ರಿವರ್ಸ್ ಆಪರೇಷನ್ ಮಾಡ್ತೀವಿ, ಹುಷಾರ್: ಬಿಜೆಪಿಗೆ ಎಚ್ಚರಿಕೆ
ಬೆಂಗಳೂರು, ಜುಲೈ 1: ಕಾಂಗ್ರೆಸ್ ಪಕ್ಷದ ಇಬ್ಬರು ಶಾಸಕರು ರಾಜೀನಾಮೆ ನೀಡಿರುವುದರಿಂದ, ರಾಜ್ಯ ರಾಜಕಾರಣದಲ್ಲಿ ಭಾರೀ ಚಟುವಟಿಕೆ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯನವರ ನಿವಾಸಕ್ಕೆ ಪರಮೇಶ್ವರ್, ಡಿ ಕೆ ಶಿವಕುಮಾರ್ , ದಿನೇಶ್ ಗುಂಡೂರಾವ್ ದೌಡಾಯಿಸಿದ್ದಾರೆ.
ಇಬ್ಬರು ಶಾಸಕರ ರಾಜೀನಾಮೆಯ ವಿಚಾರದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ಬಿಜೆಪಿ ವಿರುದ್ದ ಕಿಡಿಕಾರಿದ್ದಾರೆ. ಹೋಗುವವರನ್ನು ತಡೆಯಲು ಸಾಧ್ಯವೇ ಎನ್ನುವ ಅರ್ಥದಲ್ಲಿ ದಿನೇಶ್ ಹೇಳಿಕೆಯನ್ನು ನೀಡಿದ್ದಾರೆ.
ನಾವೇನೂ ಏಕಾಏಕಿ ಸರ್ಕಾರ ಮಾಡಿಲ್ಲ: ದಿನೇಶ್ ಗುಂಡೂರಾವ್
ಸೋಮವಾರದ ಬೆಳವಣಿಗೆಯ ಬಗ್ಗೆ ಬಿಜೆಪಿಗೆ ಎಚ್ಚರಿಕೆ ನೀಡಿರುವ ದಿನೇಶ್ ಗುಂಡೂರಾವ್, ನಾವೂ 'ರಿವರ್ಸ್ ಆಪರೇಷನ್' ಮಾಡಬೇಕಾಗುತ್ತದೆ ಎಂದು ಹೇಳಿದ್ದಾರೆ.
ಜಿಂದಾಲ್ ವಿಚಾರವನ್ನು ಇಟ್ಟುಕೊಂಡು ಆನಂದ್ ಸಿಂಗ್ ರಾಜೀನಾಮೆ ಕೊಡಬೇಕಾಗಿರಲಿಲ್ಲ. ಬಿಜೆಪಿಯಿಂದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮುಂದುವರಿಯುತ್ತಲೇ ಇದೆ. ಯಾವ ಕಾರಣಕ್ಕಾಗಿ ಆನಂದ್ ಸಿಂಗ್ ಅವರು ರಾಜೀನಾಮೆ ನೀಡಿದರು ಎನ್ನುವುದು ಗೊತ್ತಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷರು ಹೇಳಿದ್ದಾರೆ.
ಸರಕಾರಕ್ಕೆ ತೊಂದರೆಯಿಲ್ಲ, ಸರಕಾರ ಸ್ಥಿರವಾಗಿರುತ್ತದೆ, ನಾವು ಪೂರ್ಣ ಅವಧಿಯನ್ನು ಮುಗಿಸುತ್ತೇವೆ. ಬಿಜೆಪಿಯವರು ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ, ಬಿಜೆಪಿಯ ಕೇಂದ್ರದ ಮುಖಂಡರು ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡುತ್ತಿದ್ದಾರೆ.
ಆ ಮೂಲಕ ಕಾಂಗ್ರೆಸ್ ಶಾಸಕರನ್ನು ಭಯಗೊಳಿಸುವ ಪ್ರಯತ್ನವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ನಮಗೂ ಶಕ್ತಿ ಸಾಮರ್ಥ್ಯವಿದೆ, ಆದರೆ ಅದನ್ನು ಈ ವರೆಗೆ ಪ್ರಯತ್ನಿಸಿಲ್ಲ, ಇದೇ ರೀತಿ ಮುಂದುವರಿದರೆ ನಾವೂ ಅದಕ್ಕೆ (ರಿವರ್ಸ್ ಆಪರೇಷನ್) ಕೈಹಾಕಬೇಕಾಗುತ್ತದೆ ಎಂದು ದಿನೇಶ್ ಗುಂಡೂರಾವ್, ಬಿಜೆಪಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.