ಹಿಂದೂ ರಾಷ್ಟ್ರ ಕಟ್ಟುವುದನ್ನು ಹೆಡ್ಗೆವಾರ್ ಪಾಠದಿಂದಲೇ ಕಲಿಯಬೇಕಾ..?
ಬೆಂಗಳೂರು, ಮೇ.25: ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ಕುರಿತು ನಗರದ ಗಾಂಧಿಭವನದಲ್ಲಿ ಜಾಗೃತ ನಾಗರಿಕರು ಕರ್ನಾಟಕ ವತಿಯಿಂದ ಸಮಾಲೋಚನಾ ಚರ್ಚೆ ನಡೆಸಲಾಯಿತು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ, ಪಠ್ಯ ಪುಸ್ತಕ ಒಂದು ಪ್ರಚಾರದ ಸಾಮಗ್ರಿಯ ಅಲ್ಲ. ಸರ್ಕಾರ ಪಠ್ಯ ಪರಿಷ್ಕರಣೆ ನಡೆಸುವಲ್ಲಿ ಸಂವಿಧಾನ ಉಲ್ಲಂಘಟನೆ ಮಾಡಿದೆ. ಯಾವ ಶಿಕ್ಷಣ ತಜ್ಞರ ಜೊತೆಗೂ ಚರ್ಚಿಸದೆ ಮನಸೋ ಇಚ್ಛೆ ಬಿಜೆಪಿ ಸರ್ಕಾರ ಪಠ್ಯ ಪರಿಷ್ಕರಣೆ ಮಾಡಲಾಗಿದೆ.
"ಹಿಂದೂ ರಾಷ್ಟ್ರವನ್ನು ಕಟ್ಟುವ ಪಾಠವನ್ನು ಹೆಡ್ಗೆವಾರ್ ಪಾಠದಿಂದಲೇ ಕಲಿಯಬೇಕಾ..? ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂವಿಧಾನವನ್ನು ಬುಡಮೇಲು ಮಾಡುವ ದೊಡ್ಡ ಹುನ್ನಾರ ನಡೆಸಲಾಗುತ್ತಿದೆ. ಮಹಾರಾಷ್ಟ್ರ, ಗುಜರಾತ್ ನಂತರ ಈ ಆಕ್ರಮಣ ಕರ್ನಾಟಕದಲ್ಲಿ ಇದೀಗ ಶುರುವಾಗಿದೆ. ಪಠ್ಯ ಪುಸ್ತಕದಲ್ಲಿ ಇತಿಹಾಸ ಬದಲಾಯಿಸುವುದು ಹೊಸ ಚರ್ಚೆ ಅಲ್ಲ, ಈ ಹಿಂದಿನಿಂದಲೂ ಈ ಚರ್ಚೆಗಳು ನಡೆದುಕೊಂಡು ಬರುತ್ತಿದೆ. ಸಂವಿಧಾನ ಪರವಾದ, ಸಂವಿಧಾನ ವಿರೋಧಿಗಳ ಗುಂಪು ಸದ್ಯ ಸೃಷ್ಡಿಯಾಗಿದೆ. ಚಿಲ್ಲರೆ ಜನರು ಅಂತ ಸಚಿವರು ಹೇಳ್ತಾರೆ, ಇದು ಯಾವ ಪರಿಚಯ ಭಾಷೆಯೋ ಗೊತ್ತಿಲ್ಲ," ಎಂದು ನಿರಂಜನಾರಾಧ್ಯ ಹೇಳಿದರು.
"ಬಿ.ಸಿ. ನಾಗೇಶ್ ಅವರಂತಹ ಒಬ್ಬ ಶಿಕ್ಷಣ ಸಚಿವರಿದ್ರೆ ಶಿಕ್ಷಣದ ವ್ಯವಸ್ಥೆ ಏನಾಗುಗತ್ತೋ..? ಪಠ್ಯಪುಸ್ತಕ ಪರಿಷ್ಕರಣೆ ಪರಿಶೀಲನಾ ಸಮಿತಿ ಅಧ್ಯಕ್ಷರ ಪರಿಚಯ ಕೊಡಿ ಅಂದ್ರೆ, ಶಿಕ್ಷಣ ಸಚಿವರು ರೋಹಿತ್ ಚಕ್ರತೀರ್ಥ ಒಬ್ಬ ಸಿಇಟಿ ಪ್ರೊಫೆಸರ್ ಅಂತಾರೆ. ಇದು ಹಾಸ್ಯಾಸ್ಪದ ಸಿಇಟಿ ಪ್ರೊಫೆಸರ್ ಎಂಬ ಪೋಸ್ಟ್ ಎಲ್ಲಿದೆ ಹೇಳಿ ಸಚಿವರೇ..? ಒಂದು ಪಠ್ಯ ತಯಾರಿಸುವಾಗ ಅಥವಾ ಪರಿಷ್ಕರಣೆ ಮಾಡುವಾಗ ಅದಕ್ಕೆ ಕೆಲವೊಂದು ಮಾನದಂಡಗಳ ಆಧಾರದ ಮೇಲೆ ಪರಿಷ್ಕರಣೆ ಮಾಡಬೇಕೆಂಬ ಕಾನೂನಿದೆ. ಪಠ್ಯಪುಸ್ತಕ ಪರಿಷ್ಕರಣೆ ನಮ್ಮದೇ ದೇಶದ್ದು ಆದರೂ ಅಂತರಾಷ್ಟ್ರೀಯ ನೆಲೆಗಟ್ಟಿನಲ್ಲೂ ಕೂತು ಯೋಚಿಸಬೇಕು," ಎಂದು ಹೇಳಿದರು.
"1996ರಲ್ಲಿ ಯುನೆಸ್ಕೋ ತಯಾರಿಸಿದ ಒಂದು ಫ್ರೇಮ್ ವರ್ಕ್ ಇಲ್ಲಿ ಗಮನಾರ್ಹವಾಗಿದೆ. ಇದರಲ್ಲಿ ಒಂದು ಪಠ್ಯದಲ್ಲಿ ಇರಲೇಬೇಕಾದ ಅಗತ್ಯ ವಸ್ತುಗಳ ಬಗ್ಗೆ ಉಲ್ಲೇಖಿಸಲಾಗಿದೆ. 1986 ಹಾಗೂ 1992ರ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲೂ ಇದನ್ನು ಒಳಗೊಳ್ಳಿಸಲಾಗಿದೆ. ಪಠ್ಯ ಪುಸ್ತಕದಲ್ಲಿ ಮಾನವೀಯ ಹಾಗೂ ಸಾಮಾಜಿಕ ಮೌಲ್ಯಗಳ ಉಲ್ಲೇಖದ ಬಗ್ಗೆ ಈ ಫ್ರೇಮ್ ವರ್ಕ್ ಹೇಳಲಾಗಿದೆ. ಆದರೆ ಬಿಜೆಪಿ ಸರ್ಕಾರ ಯಾವುದೇ ಶಿಕ್ಷಣ ತಜ್ಞರ ಜತೆ ಸಮಾಲೋಚಿಸಿದೆ ತಮಗೆ ಬೇಕಾದ ಹಾಗೆ ಪಠ್ಯ ಪರಿಷ್ಕರಣೆ ಮಾಡಿದೆ," ಎಂದರು.
ಇತಿಹಾಸದ ಮೂಲಕ ಹಿಂದೆ ಹೇಗಿತ್ತು..? ಮುಂದೆ ನಾವು ಹೇಗೆ ಕಟ್ಟಿಕೊಳ್ಳಬೇಕು ಎಂದು ಪಠ್ಯದ ಮೂಲಕ ಮಕ್ಕಳಿಗೆ ಹೇಳಿ ಕೊಡಬೇಕು. ಹಿಂದೆಲ್ಲಾ ಗೌಪ್ಯವಾಗಿ ನಡೆಯುತ್ತಿದ್ದ ಆಕ್ರಮಣ ಈಗ ಅಧಿಕಾರದ ಬಲದಿಂದ ಕುಲ್ಲಂಕುಲ್ಲವಾಗಿ ನಡೆಯುತ್ತಿದೆ. ಮೂಲಭೂತ ಮೌಲ್ಯಗಳನ್ನು ಪಾಲಿಸದೇ ಪ್ರಸ್ತುತ ಪಠ್ಯಪುಸ್ತಕ ಪರಿಷ್ಕರಣೆ ಮಾಡಲಾಗಿದೆ. ಮಾನವ ಹಕ್ಕುಗಳು, ಜ್ಞಾನ ಕಟ್ಟಿಕೊಡುವ ನಿಟ್ಟಿನಲ್ಲಿ ಸಮುದಾಯದ ವಿಚಾರಗಳನ್ನು ಪಠ್ಯದಲ್ಲಿ ಸೇರಿಸಬೇಕು.
ಪರಿಷ್ಕರಣೆ ಹೆಸರಿನಲ್ಲಿ 6.76 ಲಕ್ಷ ಪುಸ್ತಕಗಳು, ಅಂದರೆ ಸುಮಾರು 2.5 ಕೋಟಿ ರೂಗಳು ನಷ್ಟವಾಗಿದ್ದು, ಇದು ಸಾರ್ವಜನಿಕರ ಹಣ ನಷ್ಟವಾಗಿದೆ. ನಷ್ಟದ ಮೊತ್ತವನ್ನು ಶಿಕ್ಷಣ ಸಚಿವರಿಂದ ಅಥವಾ ಅವರನ್ನು ನೇಮಿಸಿದವರಿಂದ ವಸೂಲಿ ಮಾಡಬೇಕು. ಜೊತೆಗೆ ಸರ್ಕಾರ ಕೂಡಲೇ ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಕೈಬಿಡುವಂತೆ ಸಮಾಲೋಚನಾ ಸಭೆಯಲ್ಲಿ ಶಿಕ್ಷಣ ತಜ್ಞ ವಿ.ಪಿ.ನಿರಂಜನಾರಾಧ್ಯ ಆಗ್ರಹಿಸಿದರು.
Recommended Video