ಡಿಕೆಶಿ ಅವರೊಂದಿಗೂ ರಾಗಿಣಿ ಫೋಟೊ ಇದೆ: ರಮೇಶ್ ಜಾರಕಿಹೊಳಿ
ಬೆಂಗಳೂರು, ಸೆ. 10: ಜಲ ಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಮಾಜಿ ಜಲಸಂಪನ್ಮೂಲ ಸಚಿವ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಮಧ್ಯದ ಜಟಾಪಟಿ ಮುಂದುವರೆದಿದೆ. ಈ ಬಾರಿ ಅದಕ್ಕೆ ಕಾರಣವಾಗಿರುವುದು ಟ್ರಗ್ ಮಾಫಿಯಾ ನಂಟಿನಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಅವರ ವಿಚಾರ. ನಟಿ ರಾಗಿಣಿ ಅವರು ಕಳೆದ ವಿಧಾನ ಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡಿದ್ದ ವಿಚಾರಕ್ಕೆ ಸಂಬಂಧಿದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರನ್ನು ಎಳೆದು ತಂದಿದ್ದಾರೆ.
ಇದೇ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸಮರ್ಥಿಸಿಕೊಂಡಿರುವ ರಮೇಶ್ ಜಾರಕಿಹೊಳಿ ಅವರು, ಸಂಪುಟ ವಿಸ್ತರಣೆ ಕುರಿತು ತಮ್ಮ ಆಪ್ತರಿಗೆ ಶಾಕ್ ನೀಡಿದ್ದಾರೆ. ಮೈತ್ರಿ ಸರ್ಕಾರ ಪತನವಾಗಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದ ತಮ್ಮ ಆಪ್ತರು ದಂಗುಬಡಿಯುವಂತಹ ಹೇಳಿಕೆಯನ್ನು ಕೊಟ್ಟಿದ್ದಾರೆ. ಶೀಘ್ರದಲ್ಲಿಯೇ ದೆಹಲಿಗೆ ತೆರಳುವುದಾಗಿ ಹೇಳಿದ್ದಾರೆ.
ಡ್ರಗ್ಸ್ ಹುಡುಗಿ ಅಂತ
ಟ್ರಗ್ ಮಾಫಿಯಾದ ನಂಟಿನ ಆರೋಪದಲ್ಲಿ ಬಂಧನಕ್ಕೆ ಒಳಗಾಗಿರುವ ನಟಿ ರಾಗಿಣಿ ದ್ವಿವೇದಿ ಅವರೊಂದಿಗೆ ಬಿಜೆಪಿ ನಾಯಕರೊಂದಿಗಿನ ಒಡನಾಟದ ಕುರಿತು ಸಚಿವ ರಮೇಶ್ ಜಾರಕಿಹೊಳಿ ಮಾತನಾಡಿದ್ದಾರೆ. ವಿಕಾಸಸೌಧದಲ್ಲಿ ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ಅವರು, ಕಳೆದ ಉಪ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ರಾಗಿಣಿ ಪ್ರಚಾರ ಮಾಡಿದ್ದರು.
ರಾಗಿಣಿ ದ್ವಿವೇದಿ ಅವರು ಚಿತ್ರ ನಟಿ ಅಂತ ಪ್ರಚಾರಕ್ಕೆ ಕರೆಸಿದ್ದೆವು. ಡ್ರಗ್ಸ್ ಹುಡುಗಿ ಅಂತ ತಗೊಂಡಿಲರಲಿಲ್ಲ. ಆಕೆಯ ಫೋಟೊ ಎಲ್ಲರ ಜೊತೆಗೂ ಇರಬಹುದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೂ ರಾಗಿಣಿ ಫೋಟೊ ಇದೆ. ನನ್ನ ಜೊತೆಯೂ ಇರಬಹುದು. ಮಾಜಿ ಸಿಎಂ ಕುಮಾರಸ್ವಾಮಿ ಅವರೊಂದಿಗೂ ಫೋಟೊ ಇರಬಹುದು. ನಾನು ಈಗ ಅದರ ಬಗ್ಗೆ ಮಾತನಾಡುವುದಿಲ್ಲ. ತನಿಖೆ ಆಗುತ್ತಿದೆ. ಮಾಫಿಯಾದಲ್ಲಿ ಎಷ್ಟೇ ಪ್ರಭಾವಿಗಳಿದ್ದರೂ ಕ್ರಮ ಆಗಲಿದೆ ಎಂದಿದ್ದಾರೆ.
ಕಾಯ್ಬೇಕ್ರೀ, ಕಾಯ್ಬೇಕು
ಇನ್ನು ರಾಜ್ಯ ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಸಂಬಂಧಿಸಿದಂತೆ ತಮ್ಮ ಆಪ್ತರೇ ದಂಗಾಗುವಂತೆ ಹೇಳಿಕೆ ಕೊಟ್ಟಿದ್ದಾರೆ. ಮಂತ್ರಿಯಾಗಲು ಕಾಯ್ಬೇಕ್ರೀ, ಕಾಯ್ಬೇಕು. ನಾವೂ 14 ತಿಂಗಳುಗಳ ಕಾಲ ಕಾಯಲಿಲ್ವಾ? ಕೋರ್ಟ್ ಕಚೇರಿ ಅಂತೆಲ್ಲ ಅಲೆಯಲಿಲ್ವಾ? ನಮ್ಮ ಸಿಎಂ ಯಡಿಯೂರಪ್ಪ ಅವರಿದ್ದಾರೆ. ಹೈಕಮಾಂಡ್ ಇದೆ. ಮಂತ್ರಿ ಸ್ಥಾನ ಕೊಡ್ತಾರೆ. ಅವರು ಎಲ್ಲವನ್ನೂ ನೋಡಿ ಕೊಳ್ಳುತ್ತಾರೆ ಎಂದು ಸಚಿವ ಸ್ಥಾನದ ಆಕಾಂಕ್ಷಿಗಳಾದ ಹೆಚ್. ವಿಶ್ವನಾಥ್, ಆರ್. ಶಂಕರ್, ಎಂಟಿಬಿ ನಾಗರಾಜ್ ಅವರ ಕುರಿತು ಹೇಳಿಕೆ ಕೊಟ್ಟಿದ್ದಾರೆ.
ಅಧಿವೇಶನ ಆರಂಭಕ್ಕೂ ಮೊದಲು ಸಂಪುಟ ವಿಸ್ತರಣೆ ಕುರಿತು ನಾನೇನೂ ಹೇಳುವುದಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ಹೈಕಮಾಂಡ್ ಈ ಬಗ್ಗೆ ತೀರ್ಮಾನ ಮಾಡುತ್ತಾರೆ. ಅಲ್ಲಿಯವರೆಗೆ ಎಲ್ಲರೂ ಕಾಯಲೇಬೇಕು. ನಾವು ಕೂಡಾ ಕಾಯ್ದಿದ್ದೇವು ಎಂದಿದ್ದಾರೆ.
ಬಿಜೆಪಿಯವರಿಗೆ ವಿಜಯೇಂದ್ರ ಹೆಮ್ಮೆ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರ ಮೇಲೆ ಕಾಂಗ್ರೆಸ್ ಆರೋಪಕ್ಕೆ ರಮೇಶ್ ಜಾರಕಿಹೊಳಿ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಬಿ.ವೈ. ವಿಜಯೇಂದ್ರ ಅವರು ಕೆಲಸ ಮಾಡೋದು ಹೆಮ್ಮೆಯ ವಿಚಾರ. ಅವರು ಬಿಜೆಪಿ ಯುವ ನಾಯಕರು. ನಮ್ಮ ಸಿಎಂ ಯಡಿಯೂರಪ್ಪ ಅವರ ತರ ಒಳ್ಳೆ ಲೀಡರ್ ಆಗಿ ಬೆಳೆಯುತ್ತಾರೆ. ಬಿಜೆಪಿ ಯಾರೂ ಅವರ ವಿರುದ್ಧ ಆರೋಪ ಮಾಡಿಲ್ಲ. ಬಿಜೆಪಿಯವರಿಗೆ ವಿಜಯೇಂದ್ರ ಹೆಮ್ಮೆ ಎಂದು ರಮೇಶ್ ಜಾರಕಿಹೊಳಿ ಹೇಳಿಕೆ ಕೊಟ್ದಿದ್ದಾರೆ.
Recommended Video
ಮಂಗಳವಾದ ದೆಹಲಿಗೆ
ಮೇಕೆದಾಟು, ಎತ್ತಿನಹೊಳೆ, ಕೃಷ್ಣಾ ಮೇಲ್ದಂಡೆ ಯೋಜನೆ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಂತ್ರಿಗಳನ್ನು ಭೇಟಿಯಾಗಲು ಹೋಗಿದ್ದೆ. ಆಗ ಅವರಿಗೆ ಕೊರೊನಾ ಬಂದಿದ್ದರಿಂದ ಭೇಟಿ ಮಾಡಲು ಆಗಿರಲ್ಲ.
ಈಗ ಮತ್ತೆ ಮಂಗಳವಾರ ದೆಹಲಿಗೆ ಹೋಗುವ ಬಗ್ಗೆ ಯೋಚನೆ ಇದೆ. ಸಿಎಂ ಯಡಿಯೂರಪ್ಪ ಅವರ ಅನುಮತಿ ಪಡೆದು ದೆಹಲಿಗೆ ಹೋಗಿ ಕೇಂದ್ರದ ಸಚಿವ ಜೊತೆ ಯೋಜನೆ ಬಗ್ಗೆ ಮಾತಾಡುತ್ತೇನೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೋಳಿ ಹೇಳಿಕೆ ಕೊಟ್ಟಿದ್ದಾರೆ.