ಜೆಡಿಎಸ್ ಸಹವಾಸವೇ ಬೇಡ: ಸಾರಾ ಮಹೇಶ್ ಭೇಟಿಗೆ ಬಿಜೆಪಿ ಪ್ರತಿಕ್ರಿಯೆ
Recommended Video
ಬೆಂಗಳೂರು, ಜುಲೈ 12: ರಾಜ್ಯ ಬಿಜೆಪಿ ಉಸ್ತುವಾರಿ ಮುರಳೀಧರ ರಾವ್, ಶಾಸಕ ಕೆಎಸ್ ಈಶ್ವರಪ್ಪ ಅವರು ಜೆಡಿಎಸ್ ಮುಖಂಡ ಸಾ.ರಾ. ಮಹೇಶ್ ಅವರನ್ನು ಗುರುವಾರ ಭೇಟಿ ಮಾಡಿರುವ ಘಟನೆ, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಸರ್ಕಾರದ ರಚನೆ ಸಾಧ್ಯತೆಯ ಕುರಿತು ಊಹಾಪೋಹಗಳನ್ನು ಹುಟ್ಟುಹಾಕಿದೆ.
ಕುಮಾರಕೃಪ ಅತಿಥಿಗೃಹದಲ್ಲಿ ನಿನ್ನೆ ರಾತ್ರಿ ಈ ನಾಯಕರು ಭೇಟಿ ಮಾಡಿ ಕೆಲವು ಸಮಯ ಮಾತುಕತೆ ನಡೆಸಿದ್ದರು. ಇದು ತೀವ್ರ ಕುತೂಹಲ ಕೆರಳಿಸಿತ್ತು. ಆದರೆ, ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವ ಯಾವುದೇ ಸಾಧ್ಯತೆ ಇಲ್ಲವೇ ಇಲ್ಲ. ಈ ಭೇಟಿ ಕೇವಲ ಆಕಸ್ಮಿಕ ಎಂದು ಬಿಜೆಪಿ ಸ್ಪಷ್ಟೀಕರಣ ನೀಡಿದೆ.
ಕರ್ನಾಟಕ ರಾಜಕೀಯಕ್ಕೆ ರೋಚಕ ತಿರುವು! ಬಿಜೆಪಿ ನಾಯಕರೊಂದಿಗೆ ಸಾರಾ ಮಹೇಶ್!
'ಜೆಡಿಎಸ್ ಜತೆ ಸರ್ಕಾರ ರಚಿಸುವುದು ಸಾಧ್ಯವೇ ಇಲ್ಲ. ಇಂತಹ ವಿಚಾರಗಳ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಇದು ರಾಜಕೀಯ ದೊಂಬರಾಟವಷ್ಟೇ. ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸುವುದು ಸಾಧ್ಯವಿದೆಯೇ?' ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದರು.
'ನೂರು ಬಾರಿ ಹೇಳಿದ್ದೇನೆ. ಅವರೊಂದಿಗೆ ಒಮ್ಮೆ ಸರ್ಕಾರ ರಚಿಸಿ ಅನುಭವಿಸಿ ಸಾಕಾಗಿದೆ. ಮುಖಂಡರ ಆಕಸ್ಮಿಕ ಭೇಟಿಯನ್ನು ಸುಮ್ಮನೆ ಬೇರೆ ರೀತಿಯಲ್ಲಿ ತಿರುಚುವುದು ಸರಿಯಲ್ಲ' ಎಂದರು.
ಮುರಳೀಧರ ರಾವ್ ಈ ಬಗ್ಗೆ ಟ್ವಿಟ್ಟರ್ನಲ್ಲಿ ಸ್ಪಷ್ಟೀಕರಣ ನೀಡಿದ್ದರು. ಸ್ವತಃ ಕುಮಾರಸ್ವಾಮಿ ಅವರೂ ಈ ಭೇಟಿ ಕೇವಲ ಆಕಸ್ಮಿಕ. ಮಾತುಕತೆ ಸೌಜನ್ಯದ್ದು ಅಷ್ಟೇ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
'ಸತ್ತರೂ ಜೆಡಿಎಸ್ ಜತೆ ಹೋಗೊಲ್ಲ'
'ಸತ್ತರೂ ನಾವು ಜೆಡಿಎಸ್ ಜತೆಗೆ ಹೋಗುವುದಿಲ್ಲ' ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದರು.
ಸುಳ್ಳು ಸುದ್ದಿ ಹಬ್ಬಿಸುವುದರಲ್ಲಿ ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ನಿಸ್ಸೀಮ. ಅಪ್ಪ ಮಕ್ಕಳ ಆಟವನ್ನು 20-20 ಸರ್ಕಾರವಿದ್ದಾಗಲೇ ನೋಡಿದ್ದೇವೆ. ಸಾರಾ ಮಹೇಶ್ ಅವರೊಂದಿಗಿನ ಈಶ್ವರಪ್ಪ ಮತ್ತು ಮರಳೀಧರರಾವ್ ಭೇಟಿ ಕೇವಲ ಆಕಸ್ಮಿಕ. ಶಾಸಕರನ್ನು ಹೆದರಿಸುವ ಸಲುವಾಗಿ ಬಿಜೆಪಿ ಜತೆ ಹೊಂದಾಣಿಕೆ ಎಂದು ಜೆಡಿಎಸ್ನವರು ಹಬ್ಬಿಸುತ್ತಿದ್ದಾರೆ ಎಂದು ಟೀಕಿಸಿದರು.
ಸದ್ಯಕ್ಕೆ ಅಂತಹ ಬೆಳವಣಿಗೆ ಇಲ್ಲ: ರೇವಣ್ಣ
ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಪೂಜೆ ಸಲ್ಲಿಸಿರುವ ಜೆಡಿಎಸ್ ಮುಖಂಡ, ಸಚಿವ ಎಚ್ ಡಿ ರೇವಣ್ಣ, ಸದ್ಯಕ್ಕೆ ಬಿಜೆಪಿ ಜತೆ ಅಧಿಕಾರ ಹಂಚಿಕೊಳ್ಳುವ ರೀತಿಯ ಯಾವುದೇ ಬೆಳವಣಿಗೆ ಇಲ್ಲ ಎಂದರು.
ದೇವರ ಆಶೀರ್ವಾದ ಇರುವವರೆಗೂ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ಎಚ್ಡಿಕೆ ಹೆಸರಿನಲ್ಲಿ ಚಾಮುಂಡಿ ದೇವಿಗೆ ಸಂಕಲ್ಪ ಮಾಡಿದ್ದೇನೆ. ಚಾಮುಂಡೇಶ್ವರಿಯ ಅನುಗ್ರಹ ಕುಮಾರಸ್ವಾಮಿ ಅವರ ಮೇಲಿದೆ. ಕುಮಾರಸ್ವಾಮಿಗೆ ಸರ್ಕಾರದ ಅವಶ್ಯಕತೆ ಇಲ್ಲ. ಆದರೆ ರಾಜ್ಯದ ಜನರಿಗೆ ಎಚ್ಡಿಕೆ ಅವಶ್ಯಕತೆ ಇದೆ ಎಂದು ಹೇಳಿದರು.
ಸಾ.ರಾ.ಮಹೇಶ್-ಬಿಜೆಪಿ ನಾಯಕರ ಭೇಟಿ ಆಕಸ್ಮಿಕ: ಕುಮಾರಸ್ವಾಮಿ
ಅಸಮಾಧಾನ ವ್ಯಕ್ತಪಡಿಸಿದ ಹೈಕಮಾಂಡ್
ಮುರಳೀಧರ್ ರಾವ್ ಅವರು ಸಾರಾ ಮಹೇಶ್ ಅವರನ್ನು ಭೇಟಿಯಾಗಿರುವುದಕ್ಕೆ ಬಿಜೆಪಿ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎಂದೂ ಹೇಳಲಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್, ರಾಜ್ಯಾಧ್ಯಕ್ಷ ಯಡಿಯೂರಪ್ಪ ಮತ್ತು ಇತರೆ ಕೆಲವು ಮುಖಂಡರು ಮುರಳೀಧರ ರಾವ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ರಾಜಕೀಯದಲ್ಲಿ ಈ ರೀತಿ ಬೆಳವಣಿಗೆಗಳು ಆಗುತ್ತಿರುವ ಸಂದರ್ಭದಲ್ಲಿ ಅವರನ್ನು ಭೇಟಿ ಮಾಡುವ ಅಗತ್ಯವಿತ್ತೇ? ಇದರಿಮದ ಉಂಟಾಗಬಹುದಾದ ಪರಿಣಾಮಗಳೇನು ಎನ್ನುವುದು ತಿಳಿದಿದೆಯೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳು ವರದಿ ಮಾಡಿವೆ.
ಸಾರಾ ಮಹೇಶ್ಗೆ ಎಚ್ಡಿಕೆ ಕ್ಲಾಸ್
ಇತ್ತ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರೂ ಸಾ.ರಾ ಮಹೇಶ್ ಅವರನ್ನು ಕರೆಯಿಸಿಕೊಂಡು ತರಾಟೆಗೆ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗಿದೆ. ಬಿಜೆಪಿ ಮುಖಂಡರೊಂದಿಗಿನ ಮಹೇಶ್ ಅವರ ಭೇಟಿಯ ವರದಿ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದಂತೆಯೇ ತಾಜ್ ವೆಸ್ಟ್ ಎಂಡ್ಗೆ ಸಾರಾ ಮಹೇಶ್ ಅವರನ್ನು ಕರೆಯಿಸಿಕೊಂಡ ಸಿಎಂ, ಅಲ್ಲಿಂದ ಜೆಪಿ ನಗರದ ನಿವಾಸದತ್ತ ಹೊರಟಿದ್ದರು. ದಾರಿ ಮಧ್ಯದಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿ ಅಸಮಾಧಾನ ಹೊರಹಾಕಿದ್ದಾರೆ. ಸಾರಾ ಮಹೇಶ್ ಅವರು ಸ್ಪಷ್ಟನೆ ನೀಡಲು ಮುಂದಾದರೂ ಅದಕ್ಕೆ ಸಿಎಂ ಕಿವಿಗೊಡಲಿಲ್ಲ ಎಂದು ತಿಳಿದುಬಂದಿದೆ.