ಬಿಬಿಎಂಪಿ ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಎಎಪಿ ನಿರ್ಧಾರ
ಬೆಂಗಳೂರು ಆಗಸ್ಟ 06: ರಾಜ್ಯ ಬಿಜೆಪಿ ಸರ್ಕಾರವು ಅಧಿಕಾರ ದುರ್ಬಳಕೆ ಮಾಡಿಕೊಂಡು ಹಾಗೂ ಆಮ್ ಆದ್ಮಿ ಪಾರ್ಟಿಯನ್ನು ಗುರಿಯಾಗಿಸಿ ಬಿಬಿಎಂಪಿ ಚುನಾವಣೆಗೆ ವಾರ್ಡ್ ಮೀಸಲಾತಿ ನಿಗದಿ ಮಾಡಿದೆ ಎಂದು ಪಕ್ಷದ ಬೆಂಗಳೂರು ನಗರಾಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ಶನಿವಾರ ಬಿಬಿಎಂಪಿ ಚುನಾವಣೆ ವಾರ್ಡ ಮೀಸಲಾತಿ ಕುರಿತು ಸುದ್ದಿಗಾರರ ಜತೆ ಮಾತನಾಡಿದ ಅವರು, ಕೋವಿಡ್ ಸಂಕಷ್ಟ ಕಾಲದಲ್ಲಿ ಆಮ್ ಆದ್ಮಿ ಪಾರ್ಟಿ (ಎಎಪಿ) ಬೆಂಗಳೂರಿನಾದ್ಯಂತ ಹಲವು ರೀತಿಯ ಸಮಾಜಸೇವೆಗಳು ಕೈಗೊಂಡಿತ್ತು. ಎಎಪಿ ಕಾರ್ಯಕರ್ತರು ಕೋಟ್ಯಂತರ ಮಾಸ್ಕ್ಗಳನ್ನು ವಿತರಿಸಿದ್ದಾರೆ. ಸೂಕ್ಷ್ಮ ಪ್ರದೇಶಗಳಲ್ಲಿ ಸ್ಯಾನಿಟೈಜರ್ ಸಿಂಪಡಿಸಿದ್ದೇವೆ. ಅಗತ್ಯವಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಿದ್ದೇವೆ ಎಂದರು.
ಎಎಪಿ ಬೆಂಗಳೂರಿನ ಜನರ ಭಾವನೆಗೆ ಸ್ಪಂದಿಸಿದೆ. ಅಲ್ಲದೇ ದೆಹಲಿ, ಪಂಜಾಬ್ನಲ್ಲಿನ ಆಡಳಿತವನ್ನು ಗಮನಿಸಿದ ಜನರು ಎಎಪಿಯನ್ನು ದೊಡ್ಡ ಪ್ರಮಾಣದಲ್ಲಿ ಬೆಂಬಲಿಸುತ್ತಿದ್ದಾರೆ. ಇದಕ್ಕೆ ಹೆದರಿರುವ ಬಿಜೆಪಿಯು ಅಧಿಕಾರ ದುರ್ಬಳಕೆ ಮಾಡಿಕೊಂಡ ಬಿಜೆಪಿ ಬಿಬಿಎಂಪಿ ಚುನಾವಣೆ ಹಿನ್ನೆಲೆಯಲ್ಲಿ ವಾರ್ಡ್ಗಳಿಗೆ ಮೀಸಲಾತಿ ನಿಗದಿ ಪಡಿಸಿ ಕುತಂತ್ರ ಮಾಡಿದೆ ಎಂದು ದೂರಿದರು.
ವಾರ್ಡ್ ಮೀಸಲಾತಿಗೆ ಎಎಪಿ ಆಕ್ಷೇಪಣೆ
ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನ ಬಹುತೇಕ ವಾರ್ಡ್ಗಳಲ್ಲಿ ಮೂರು ಬಾರಿ ಮನೆಮನೆ ಪ್ರಚಾರ ಮಾಡಿದೆ. ಪ್ರತಿ ವಾರ್ಡ್ನಲ್ಲೂ
ಎಎಪಿಗೆ ಸಮರ್ಥ ನಾಯಕರು ಸಿಕ್ಕಿದ್ದಾರೆ. ವಕೀಲರು, ಎಂಜಿನಿಯರ್ಗಳು, ದಿಟ್ಟ ಮಹಿಳೆಯರು, ಸಮಾಜಸೇವಕರು ಸೇರಿದಂತೆ ಸೂಕ್ತ ಅಭ್ಯರ್ಥಿಗಳು ರೂಪುಗೊಂಡಿದ್ದಾರೆ. ಬಿಜೆಪಿಯು ಇದನ್ನೆಲ್ಲ ಸೂಕ್ಷ್ಮವಾಗಿ ಅಧ್ಯಯನ ಮಾಡಿ, ಎಎಪಿಯ ಸಂಭಾವ್ಯ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವ ದುರುದ್ದೇಶದಿಂದ ಮೀಸಲಾತಿ ಪಟ್ಟಿಗೆ ತಿದ್ದುಪಡಿ ತಂದಿದೆ. ಹೀಗಾಗಿ ಮೀಸಲಾತಿ ಪಟ್ಟಿಗೆ ಎಎಪಿ ಆಕ್ಷೇಪಣೆ ಸಲ್ಲಿಸಲು ನಿರ್ಧರಿಸಿದೆ ಎಂದು ಅವರು ವಿವರಿಸಿದರು.
ಕಂದಾಯ ಸಚಿವ ಆರ್.ಅಶೋಕ್ ಸೇರಿದಂತೆ ಅನೇಕ ಬಿಜೆಪಿ ನಾಯಕರು ಆಮ್ ಆದ್ಮಿ ಪಾರ್ಟಿ ರಾಜಕೀಯ, ಜನಪರ ಕಾರ್ಯಕ್ರಮ ಕಂಡು ಭಯಗೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅಧಿಕಾರ ಸಿಕ್ಕಿ ಮೂರು ವರ್ಷವಾದರೂ ಲೋಕಾಯುಕ್ತವನ್ನು ಬಲಪಡಿಸದ ಬಿಜೆಪಿಯು ಈಗ ಎಎಪಿಗೆ ಹೆದರಿ ಲೋಕಾಯುಕ್ತ ಸಬಲೀಕರಣದ ಬಗ್ಗೆ ಚಿಂತನೆ ನಡೆಸುತ್ತಿದೆ ವ್ಯಂಗ್ಯವಾಡಿದರು.
ರಾಜ್ಯ ಬಿಜೆಪಿಯ ಎಲ್ಲ ಕುತಂತ್ರಗಳಿಗೆ ಆಮ್ ಆದ್ಮಿ ಪಾರ್ಟಿಯು ಸೆಡ್ಡು ಹೊಡೆಯಲಿದೆ. ಬಿಬಿಎಂಪಿ ಚುನಾವಣೆಯಲ್ಲಿ 200ಕ್ಕೂ ಹೆಚ್ಚು ವಾರ್ಡ್ಗಳಲ್ಲಿ ಎಎಪಿ ಜಯಗಳಿಸುವುದು ನಿಶ್ಚಿತ ಎಂದು ಮೋಹನ್ ದಾಸರಿ ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.