Voter Data Theft: ಚಿಲುಮೆ ಮುಖ್ಯಸ್ಥ ರವಿಕುಮಾರ್ ಆಪ್ತರ ಬಂಧನ
ಬೆಂಗಳೂರು, ಡಿಸೆಂಬರ್ 01: ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಮತದಾರರ ದತ್ತಾಂಶ ಕಳ್ಳತನ ಪ್ರಕರಣ ಮತ್ತಿಬ್ಬರ ಬಂಧನವಾಗಿದೆ. ಚಿಲುಮೆ ಸಂಸ್ಥೆಯ ಮುಖ್ಯಸ್ಥ ರವಿಕುಮಾರ್ ಆಪ್ತರು ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
'ಚಿಲುಮೆ' ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಮುಖ್ಯಸ್ಥನ ಆಪ್ತರಾದ ಅಭಿಷೇಕ್ ಮತ್ತು ಮಾರುತಿಗೌಡ ಎಂಬುವವರನ್ನು ಹಲಸೂರು ಗೇಟ್ ಪೊಲೀಸರು ಬುಧವಾರ ಬಂಧಿಸಿದ್ದಾರೆ.
Voter Data Theft: ಅಧಿಕಾರಿಗಳೇ ಚಿಲುಮೆ ಸದಸ್ಯರಿಗೆ ಐಡಿ ನೀಡಿದ್ದರು
ಈ ಮಾರುತಗೌಡ ಚಿಲುಮೆ ಮುಖ್ಯಸ್ಥ ಆರೋಪಿ ರವಿಕುಮಾರ್ನನ್ನು ಬಿಬಿಎಂಪಿಯ ಕಂದಾಯ ಅಧಿಕಾರಿಗಳಿಗೆ ಪರಿಚಯ ಮಾಡಿಕೊಟ್ಟಿದ್ದರು. ವಿಚಾರಣೆ ವೇಳೆ ರವಿ ನೀಡಿದ ಮಾಹಿತಿಯಂತೆ ಮಾರುತಿ ಅವರನ್ನು ಎರಡು ದಿನ ವಿಚಾರಣೆ ನಡೆಸಲಾಗಿತ್ತು. ಮಾರುತಿ ಸಹ ಮತದಾರರ ಸಮೀಕ್ಷೆಯ ಅಕ್ರಮದಲ್ಲಿ ಶಾಮೀಲಾಗಿದ್ದರ ಬಗ್ಗೆ ತಿಳಿದು ಬಂದ ಹಿನ್ನೆಲೆ ಅವರನ್ನು ಬಂಧಿಸಲಾಗಿದೆ.
ಸದ್ಯ ಬಂಧಿತ ಮಾರುತಿ ಮನೆಯಲ್ಲಿ ಶೋಧ ನಡೆಯುತ್ತಿದೆ. ಚಿಲುಮೆ ಸಂಸ್ಥೆಗೆ ಸೇರಿದ್ದ ಎರಡು ಮೊಬೈಲ್, ಲ್ಯಾಪ್ಟಾಪ್ ಹಾಗೂ ದಾಖಲೆಗಳು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ರವಿಕುಮಾರ್ ಮತ್ತೊಬ್ಬರ ಆಪ್ತನಾದ ಆರೋಪಿ ಅಭಿಷೇಕ್ನನ್ನು ಬೆಂಗಳೂರು ಪೊಲೀಸರು ಬೆಳಗಾವಿಯಲ್ಲಿ ಬಂಧಿಸಿ ಕರೆ ತಂದಿದ್ದಾರೆ. ಈತ ಬೆಂಗಳೂರಿನ ಎಲ್ಲ ವಲಯಗಳ ಕಂದಾಯ ಅಧಿಕಾರಿಗಳ ಜೊತೆಗೆ ಸಂಪರ್ಕ ಹೊಂದಿದ್ದ ಎಂದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಸಮೀಕ್ಷೆ, ಹಣಕಾಸು ವ್ಯವಹಾರದಲ್ಲಿ ಮಧ್ಯವರ್ತಿಯ ರೀತಿಯಲ್ಲಿ ಅಭಿಷೇಕ್ ಕೆಲಸ ಮಾಡುತ್ತಿದ್ದ. ಈ ಕಾರಣದಿಂದ ಬಿಬಿಎಂಪಿಯ ವಲಯಗಳ ಇನ್ನೊಂದಿಷ್ಟು ಅಧಿಕಾರಿಗಳನ್ನು ಪೊಲೀಸರು ವಿಚಾರಣ ನಡೆಸಿದ್ದಾರೆ.
ಮತದಾರರ ಅಕ್ರಮ ಮಾಹಿತಿ ಸಂಗ್ರಹ ಹಾಗೂ ಅವರುಗಳ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳ ಸಂಖ್ಯೆ 15ಕ್ಕೆ ಏರಿಕೆ ಆಗಿದೆ. ಅಲ್ಲದೇ ಆರೋಪ ಸಾಬೀತಾದ ಬೆನಲ್ಲೆ ಬಿಬಿಎಂಪಿ ಕಂದಾಯ ವಿಭಾಗದ ಮೂವರು ಅಧಿಕಾರಿಗಳನ್ನು ಮುಖ್ಯ ಆಯುಕ್ತರು ಅಮಾನತುಗೊಳಿಸಿದ್ದರು. ಜೊತೆಗೆ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಲಾಯಿತು.