ಡಿ.27ರಿಂದ ಬೆಂಗಳೂರಿನಲ್ಲಿ ಅವರೆಕಾಯಿ ಮೇಳ
ಶನಿವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ವಾಸವಿ ಕಾಂಡಿಮೆಂಟ್ಸ್ ಮಾಲೀಕರಾದ ಗೀತಾ ಶಿವಕುಮಾರ್ ಡಿ.27ರಿಂದ ಜ.7ವರೆಗೆ ಈ ಬಾರಿಯ ಅವರೆಕಾಯಿ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು. ಕಳೆದ 12 ವರ್ಷಗಳಿಂದ ಅವರೆಕಾಯಿ ಮೇಳವನ್ನು ನಿರಂತರವಾಗಿ ನಡೆಸಿಕೊಂಡು ಬರಲಾಗುತ್ತಿದ್ದು ಮೇಳದಲ್ಲಿ ಅವರೆಕಾಯಿ ಬಳಸಿ ಮಾಡಿದ ವಿವಿಧ ತಿಂಡಿ-ತಿನಿಸುಗಳು ಲಭ್ಯವಿರಲಿವೆ ಎಂದು ಹೇಳಿದರು.
ಮಾಗಡಿಯಲ್ಲಿ ಬೆಳೆಯುವ ಅವರೆಕಾಯಿಯನ್ನು ನೇರವಾಗಿ ಮೇಳಕ್ಕೆ ತರಿಸಲಾಗುತ್ತಿದ್ದು, ಈ ಬಾರಿ 9ಟನ್ ಅವರೆಕಾಯಿಯನ್ನು ನೇರವಾಗಿ ರೈತರಿಂದ ಖರೀದಿಸಲಾಗಿದ್ದು ಗ್ರಾಹಕರಿಗೆ ಮಾರಾಟ ಮಾಡಲಾಗುವುದು ಎಂದರು. ಅವರೆಕಾಯಿ ಇಡ್ಲಿ, ದೋಸೆ, ಪಾಯಸ, ಚಕ್ಕುಲಿ, ನಿಪ್ಪಟ್ಟು ಸೇರಿದಂತೆ ಮತ್ತಿತರ ಸಿಹಿ ಮತ್ತು ಖಾರ ತಿಂಡಿಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು.[ಕಡಲೆ ಕಾಯಿ ಪರಿಷೆ ಚಿತ್ರಗಳು]
ಡಿ.27ರಂದು ಬೆಳಗ್ಗೆ 10 ಗಂಟೆಗೆ ಅವರೆಮೇಳವನ್ನು ಮಹರ್ಷಿ ಆನಂದ್ ಗುರೂಜಿ ಉದ್ಘಾಟಿಸಲಿದ್ದು, ಬೆಂಗಳೂರು ಉಸ್ತುವಾರಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೃಷಿ ಸಚಿವ ಕೃಷ್ಣಭೈರೇಗೌಡ, ಶಾಸಕರಾದ ಆರ್.ವಿ.ದೇವರಾಜ್, ವಿಧಾನಪರಿಷತ್ ಸದಸ್ಯೆ ತಾರಾ ಅನುರಾಧ, ಮೇಯರ್ ಕಟ್ಟೆ ಸತ್ಯನಾರಾಯಣ್, ಪೊಲೀಸ್ ಆಯುಕ್ತ ರಾಘವೇಂದ್ರ ಔರಾದ್ಕರ್ ಮುಂತಾದವರು ಭಾಗವಹಿಸಲಿದ್ದಾರೆ ಎಂದು ಗೀತಾ ಶಿವಕುಮಾರ್ ಹೇಳಿದರು.
ಈ ಬಾರಿಯ ಅವರೆ ಮೇಳದಲ್ಲಿ ರೈತರಿಗೆ ಸನ್ಮಾನ ಹಾಗೂ ಬಡವರಿಗೆ ಬಟ್ಟೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು. ಬೆಂಗಳೂರಿನ ಸಜ್ಜನ್ ರಾವ್ ವೃತ್ತದ ವಿವಿಪುರಂನಲ್ಲಿ ಅವರೆಕಾಯಿ ಮೇಳ ನಡೆಯಲಿದೆ. ಅವರೆಕಾಯಿಂದ ಮಾಡಿದ ತಿಂಡಿಗಳ ರುಚಿ ನೋಡಬೇಕಾದರೆ, ಅವರೆ ಮೇಳಕ್ಕೆ ಹೋಗಿ ಬನ್ನಿ.