ವಿಟಿಯು ಶುಲ್ಕ ಹೆಚ್ಚಳ ವಿರೋಧಿಸಿ ವಿದ್ಯಾರ್ಥಿಗಳಿಂದ ಪ್ರತಿಭಟನೆ
ಮರುಮೌಲ್ಯಮಾಪನ ಫಲಿತಾಂಶಕ್ಕೂ ಮೊದಲೇ ಪೂರಕ ಪರೀಕ್ಷೆಗೆ ಶುಲ್ಕ ಸಂಗ್ರಹಿಸುತ್ತಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರಮ ಖಂಡಿಸಿ ನಗರದ ವಿವಿಧ ಕಾಲೇಜುಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿನ್ನೆ (ಮೇ 30) ಪ್ರತಿಭಟನೆ
ಬೆಂಗಳೂರು, ಮೇ 31: ಮರುಮೌಲ್ಯಮಾಪನ ಫಲಿತಾಂಶಕ್ಕೂ ಮೊದಲೇ ಪೂರಕ ಪರೀಕ್ಷೆಗೆ ಶುಲ್ಕ ಸಂಗ್ರಹಿಸುತ್ತಿರುವ ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕ್ರಮ ಖಂಡಿಸಿ ನಗರದ ವಿವಿಧ ಕಾಲೇಜುಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು ನಿನ್ನೆ (ಮೇ 30) ಪ್ರತಿಭಟನೆ ನಡೆಸಿದರು. ಫಲಿತಾಂಶ ವಿಳಂಬ, ಪರೀಕ್ಷಾ ಶುಲ್ಕ ಹೆಚ್ಚಳ ಸೇರಿದಂತೆ ಹಲವು ದೂರುಗಳನ್ನು ಹೊತ್ತ ವಿದ್ಯಾರ್ಥಿಗಳು ಅಖಿಲ ಭಾರತ ಡೆಮಾಕ್ರೆಟಿಕ್ ವಿದ್ಯಾರ್ಥಿ ಸಂಘದ (AIDSO) ನೇತೃತ್ವದಲ್ಲಿ ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದ ಬಳಿ ಪ್ರತಿಭಟನೆ ನಡೆಸಿದರು.
ವಿವಿಧ ಸೆಮಿಸ್ಟರ್ ಗಳ ಪರೀಕ್ಷೆಗಳು ಮುಗಿಸು ಆಅರು ತಿಂಗಳಾದರೂ ಇನ್ನೂ ಫಲಿತಾಂಶ ಬಂದಿಲ್ಲ. 650 ರೂ. ಇದ್ದ ಪರೀಕ್ಷಾ ಶುಲ್ಕವನ್ನು ಇದ್ದಕ್ಕಿದ್ದಂತೆ ದುಪ್ಪಟ್ಟು ಏರಿಸಿದ್ದು, ಇದೀಗ 1,300 ಪರೀಕ್ಷಾ ಶುಲ್ಕ ನೀಡಬೇಕಿದೆ. ವಿಟಿಯು ತನ್ನ ಬೊಕ್ಕಸ ತುಂಬಿಸಿಕೊಳ್ಳುವ ಉದ್ದೇಶ ಹೊಂದಿರುವುದರಿಂದ ವಿದ್ಯಾರ್ಥಿಗಳಿಗೆ ಆರ್ಥಿಕೆ ಹೊರೆ ಬೀಳುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, ಉಪಕುಲಪತಿ ಡಾ.ಕರಿಸಿದ್ದಪ್ಪ ಅವರೊಂದಿಗೆ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುವುದಾಗಿ ಹೇಳಿದ್ದಾರೆ.