ಮಾ.25ಕ್ಕೆ ಯುವಕರಿಂದ ರಾಜಕೀಯ ಪಕ್ಷಗಳಿಗೆ 'ಎಚ್ಚರಿಕೆ ಸಮಾವೇಶ'
ಬೆಂಗಳೂರು, ಮಾರ್ಚ್ 22: 'ಉದ್ಯೋಗಕ್ಕಾಗಿ ಓಟು' ಆಂಧೋಲನದ ಮೂಲಕ ರಾಜ್ಯದ ಯುವಕರಲ್ಲಿ ಎಚ್ಚರಿಕೆ ಪ್ರಜ್ಞೆ ಮೂಡಿಸಿರುವ 'ಉದ್ಯೋಗಕ್ಕಾಗಿ ಯುವಜನರು' ತಂಡ ಈಗ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
ಮಾರ್ಚ್ 25 ರ ಭಾನುವಾರ ಬೆಂಗಳೂರು ಬಸವನಗುಡಿಯ ನ್ಯಾಷನಲ್ ಕಾಲೇಜು ಮೈದಾನದಲ್ಲಿ 'ಎಚ್ಚೆತ್ತ ಯುವಜನರು ಮತ್ತು ಗುತ್ತಿಗೆ ನೌಕರ ಕಾರ್ಯಕರ್ತರಿಂದ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶ' ಬೃಹತ್ ಸಮಾವೇಶವನ್ನು ಆಯೋಜಿಸಿದೆ.
ಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ಹಾಗೂ ಸಮಾನ ವೇತನವನ್ನು ಖಾತರಿ ಮಾಡಿಸುವುದು, ಕೃಷಿಯನ್ನು ಲಾಭದಾಯಕವಾಗಿಸುವುದು, ಕೃಷಿ ಆಧಾರಿತ ಲಕ್ಷಾಂತರ ಉದ್ಯೋಗಗಳನ್ನು ಸೃಷ್ಟಿಸುವುದರ ಕುರಿತೂ ಸ್ಪಷ್ಟ ಮುನ್ನೋಟವನ್ನು ಹೊತ್ತ ಯುವಜನರ ಪ್ರಣಾಳಿಕೆಯನ್ನು ರಾಜಕೀಯ ಪಕ್ಷಗಳು ಅಳವಡಿಸಿಕೊಳ್ಳುವ ಬಗ್ಗೆ, ಹಾಗೂ ಕಡ್ಡಾಯ ಉದ್ಯೋಗ ಸೃಷ್ಠಿಗೆ ಒತ್ತು ನೀಡುವ ಬಗ್ಗೆ ಈ ಸಮಾವೇಶದಲ್ಲಿ ಚರ್ಚೆ ಮಾಡಲಾಗುತ್ತದೆ.
ಈಗಾಗಲೇ 'ಯುವ ಪ್ರಣಾಳಿಕೆ'ಯನ್ನು ತಯಾರಿಸಿರುವ ಉದ್ಯೋಗಕ್ಕಾಗಿ ಯುವಜನರು ತಂಡ ಎಲ್ಲಾ ಪಕ್ಷಗಳ ಚುನಾವಣೆ ಪ್ರಣಾಳಿಕೆಯಲ್ಲಿ ಇದನ್ನು ಅಳವಡಿಸಿಕೊಳ್ಳುವಂತೆ ಆಗ್ರಹಿಸಿದೆ. 'ಯುವ ಪ್ರಣಾಳಿಕೆ' ಬಿಡುಗಡೆ ಕಾರ್ಯಕ್ರಮಕ್ಕೆ ಬಂದ ಕಾಂಗ್ರೆಸ್ ಪಕ್ಷವು ಇದನ್ನು ಗಂಭೀರವಾಗಿ ತೆಗೆದುಕೊಂಡು ಚರ್ಚಿಸುವುದಾಗಿ ಹೇಳಿದರೆ, ಜೆಡಿಎಸ್ ಮತ್ತು ಬಿಜೆಪಿ ಪಕ್ಷಗಳು ಒಪ್ಪಿಕೊಂಡೂ ಬಂದಿರಲಿಲ್ಲ. ನಂತರ ಆ ಕುರಿತು ಕ್ಷಮೆ ಕೇಳಿದವು, ಬಿಜೆಪಿ ಪಕ್ಷದ ಪ್ರಣಾಳಿಕೆ ಸಮಿತಿ ಅಧ್ಯಕ್ಷರು ತಮ್ಮ ಸಮಿತಿಯ ಮುಂದಿಡುವುದಾಗಿ ಹೇಳಿದ್ದಾರೆ. ಹಾಗಾಗಿ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಸಮಾವೇಶ ಆಯೋಜಿಸಲಾಗಿದೆ.
ಮಾರ್ಚ್ 22 ರಂದು ಕಾರ್ಯಕ್ರಮದಲ್ಲಿ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಜಸ್ಟೀಸ್ ಗೋಪಾಲಗೌಡ, ಹಿರಿಯ ವಕೀಲ ಪ್ರಶಾಂತ್ ಭೂಷಣ್, ಕರ್ನಾಟಕ ಜನಶಕ್ತಿಯ ಡಾ.ವಾಸು ಎಚ್.ವಿ. ಇವರುಗಳು ಯುವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಮಾರ್ಚ್ 25ರ ರಾಜಕೀಯ ಪಕ್ಷಗಳಿಗೆ ಎಚ್ಚರಿಕೆ ಕೊಡುವ ಸಮಾವೇಶದ 'ಮುಂದಿನ ಸರ್ಕಾರ ಯುವಜನರ ನಿರ್ಧಾರ'ದ ಫೇಸ್ಬುಕ್ ಪ್ರೊಫೈಲ್ ಫ್ರೇಮ್ ಅನ್ನು ಒಂದೇ ದಿನದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಜನ ಹಾಕಿಕೊಳ್ಳುವ ಮೂಲಕ ಅಭಿರುಚಿ ಪೂರ್ವ ಬೆಂಬಲ ಘೋಷಿಸಿದ್ದಾರೆ.