ಕೋವಿಡ್ : ಬಿಬಿಎಂಪಿಯಿಂದ ತ್ಯಾಜ್ಯ ನೀರಿನ ಪರೀಕ್ಷೆ
ಬೆಂಗಳೂರು ಜೂ. 19: "ಕೊರೊನಾ ರೂಪಾಂತರಿ ತಳಿ ಸೇರಿದಂತೆ ಹೊಸ ರೋಗಗಳನ್ನು ಸರಳವಾಗಿ ಕಂಡು ಹಿಡಿಯುವಲ್ಲಿ ತ್ಯಾಜ್ಯ ನೀರನ್ನು ಪರೀಕ್ಷೆಗೆ ಒಳಪಡಿಸುವುದು ಒಂದು ಪ್ರಮುಖ ಮಾರ್ಗವಾಗಿದೆ" ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಕೋವಿಡ್ ಸೋಂಕು ತ್ಯಾಜ್ಯ ನೀರಿನಿಂದಲೂ ಹರಡುತ್ತದೆ ಎಂಬ ಸಂದೇಹದ ಮೇರೆಗೆ ಕೊಳಚೆ ನೀರಿನ ಪರೀಕ್ಷೆ ಉಪಕ್ರಮ ಆರಂಭಿಸಿ (ಮೇ 2021) ಒಂದು ವರ್ಷ ಕಳೆದಿದೆ. ಈ ಸಂಬಂಧ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಆಯುಕ್ತರು ಮಾತನಾಡಿದರು.
"ಜನರು ಬಳಸಿದ ನೀರಿನಲ್ಲಿ ಕೋವಿಡ್ ಪ್ರಭೇದ ಮತ್ತದರ ಲಕ್ಷಣವನ್ನು ಪರೀಕ್ಷೆ ಮೂಲಕ ಪತ್ತೆ ಮಾಡಲು ಮೂರನೇ ಅಲೆ ವೇಳೆ ಬಿಬಿಎಂಪಿ 198 ವಾರ್ಡಗಳಲ್ಲಿನ ಕೊಳಚೆ ನೀರನ್ನು ಲ್ಯಾಬ್ಗೆ ಕಳುಹಿಸಿತ್ತು. ಇದರಿಂದ ಕೋವಿಡ್ ಪ್ರಭೇದ ಬಗ್ಗೆ ಮುಂಜಾಗ್ರತಾ ನಿಗಾ ವಹಿಸಲು ಸಾಧ್ಯವಾಗಿತ್ತು" ಎಂದರು.
"ಕೋವಿಡ್ ಮೂರನೇ ಅಲೆಯಲ್ಲಿ ಕೊಳಚೆ ನೀರಿನ ಪರೀಕ್ಷೆ ವಿಚಾರದಲ್ಲಿ ಬಿಬಿಎಂಪಿ ಯಶಸ್ವಿಯಾಗಿದೆ. ತ್ಯಾಜ್ಯ ನೀರಿನ ವಿಶ್ಲೇಷಣೆ ಮುಂದುವರಿಸುವುದರಿಂದ ಹೊಸ ಹಾನಿಕಾರಕ ರೋಗಗಳ ಬಗ್ಗೆ ಎಚ್ಚರಿಕೆ ವಹಿಸಲು, ಲಕ್ಷಣಗಳನ್ನು ತಿಳಿದುಕೊಂಡು ಆರೋಗ್ಯ ಕ್ರಮ ಕೈಗೊಳ್ಳಲು ಸಾಧ್ಯವಾಗುತ್ತದೆ" ಎಂದು ಆಯುಕ್ತರು ಅಭಿಪ್ರಾಯಪಟ್ಟರು.
ಪೂರ್ವ ಸಿದ್ಧತೆಗೆ ಅನುಕೂಲ; ಬಿಬಿಎಂಪಿಯೊಂದಿಗೆ ಕಾರ್ಯನಿರ್ವಹಿಸುವ ಸಾರ್ವಜನಿಕ ಆರೋಗ್ಯ ಸಲಹೆಗಾರ ಡಾ. ಭಾಸ್ಕರ್ ರಾವ್ ಮಾತನಾಡಿ, "ನಗರದಲ್ಲಿ ಕೋವಿಡ್ ಮೂರನೇ ಅಲೆ ಸಂದರ್ಭದಲ್ಲಿ ಕೊಳಚೆ ನೀರಿನ ಪರೀಕ್ಷೆ, ನಂತರ ಅದಕ್ಕೆ ಲ್ಯಾಬ್ನಿಂದ ದೊರೆತ ಫಲಿತಾಂಶದ ಮೇರೆಗೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೋವಿಡ್ ಅಲೆ ಎದುರಿಸಲು ಅಗತ್ಯ ಕ್ರಮ ಕೈಗೊಳ್ಳಲು ಈ ಪರೀಕ್ಷೆ ಸಹಕಾರಿಯಾಗಿತ್ತು" ಎಂದು ತಿಳಿಸಿದರು.