ಧರ್ಮ ವಿರೋಧಿ ಕಾಯ್ದೆ ಜಾರಿಗೊಳಿಸಲು ಬಿಡುವುದಿಲ್ಲ ಎಂದ ಮೌಲಾನಾ
ಬೆಂಗಳೂರು, ಡಿಸೆಂಬರ್.23: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ತೀವ್ರಗೊಂಡಿದೆ. ನಗರದ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನೆರದ ಸಾವಿರಾರು ಮುಸ್ಲಿಂ ಬಾಂಧವರು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ಮೂಲಕ ಕೇಂದ್ರ ಸರ್ಕಾರವು ದೇಶವನ್ನು ಹರಿದು ಹಂಚಲು ಸಂಚು ರೂಪಿಸಿದೆ. ಇದು ಬಿಜೆಪಿ ಅವರ ಅಪ್ಪನ ದೇಶವಲ್ಲ. ಧರ್ಮದ ವಿರುದ್ಧ ಕಾನೂನು ಮಾಡಲು ನಾವು ಬಿಡುವುದಿಲ್ಲ ಎಂದು ಮೌಲಾನಾ ಜುಲ್ಫಿಕರ್ ನೂರಿ ಎಚ್ಚರಿಕೆ ನೀಡಿದ್ದಾರೆ.
ಮೋದಿ, ಶಾ ಯುವಕರ ಭವಿಷ್ಯವನ್ನು ಹಾಳು ಮಾಡಿದ್ದಾರೆ: ರಾಹುಲ್ ಗಾಂಧಿ
ಬೆಂಗಳೂರಿನ ಖುದ್ದೂಸ್ ಸಾಹೇಬ್ ಈದ್ಗಾ ಮೈದಾನದಲ್ಲಿ ನಡೆದ ಪ್ರತಿಭಟನೆ ವೇಳೆ ನೆರೆದ ಸಾವಿರಾರು ಮುಸ್ಲಿಂ ಬಾಂಧವರನ್ನು ಮುಖಂಡರನ್ನು ಉದ್ದೇಶಿಸಿ ಮೌಲಾನಾ ಜುಲ್ಫಿಕರ್ ನೂರಿ ಮಾತನಾಡಿದರು. ಪೌರತ್ವ ಕಾಯ್ದೆಯನ್ನು ಕೇಂದ್ರ ಸರ್ಕಾರ ವಾಪಸ್ ಪಡೆಯುವವರೆಗೂ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದರು.
ಶೇ.10ರಷ್ಟು ಮುಸ್ಲಿಂರು ಹೊರ ಬಂದಿದ್ದಕ್ಕೆ ಇಷ್ಟಾಗಿದೆ:
ಪೌರತ್ವ ತಿದ್ದುಪಡಿ ಕಾಯ್ದೆ ಹಾಗೂ ರಾಷ್ಟ್ರೀಯ ನಾಗರಿಕ ನೋಂದಣಿ ನೀತಿ ಧರ್ಮದ ವಿರೋಧಿಯಾಗಿದೆ. ಧರ್ಮ ವಿರೋಧಿ ಕಾನೂನನ್ನು ಜಾರಿಗೊಳಿಸಲು ನಾವು ಬಿಡುವುದಿಲ್ಲ ಎಂದು ಮೌಲಾನಾ ಜುಲ್ಫಿಕರ್ ನೂರಿ ಎಚ್ಚರಿಕೆ ನೀಡಿದ್ದಾರೆ. ದೇಶದಲ್ಲಿ ಹಿಂದೂ-ಮುಸ್ಲಿಂ ಭಾಯಿ ಭಾಯಿ ಎನ್ನುವಂತಿದ್ದಾರೆ. ಆದರೆ, ಕೇಂದ್ರ ಸರ್ಕಾರ ಈ ಕಾನೂನಿನ ಮೂಲಕ ಇಬ್ಬರನ್ನು ಬೇರ್ಪಡಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರದ ವಿರುದ್ಧ ಶೇ.10ರಷ್ಟು ಮುಸ್ಲಿಮರು ಪ್ರತಿಭಟನೆ ನಡೆಸಲು ಇಳಿದಿದ್ದಕ್ಕೆ ಇಷ್ಟೆಲ್ಲ ಆಗುತ್ತಿದೆ. ಇನ್ನು, ದೇಶದ ಎಲ್ಲ ಮುಸ್ಲಿಮರು ಪ್ರತಿಭಟಿಸಲು ಬೀದಿಗಿಳಿದರೆ ಏನಾಗಬಹುದು ಎಂದು ಮೊದಲೇ ಕೇಂದ್ರ ಸರ್ಕಾರದ ಅರಿತುಕೊಳ್ಳಬೇಕು. ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕು ಎಂದು ಮೌಲಾನಾ ಜುಲ್ಫಿಕರ್ ನೂರಿ ಆಗ್ರಹಿಸಿದ್ದಾರೆ.