದ ಮಾತ್ರ ಸತ್ಯ ಹೊರ ಬರಲು ಸಾಧ್ಯ ಎಂದು ಎಸ್ಐಟಿ ಮುಖ್ಯಸ್ಥರು ಹೇಳಿದ್ದಾರೆ.
ಆರೋಪಿ ಯಾರ ಯಾರ ಹೆಸರನ್ನು ಸೂಚಿಸಿದ್ದಾನೋ, ಅವರಿಗೆಲ್ಲಾ ನೊಟೀಸ್ ನೀಡಲು ಸಾಧ್ಯವಿಲ್ಲ, ಅದು ತನಿಖೆಯ ಸರಿಯಾದ ಕ್ರಮ ಕೂಡಾ ಅಲ್ಲ ಎಂದು ರವಿಕಾಂತೇ ಗೌಡ ಹೇಳಿದ್ದಾರೆ.
ಮನ್ಸೂರ್ ಖಾನ್ ಒಬ್ಬ ಆರೋಪಿ, ಆತನ ಮೇಲೆ ದೂರು ದಾಖಲಾಗಿದೆ, ಎಫ್ಐಆರ್ ಆಗಿದೆ, ರೆಡ್ ಕಾರ್ನರ್ ನೋಟಿಸ್ ಜಾರಿಯಲ್ಲಿದೆ. ಆತ ಯಾರ ಮೇಲೆ ಬೇಕಾದರೂ ಆರೋಪ ಮಾಡಬಹುದು. ಆದರೆ, ಸಾಕ್ಷ್ಯಾಧಾರವಿಲ್ಲದೆ ಆತನ ಹೇಳಿಕೆ ನಂಬಲು ಆಗುವುದಿಲ್ಲ ಎಂದು ಡಿಸಿಪಿ ಗಿರೀಶ್ ಹೇಳಿಕೆಯನ್ನು ನೀಡಿದ್ದರು.
ಐಎಂಎ ವಂಚನೆ ಪ್ರಕರಣ ಸಿಬಿಐಗೆ ವಹಿಸಲು ಬಿಜೆಪಿ ಆಗ್ರಹ
ರಾಸ್ ಅಲ್ ಖೈಮಾ ಎಂಬಲ್ಲಿರುವ ಮನ್ಸೂರ್ ಖಾನ್ ಬಿಡುಗಡೆ ಮಾಡಿದ 18 ನಿಮಿಷಕ್ಕೂ ಹೆಚ್ಚು ಸಮಯದ ವಿಡಿಯೋದಲ್ಲಿ, ಮಾಜಿ ರಾಜ್ಯಸಭಾ ಸದಸ್ಯ ರೆಹಮಾನ್ ಖಾನ್, ಎಂಎಲ್ ಸಿ ಶರವಣ ಹಾಗೂ ಅವರ ಜ್ಯುವೆಲ್ಲರಿ ಅಸೋಸಿಯೇಷನ್ ಸೇರಿ ಹಲವರಿಂದ ಐಎಂಎ ನಾಶವಾಯಿತು ಎಂದು ಆರೋಪಿಸಿದ್ದ.