100 ರೌಡಿ ಶೀಟರ್ ಮನೆಗಳ ಮೇಲೆ ಪೊಲೀಸರ ದಾಳಿ
ಬೆಂಗಳೂರು, ಜೂ. 21: ಕೊರೊನಾ ಸೋಂಕು ಇಳಿಕೆಯಾದ ಬೆನ್ನಲ್ಲಿ ರಾಜಧಾನಿಯಲ್ಲಿ ಲಾಕ್ ಡೌನ್ ಷರತ್ತುಗಳನ್ನು ಸಡಿಲಗೊಳಿಸಿ ಸರ್ಕಾರ ಆದೇಶಿಸಿದೆ. ಇದರ ಬೆನ್ನಲ್ಲೇ ಅಪರಾಧ ಚಟುವಟಿಕೆ ಮೇಲೆ ಹದ್ದಿನ ಕಣ್ಣಿಟ್ಟಿರುವ ಪೂರ್ವ ವಿಭಾಗದ ಪೊಲೀಸರು 100ಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಿದ್ದಾರೆ. ಅಪರಾಧ ಚಟುವಟಿಕೆಯಿಂದ ದೂರ ಇರುವಂತೆ ಖಡಕ್ ವಾರ್ನಿಂಗ್ ನೀಡಿದ್ದಾರೆ.
Recommended Video
ಅನ್ ಲಾಕ್ ಘೋಷಣೆ ಮಾಡುತ್ತಿದ್ದಂತೆ ರೌಡಿ ಶೀಟರ್ ಗಳು ಮತ್ತು ಅಪರಾಧ ಹಿನ್ನೆಲೆಯುಳ್ಳವರು ಅಪರಾಧ ಕೃತ್ಯದಲ್ಲಿ ಸಕ್ರಿಯವಾಗುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಈ ಹಿನ್ನೆಲೆಯಲ್ಲಿ ಪೂರ್ವ ವಿಭಾಗದ ಡಿಸಿಪಿ ಶರಣಪ್ಪ ನೇತೃತ್ವದಲ್ಲಿ ಮೂರು ಉಪ ವಿಭಾಗದ ಕ್ರಿಮಿನಲ್ ಗಳ ಮೇಲೆ ದಾಳಿ ಮಾಡಿದ್ದಾರೆ. ಗಾಂಜಾ ಸೇವನೆ ವಾಸನೆ ಬಂದ ಹಿನ್ನೆಲೆಯಲ್ಲಿ ಕೆಲವರನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೂ ಒಳಪಡಿಸಲಾಗಿದೆ. ಡಿ.ಜೆ ಹಳ್ಳಿ ಮಜರ್, ಚಪ್ಪಡಿ ನದೀಮ್, ಗೋವಿಂದಪುರ ಅಬ್ದುಲ್ ಸೇರಿ ನೂರಕ್ಕೂ ಹೆಚ್ಚು ಮಂದಿ ದಾಳಿಗೆ ಒಳಗಾಗಿದ್ದಾರೆ.
ಏರಿಯಾದಲ್ಲಿ ಯಾರೂ ಬಾಲ ಬಿಚ್ಚಬಾರದು. ಲಾಕ್ ಡೌನ್ ಮುಗಿದ ಹಿನ್ನೆಲೆಯಲ್ಲಿ ಏನಾದರೂ ಮತ್ತೆ ಬಾಲ ಬಿಚ್ಚಿದರೆ ಪರಿಣಾಮ ಬೇರೆಯದ್ದೇ ಆಗಿರುತ್ತದೆ ಎಂದು ವಾರ್ನಿಂಗ್ ನೀಡಿದ್ದಾರೆ. ಪೊಲೀಸರು ಹೆಜ್ಜೆ ಸದ್ದು ಕೇಳುತ್ತಿದ್ದಂತೆ ಕೆಲವರು ಮನೆ ಬಿಟ್ಟು ಓಡಿ ಹೋಗಿದ್ದಾರೆ.