ರಂಗಶಂಕರದಲ್ಲಿ ತುಘಲಕ್- ನಾಟಕದ್ದೇ ಕಾರುಬಾರು
ಬೆಂಗಳೂರು, ಮಾರ್ಚ್ 05: 'ಜನರು ಮಾಡಿಟ್ಟಿರುವ ಕೊಳೆಯನ್ನು ತೊಳೆಯಲು ನಾನು ದೇವರನ್ನೇಕೆ ಕರೆಯಬೇಕು?' ತುಘಲಕ್ ನಾಟಕದಲ್ಲಿ ಬರುವ ಒಂದು ಸಾಲು. ಇಂತಹ ನೂರಾರು ಅರ್ಥಪೂರ್ಣ ಸಾಲುಗಳಿರುವ ನಾಟಕ ರಂಗಶಂಕರದಲ್ಲಿ ಪ್ರದರ್ಶನಗೊಳ್ಳುತ್ತಿದೆ.
ತುಘಲಕ್ ನಾಟಕವನ್ನು ಬೆಂಗಳೂರು ಸಮುದಾಯ ಮಾರ್ಚ್ 6ರಂದು ರಂಗಶಂಕರದಲ್ಲಿ ಪ್ರದರ್ಶನಗೊಳಿಸಲಿದೆ. ಜ್ಞಾನಪೀಠ ಪ್ರಶಸ್ತಿ ವಿಜೇತ ಸಾಹಿತಿ ಗಿರೀಶ್ ಕಾರ್ನಾಡರ ತುಘಲಕ್ ಭಾರತದ ಶ್ರೇಷ್ಠ ನಾಟಕಗಳಲ್ಲೊಂದು.
ಐತಿಹಾಸಿಕ ಭಿತ್ತಿಯಲ್ಲಿ ಸಮಕಾಲೀನ ಧ್ವನಿಯನ್ನು ಹೊರಡಿಸುವ ಈ ನಾಟಕ ಹಲವು ವ್ಯಾಖ್ಯಾನಗಳ ಸಾಧ್ಯತೆಗಳನ್ನು ತನ್ನ ಒಡಲೊಳಗಿರಿಸಿಕೊಂಡಿದೆ.
ಸಿ.ಆರ್. ಸಿಂಹ ಅವರು ಈ ನಾಟಕವನ್ನು ಮೊದಲು ರಂಗಕ್ಕೆ ತಂದವರು, ಸಿ.ಆರ್. ಸಿಂಹ ತುಘಲಕ್ ಪಾತ್ರವನ್ನು ನಿರ್ವಹಿಸಿದ ರೀತಿ ತುಘಲಕ್ ಎಂದರೆ ಸಿಂಹ ಎನ್ನುವಂತೆ ಹೆಸರುವಾಸಿಯಾಯಿತು.
ಸಮಕಾಲೀನ ರಾಜಕಾರಣದ ಎಲ್ಲ ತೆವಲು ಮತ್ತು ಹುಚ್ಚಾಟಗಳನ್ನು ತುಘಲಕ್ ನಾಟಕದ ಒಂದೊಂದು ಮಾತಲ್ಲೂ ಕ್ರಿಯೆಯಲ್ಲೂ ಕಾಣಬಹುದು. ಕನ್ನಡ ರಂಗಭೂಮಿ ಮಾತ್ರವಲ್ಲ ಭಾರತೀಯ ರಂಗಭೂಮಿಯಲ್ಲೇ ಮಹತ್ವವೆನಿಸಿಕೊಂಡಿರುವ ತುಘಲಕ್ ಸಮುದಾಯ ಹೆಮ್ಮೆಯಿಂದ ಪ್ರದರ್ಶಿಸುತ್ತಿದೆ.
ಡಾ. ಸ್ಯಾಮ್ ಕುಟ್ಟಿ ಪಟ್ಟಂಕರಿ ನಿರ್ದೇಶನದ, ಶ್ರೀಪಾದ ಭಟ್ ಅವರ ಸಹ ನಿರ್ದೇಶನದಲ್ಲಿ ನಾಟಕ ಮೂಡಿಬರಲಿದೆ. ಮಂಗಳವಾರ ಸಂಜೆ 7.30ಕ್ಕೆ ನಾಟಕ ಪ್ರದರ್ಶನಗೊಳ್ಳಲಿದೆ.
ರಚನೆ: ಗಿರೀಶ ಕಾರ್ನಾಡ್
ಅಭಿನಯ: 'ಸಮುದಾಯ'
ಬೆಂಗಳೂರು ವಿನ್ಯಾಸ ಮತ್ತು ನಿರ್ದೇಶನ: ಡಾ. ಸ್ಯಾಮ್ ಕುಟ್ಟಿ ಪಟ್ಟಂಕಾರಿ
ಸಹ ನಿರ್ದೇಶನ : ಡಾ. ಶ್ರೀಪಾದ ಭಟ್
ಸ್ಥಳ: ರಂಗಶಂಕರ
ದಿನಾಂಕ ಮತ್ತು ಸಮಯ: ಮಾರ್ಚ್ 6
ಸಂಜೆ 7:30ಕ್ಕೆ,
ಟಿಕೇಟ್ ಪಡೆಯಲು-www.indianstage.in, bookmyshow.com