ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಲೋಕಾರ್ಪಣೆ
ಬೆಂಗಳೂರು, ಜನವರಿ 13: ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕೃಷ್ಣರಾಜ ಪರಿಷನ್ಮಂದಿರದಲ್ಲಿ ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಲೋಕಾರ್ಪಣೆ ಮಾಡಲಾಗಿದೆ.
ಪ್ರೊ. ವಿ.ಕೃಷ್ಣಮೂರ್ತಿ ರಾವ್ ಅವರು ಅನುವಾದಿಸಿರುವ ಡಬ್ಲು.ಬಿ. ಯೇಟ್ಸ್ ಕವಿಯ ಎಪ್ಪತ್ತು ಕವನಗಳು ಕೃತಿ ಲೋಕಾರ್ಪಣ ಸಮಾರಂಭವನ್ನು ಉದಯ ಪ್ರಕಾಶನ, ರಾಜಾಜಿನಗರ, ಬೆಂಗಳೂರು ಮತ್ತು ಕೃಷ್ಣಮೂರ್ತಿರಾವ್ ಅಭಿಮಾನಿ ಬಳಗ, ಬೆಂಗಳೂರು ಆಯೋಜಿಸಿತ್ತು.
ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ಚಂದ್ರಶೇಖರ ಕಂಬಾರ ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತ, ಪ್ರೊ.ವಿ.ಕೃಷ್ಣಮೂರ್ತಿರಾವ್ ಅವರ ಓದು, ಅಧ್ಯಯನ, ಅಭ್ಯಾಸ, ವಿಮರ್ಶಾ ವಿವೇಕ, ಅನುವಾದದ ರಮಣೀಯತೆ-ಈ ಸಂಕಲನದ ಪುಟಪುಟಗಳಲ್ಲಿಯೂ ಎದ್ದು ಕಾಣುತ್ತದೆ. ಇದೊಂದು ಸಾರ್ಥಕ ಮತ್ತು ಅನುಕರಣಿಯ ಅನುವಾದ ಎಂದು ಅಭಿಪ್ರಾಯಪಟ್ಟರು.
ವಿಶ್ರಾಂತ ಪ್ರಾಧ್ಯಾಪಕರು ಮತ್ತು ಪ್ರಸಿದ್ಧ ಅನುವಾದಕರಾದ ಪ್ರೊ. ಓ.ಎಲ್.ನಾಗಭೂಷಣ ಸ್ವಾಮಿ ಅವರು ಕೃತಿ ಲೋಕಾರ್ಪಣೆಯನ್ನು ಮಾಡಿ, ಡಬ್ಲೂ ಬಿ. ಯೇಟ್ಸ್ ಆಧುನಿಕ ಇಂಗ್ಲಿಷ್ ಕಾವ್ಯದ ಚರಿತ್ರೆಯಲ್ಲಿ ಪ್ರಸಿದ್ಧಕವಿಯೆಂದು ಪ್ರತೀತನಾದವನು. ಇವನು ಕವಿಯೂ ಹೌದು; ವಿದ್ವಾಂಸನೂ ಹೌದು. ಇವನು ಬರೆದ ಕವಿತೆಗಳು ಕಳೆದ ನೂರು ವರ್ಷಗಳಿಂದ ಪ್ರಪಂಚದ ವಿವಿಧ ಭಾಷೆಗಳಿಗೆ ಅನುವಾದಗೊಂಡಿವೆ; ಈಗಲೂ ಅನುವಾದಗೊಳ್ಳುತ್ತಿವೆ. ಕನ್ನಡವು ಕಳೆದ ಅರ್ಧಶತಮಾನಕ್ಕಿಂತ ಹೆಚ್ಚಾಗಿ ಇವನ ಕವಿತೆಗಳನ್ನೂ ಕಾವ್ಯಭಾವಗಳನ್ನೂ ತನ್ನ ಸೊತ್ತಾಗಿ ಮಾಡಿಕೊಂಡಿದೆ ಎಂದು ತಿಳಿಸಿದರು.
ಪ್ರೊ.ವಿ.ಕೃಷ್ಣಮೂರ್ತಿರಾವ್ ಇಂಗ್ಲಿಷ್ ಕಾವ್ಯದ ಶ್ರದ್ಧಾಳು ವಿದ್ಯಾರ್ಥಿ. ಅವರು ಇಂಗ್ಲಿಷ್ಕಾವ್ಯದ ಮರ್ಮವನ್ನು ಅರಿತವರು ಮಾತ್ರವಲ್ಲ; ಕನ್ನಡ ಕಾವ್ಯಭಾಷೆಯ ನೆಲೆ-ಬೆಲೆಯನ್ನು ಅರಿತವರು. ಅವರು ಈಗಾಗಲೇ ಐದು ಕನ್ನಡ ಕಾವ್ಯಸಂಕಲನಗಳನ್ನು ಹೊರತಂದು ನಮ್ಮ ನಡುವಿನ ಮುಖ್ಯ ಕವಿಗಳಲ್ಲಿ ಒಬ್ಬರಾಗಿದ್ದಾರೆ. ಅವರು ಕಳೆದ ನಾಲ್ಕು ವರ್ಷಗಳಿಂದ ಏಟ್ಸ್ ಮಹಾಕವಿಯನ್ನು ಧ್ಯಾನಿಸಿ, ಎಪ್ಪತ್ತು ಕವಿತೆಗಳನ್ನು ಅನುವಾದಿಸಿ ನಮಗೆ ನೀಡಿದ್ದಾರೆ. ಅವರು ಅನುವಾದಿಸಿದ ಕವಿತೆಗಳನ್ನು ಹತ್ತಾರು ಬಾರಿ ತಿದ್ದಿದ್ದಾರೆ. ಅವುಗಳೊಂದೊಂದಕ್ಕೂ ಟಿಪ್ಪಣಿಗಳನ್ನು ಕೊಟ್ಟಿದ್ದಾರೆ. ಏಟ್ಸ್ ಕಾವ್ಯಸಂಕಲನದ ಚಾರಿತ್ರಿಕ ನೆಲೆಗಳನ್ನು ತಿಳಿಯುವಂತೆ ಪ್ರವೇಶಿಕೆಗಳನ್ನು ಬರೆದಿದ್ದಾರೆ.
ಈ ಅನುವಾದಿತ ಸಂಕಲನವು ಇಂಗ್ಲಿಷ್ಮೂಲ, ಆಯಾ ಯೇಟ್ಸ್ ಸಂಕಲನಗಳಿಗೆ ಪ್ರವೇಶಿಕೆ, ಅನುವಾದ ಮತ್ತು ಟಿಪ್ಪಣಿಗಳಿಂದ ಪರಿಪ್ಲುತವಾಗಿದೆ ಎಂದು ಖ್ಯಾತ ಅನುವಾದಕರಾದ ಜಯಪ್ರಕಾಶ ನಾರಾಯಣ (ಜೆ.ಪಿ) ಅವರು ಕೃತಿಯನ್ನು ಕುರಿತು ಮಾತನಾಡುತ್ತ ತಿಳಿಸಿದರು. . ಬಿ.ಆರ್.ಪರಮೇಶ್, ಎಂ.ಡಿ.ಶೈಲಜಾ , ಸತ್ಯ ಮಂಗಲ ಮಹದೇವ ಉಪಸ್ಥಿತರಿದ್ದರು.