ಕಲುಷಿತ ನೀರಿಗೆ ಜಲಚಿಕಿತ್ಸೆ, ಸಪ್ತಗಿರಿ ವಿದ್ಯಾರ್ಥಿಗಳ ಸಾಧನೆ
ಬೆಂಗಳೂರು, ಮೇ 28 : ಕಲುಷಿತ ನೀರಿಗೆ ಜಲಚಿಕಿತ್ಸೆ ಮಾಡುವ ಪದ್ಧತಿಯನ್ನು ನಗರದ ಸಪ್ತಗಿರಿ ಎಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾದ ಅಭಿಷೇಕ್ ಬಿ. ಮತ್ತು ಮಹಮ್ಮದ್ ಅತೀಕ್ ಅವರು ಕಂಡು ಹಿಡಿದಿದ್ದಾರೆ.
ಲಂಡನ್ ನ ವಿಜ್ಞಾನಿಗಳು ಅಲ್ಲಿನ ಥೇಮ್ಸ್ ನದಿಗೆ ಸೇರಿದ್ದ ಕಲುಷಿತವನ್ನು ತೆಗೆಯಲು ಮಾಡಿದ ವಾಟರ್ ಟ್ರೀಟ್ಮೆಂಟ್ನಿಂದ ಸ್ಫೂರ್ತಿಗೊಂಡು ಸಪ್ತಗಿರಿ ಇಂಜನೀಯರಿಂಗ್ ಕಾಲೇಜು ವಿದ್ಯಾರ್ಥಿಗಳು ಹೊಸ ಸಂಶೋಧನೆ ಕೈಗೊಂಡು ಅದರಲ್ಲಿ ಯಶಸ್ವಿಯಾಗಿದ್ದಾರೆ. [2016ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ]
ಈ ಆವಿಷ್ಕಾರ ದೊಡ್ಡ ಮಟ್ಟದಲ್ಲಿ ಕಾರ್ಯರೂಪಕ್ಕೆ ಬಂದದ್ದೇ ಆದಲ್ಲಿ ಕೆರೆ/ನದಿ ನೀರಿಗೆ ಸೇರುವ ಎಲ್ಲ ಕಲುಷಿತ ವಸ್ತುಗಳನ್ನು ಸುಲಭವಾಗಿ, ಕಡಿಮೆ ವೆಚ್ಚದಲ್ಲಿ ಹೊರತೆಗೆಯುವ ಸಾಧ್ಯತೆ ಇದೆ. ವಿದ್ಯಾರ್ಥಿಗಳ ಈ ಪ್ರಾಜೆಕ್ಟ್ ಗೆ ಕಾಲೇಜಿನ ಪ್ರೊ. ಪ್ರಶಾಂತ್ ಕುಮಾರ್ ಎಚ್.ಪಿ. ಹಾಗೂ ಪ್ರೊ. ಶರಣ್ಯ ಡಿ. ಅವರು ಮಾರ್ಗದರ್ಶನ ನೀಡಿದ್ದಾರೆ. [ಬೆಂಗಳೂರು: ಬೆಳ್ಳಂದೂರು ಕರೆ ಮತ್ತೆ ವಿಷದ ಒಡಲು]
ಕಲುಷಿತಗೊಂಡಿರುವ ಬೆಳ್ಳಂದೂರು ಕೆರೆ : ಬೆಂಗಳೂರಿನ ಬೆಳ್ಳಂದೂರು ಕೆರೆಗೆ ಆಗ್ನೇಯ ಏಷ್ಯಾದ ಅತಿದೊಡ್ಡ ಕರೆ ಎಂಬ ಅಗ್ಗಳಿಕೆ ಇದೆ. ಇದರ ವಿಸ್ತಾರ ಸುಮಾರು 900 ಎಕರೆಯಷ್ಟಿದೆ. ಈ ಕೆರೆಯ ನೀರು ಭತ್ತದ ಗದ್ದೆ ಮತ್ತು ಮೀನುಗಾರಿಕೆಗೆ ಪ್ರಮುಖವಾಗಿ ಬಳಕೆಯಾಗುತ್ತಿತ್ತು. ಈಗ ಈ ಕೆರೆ ಜನರನ್ನು ಭಯಬೀಳಿಸುವಷ್ಟರ ಮಟ್ಟಿಗೆ ಕಲುಷಿತಗೊಂಡಿದೆ.
ಚರಂಡಿ ನೀರು ಮತ್ತು ಕೈಗಾರಿಕೆಗಳ ಕಲುಷಿತ ನೀರನ್ನು ನೇರವಾಗಿ ಈ ಕೆರೆಗೆ ಬಿಡುತ್ತಿರುವುದರಿಂದ ಬೆಳ್ಳಂದೂರು ಕೆರೆ ತನ್ನ ಹಳೆಯ ವೈಭವವನ್ನು ಕಳೆದುಕೊಂಡಿದೆ. ಅತಿಹೆಚ್ಚು ಪ್ರಮಾಣದಲ್ಲಿ ಪ್ಲೋರೈಡ್ ಆಯಾನ್ಸ್ ಸೇರ್ಪಡೆಯಾಗುತ್ತಿರುವುದೇ ಕೆರೆಯಲ್ಲಿ ನೊರೆ ಏಳುತ್ತಿರುವುದಕ್ಕೆ ಮುಖ್ಯ ಕಾರಣ. ಈ ಕೆರೆಯನ್ನು ಈಗ ಮೊದಲಿನ ಸ್ಥಿತಿಗೆ ತರಬೇಕು ಅಂದರೆ ಏನಿಲ್ಲವೆಂದರೂ ಸುಮಾರು 350 ಕೋಟಿ ಹಣ ಖರ್ಚು ಮಾಡಬೇಕೆಂಬುದು ತಜ್ಞರ ಅಭಿಪ್ರಾಯ. [ಮೂರೇ ಮೂರು ದಿನದಲ್ಲಿ ಹುಬ್ಬಳ್ಳಿ ಉಣಕಲ್ ಕೆರೆ ಸ್ವಚ್ಛ]
"ಬೆಂಗಳೂರು ನಗರಿ ಇಂದು ಕಸ ವಿಲೇವಾರಿ ಸಮಸ್ಯೆಯಿಂದ ಬಳಲುತ್ತಿದೆ. ಒಂದು ಸಂಶೋಧನೆಯ ಪ್ರಕಾರ, ದಿನನಿತ್ಯ ಪ್ರತಿಯೊಬ್ಬ ವ್ಯಕ್ತಿಯೂ 0.4-0.6 ಕೆ.ಜಿ. ತ್ಯಾಜ್ಯವನ್ನು ಉತ್ಪತ್ತಿ ಮಾಡುತ್ತಾನೆ. ಬೆಂಗಳೂರಿನಲ್ಲಿ 1500 ಟನ್ ನಷ್ಟು ಹಣ್ಣಿನ ಸಿಪ್ಪೆಯೇ ಉತ್ಪತ್ತಿಯಾಗುತ್ತದೆ. ನಾವು ಆ ಹಣ್ಣಿನ ಸಿಪ್ಪೆಯನ್ನೇ ಜಲಚಿಕಿತ್ಸೆಗೆ ಬಳಸಿಕೊಳ್ಳುವ ಯೋಜನೆ ಹಾಕಿಕೊಂಡೆವು. ನೀರಿಗೆ ಸೇರಿಕೊಂಡ ಆಯಾನ್ಸ್, ಕರಗಿದ ಘನವಸ್ತುಗಳು ಮತ್ತು ಹೆವಿಮೆಟಲ್ ಗಳನ್ನು ತೆಗೆಯಲು ನಾವು ಪೈನ್ಆಪಲ್ ಮತ್ತು ಸ್ವೀಟ್ಲೈಮ್ನ ಸಿಪ್ಪೆಯನ್ನು ಆಯ್ಕೆ ಮಾಡಿಕೊಂಡೆವು."
"ಈ ಹಣ್ಣುಗಳ ಸಿಪ್ಪೆಗಳನ್ನು ಒಣಗಿಸಿ ಅದನ್ನು ಪೌಡರ್ ಮಾಡಿಕೊಂಡು ಅದಕ್ಕೆ ಒಂದು ಸಣ್ಣ ಮೈಲ್ಡ್ ಆಸಿಡ್ ಟ್ರೀಟ್ಮೆಂಟ್ ನೀಡಿದಾಗ ಅದು ಆಕ್ಟಿವೇಟೆಡ್ ಕಾರ್ಬನ್ ಆಗಿ ಬದಲಾಗುತ್ತದೆ. ಇದನ್ನು ಫಿಲ್ಟರ್ ರೂಪದಲ್ಲಿ ಬಳಸಿದಾಗ ಅದು ನೀರಿನಲ್ಲಿರುವ ಬ್ಯಾಕ್ಟೀರಿಯಾಗಳ ಜೊತೆಗೆ ಪ್ಲಿಓರೈಡ್ ಲವಣ, ಮೆಗ್ನೀಷಿಯಂ ಲವಣ, ನೈಟ್ರೇಟ್ಸ್ ಮೊದಲಾದ ಮಲೀನಕಾರಕಗಳನ್ನು ಪರಿಣಾಮಕಾರಿಯಾಗಿ ತೆಗೆದು ಹಾಕಬಹುದು. ಈ ತಂತ್ರಜ್ಞಾನವನ್ನು ಬಳಸಿ ನಾವು ಬೆಳ್ಳಂದೂರು ಕೆರೆ ನೀರನ್ನು ಟೆಸ್ಟ್ ಮಾಡಿದ್ದೇವೆ. ಅದರಿಂದ ನಮಗೆ ಅದ್ಭುತವಾದ ಫಲಿತಾಂಶ ಕೂಡ ಸಿಕ್ಕಿದೆ ಎನ್ನುತ್ತಾರೆ ಪ್ರೊ. ಪ್ರಶಾಂತ್ ಕುಮಾರ್ ಎಚ್.ಪಿ. [ಬೆಳ್ಳಂದೂರು ಕೆರೆ ಶುದ್ಧೀಕರಣ ಸಮಿತಿಯಲ್ಲಿ ಯಾರ್ಯಾರಿದ್ದಾರೆ?]
ಸಪ್ತಗಿರಿ ಇಂಜೀನಿಯರಿಂಗ್ ಕಾಲೇಜಿನ ಬಯೋ-ಟೆಕ್ನಾಲಜಿ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಅಭಿಷೇಕ್ ಬಿ. ಮತ್ತು ಮಹಮ್ಮದ್ ಅತೀಕ್ ಅವರ ಈ ಸಮಾಜೋಪಕಾರಿ ಪ್ರಾಜೆಕ್ಟ್ ಹಲವರ ಮೆಚ್ಚುಗೆಗೆ ಪಾತ್ರವಾಗಿದೆ. ತರಕಾರಿ ಮತ್ತು ಹಣ್ಣಿನ ಸಿಪ್ಪೆಯನ್ನು ಬಳಸಿ ಜಲ ಚಿಕಿತ್ಸೆ ಮಾಡುವ ಅವರ ಈ ತಂತ್ರಜ್ಞಾನ ಪರಿಸರ ಸ್ನೇಹಿಯೂ ಆಗಿರುವುದರಿಂದ ಅನೇಕ ಗಣ್ಯರು ವಿದ್ಯಾರ್ಥಿಗಳ ವಿನೂತನ ಪ್ರಯತ್ನವನ್ನು ಮೆಚ್ಚಿ ಬೆನ್ನು ತಟ್ಟಿದ್ದಾರೆ.
ಈ ತಂತ್ರಜ್ಞಾನ ಸರಳವಾಗಿದ್ದರೂ ಪರಿಣಾಮಕಾರಿಯಾದ ಫಲಿತಾಂಶ ನೀಡುತ್ತದೆ. ಈ ತಂತ್ರಜ್ಞಾನಕ್ಕೆ ವಿದ್ಯುತ್ ನ ಅವಶ್ಯಕತೆ ಬೇಕಿಲ್ಲ. ಪರಿಸರಕ್ಕೆ ಹಾನಿಕಾರಕವೂ ಅಲ್ಲ. ಇತರೆ ಬಯೋಲಾಜಿಕಲ್ ವಿಧಾನಗಳಿಗೆ ಹೋಲಿಕೆ ಮಾಡಿ ನೋಡಿದಲ್ಲಿ ಇದು ತುಂಬ ಉನ್ನತಮಟ್ಟದ್ದು ಮತ್ತು ಪರಿಣಾಮಕಾರಿಯಾದದ್ದು. ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಬೆಳ್ಳಂದೂರು ಕೆರೆಯ ನೀರನ್ನು ಈ ತಂತ್ರಜ್ಞಾನ ಪರೀಕ್ಷೆಗೊಳಪಡಿಸಿದಾಗ ಆ ನೀರಿನಲ್ಲಿನ ಪ್ಲೋರೈಡ್ ಮಟ್ಟವನ್ನು ಶೇ 92.5ರಷ್ಟು ತೆಗೆದು ಹಾಕಿರುವ ಫಲಿತಾಂಶ ಸಿಕ್ಕಿದೆ. ಈ ಫಲಿಂತಾಂಶ ವಿದ್ಯಾರ್ಥಿಗಳ ಉತ್ಸಾಹವನ್ನು ನೂರ್ಮಡಿಗೊಳಿಸಿದೆ. ಜಲ ಚಿಕಿತ್ಸೆಗಾಗಿ ವಿದ್ಯಾರ್ಥಿಗಳು ಆವಿಷ್ಕಾರ ಮಾಡಿರುವ ಈ ತಂತ್ರಜ್ಞಾನವನ್ನು ಸೆಂಟ್ರಲ್ ವಾಟರ್ ಟೆಸ್ಟಿಂಗ್ ಲ್ಯಾಬೊರೇಟರಿಯ ಸಿಎಒ ಜಗದೀಶ್ ಮತ್ತು ಬಿಬಿಎಂಪಿಯ ಜಂಟಿ ನಿರ್ದೇಶಕ ರವೀಂದ್ರನಾಥ್ ಕದೀವಾಲ್ ಮೆಚ್ಚಿದ್ದಾರೆ.
"ಬೆಂಗಳೂರಿನ ಅತಿದೊಡ್ಡ ಕೆರೆ ಬೆಳ್ಳಂದೂರು ಲೇಕ್. ಅದನ್ನು ಉಳಿಸಿಕೊಳ್ಳುವುದೇ ಈಗ ನಮ್ಮ ಮುಂದಿರುವ ದೊಡ್ಡ ಸವಾಲು. ಕಲುಷಿತ ಕೆರೆಗಳಿಗೆ ತಕ್ಷಣದಿಂದಲೇ ಜಲ ಚಿಕಿತ್ಸೆ ನೀಡಬೇಕು. ಕೆರೆಗಳಿಗೆ ಚರಂಡಿ ನೀರು ಮತ್ತು ಕೈಗಾರಿಕೆಗಳ ಕಲುಷಿತ ನೀರನ್ನು ನೇರವಾಗಿ ಬಿಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ನೀರಿಗೆ ಅತಿಹೆಚ್ಚು ಪ್ರಮಾಣದಲ್ಲಿ ಪ್ಲೋರೈಡ್ ಆಯಾನ್ಸ್ ಸೇರ್ಪಡೆಗೊಂಡು ಕೆರೆ ನೊರೆ ಉಕ್ಕಿಸುತ್ತದೆ. ಜನರನ್ನು ಭಯಭೀತಗೊಳಿಸುತ್ತದೆ' ಎನ್ನುತ್ತಾರೆ ಭಾವಿ ಇಂಜಿನಿಯರ್ ಗಳಾದ ಅಭಿಷೇಕ್ ಮತ್ತು ಮಹಮ್ಮದ್ ಅತೀಕ್. ಅಂದಹಾಗೆ, ಈ ತಂತ್ರಜ್ಞಾನವನ್ನು ಪೇಟೆಂಟ್ ಮಾಡಿಸುವ ಉದ್ದೇಶವೂ ವಿದ್ಯಾರ್ಥಿಗಳಿಗೆ ಇದೆ.
ಈ ಸಾಧನೆಯನ್ನು ಮೆಚ್ಚಿ ಪ್ರಾಂಶುಪಾಲ ಡಾ. ಅಶ್ವತ್ಥ ಕುಮಾರ್ ಎಂ., ನಿರ್ದೇಶಕ ಡಾ. ಎನ್.ಶ್ರೀನಿವಾಸನ್, ಕಾರ್ಯನಿರ್ವಾಹಕ ನಿರ್ದೇಶಕ ಮನೋಜ್ ಜಿ.ಡಿ. ಅಭಿನಂದಿಸಿದ್ದಾರೆ.