ಕರ್ನಾಟಕದಿಂದ ವೋಡಾಫೋನ್ ಸಂಸ್ಥೆ ಹೊರದಬ್ಬಿ
ಬೇವು - ಬೆಲ್ಲದ ಉಗಾದಿ 2014 ರಲ್ಲಿ ಕಹಿ ಇಂದಲೇ ಕರ್ನಾಟಕಕ್ಕೆ ಶುರುವಾಗಿದೆ ಎಂದರೆ ತಪ್ಪಾಗಲಾರದು.ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಾಮ ಫಲಕದಲ್ಲಿ ಕನ್ನಡದ ಬಳಕೆ ಕುರಿತು ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾ ಮಾಡುವ ಮೂಲಕ, ಹೈ ಕೋರ್ಟ್ ವಿಭಾಗೀಯ ಪೀಠ ಉಗಾದಿಯ ಬೇವನ್ನು ಕನ್ನಡಿಗರಿಗೆ ತಿನಿಸಿದೆ.
ನಾಮ ಫಲಕಗಳಲ್ಲಿ ಕನ್ನಡದ ಬಳಕೆ ಕುರಿತು 'ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಿಯಮ-1963' ರ ಉಪನಿಯಮ 24-ಎ ಹೀಗೆ ಹೇಳುತ್ತದೆ : 'ರಾಜ್ಯದ ವಾಣಿಜ್ಯ ಮಳಿಗೆಗಳು, ಅಂಗಡಿಗಳ ನಾಮ ಫಲಕದಲ್ಲಿ ಕನ್ನಡವನ್ನೇ ಬಳಸಬೇಕು. ಬೇರೆ ಭಾಷೆಗಳಲ್ಲಿ ಹೆಸರು ಬರೆಸುವುದಿದ್ದರೆ, ಅದು ಕನ್ನಡದ ಹೆಸರಿನ ಕೆಳಗೆ ಇರಬೇಕು, ಬೇರೆ ಭಾಷೆಗಳಿಗಿಂತ ಹೆಚ್ಚಿನ ಜಾಗವನ್ನು ಕನ್ನಡಕ್ಕೇ ನೀಡಬೇಕು'.
ಉಪ ನಿಯಮ 24-ಎ ಅನ್ನು ಪಾಲಿಸಿರದ ವೊಡಾ ಫೋನ್, ಈ ನಿಯಮದ ವಿರುದ್ಧ ಹೈ ಕೋರ್ಟ್ ನಲ್ಲಿ ದಾವೆ ಹೂಡಿತ್ತು. ಮೊದಲು ಹೈಕೋರ್ಟ್ ನ ಏಕ ಸದಸ್ಯ ಪೀಠ ವಿಚಾರಣೆ ನಡೆಸಿ 'ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಿಯಮ-1963' ರ ಈ ನಿಯಮ ಸರಿಯಲ್ಲ ಎಂದು ತೀರ್ಪನ್ನು ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಸಲಾಗಿದ್ದ ರಾಜ್ಯಸರ್ಕಾರ ಮೇಲ್ಮನವಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ ವಿಭಾಗೀಯ ಪೀಠ, ಏಕ ಸದಸ್ಯ ಪೀಠ ಕೊಟ್ಟ ತೀರ್ಪನ್ನೇ ಪುರಸ್ಕರಿಸಿ ಆ ಆದೇಶವನ್ನೇ ಎತ್ತಿಹಿಡಿದಿದೆ.
ಹಿನ್ನೆಲೆ ಮತ್ತು ವಿವರ : ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಒಂದೇ ನುಡಿಯಾಡುವ ಜನರನ್ನು ಒಂದೇ ಸೂರಿನಡಿ ತರಲು ಭಾಷಾವಾರು ರಾಜ್ಯಗಳಾಗಿ ಮಾಡಿದ್ದು ಗೊತ್ತಿರುವ ವಿಷಯವೇ ಆಗಿದೆ. ಇದು ಕೇವಲ ಆಳ್ವಿಕೆಗೆ ಅನುಕೂಲವಾಗಲಿ ಎಂಬುದಷ್ಟಕ್ಕೆ ಮಾತ್ರ ಸೀಮಿತವಾಗಿರದೆ, ಆಯಾ ಭಾಷಿಕರ ನುಡಿ-ಸಂಸ್ಕೃತಿ-ಹಿತ ಕಾಯುವುದರ ಉದ್ದೇಶವೂ ಆಗಿತ್ತು ಎಂದು ಎಲ್ಲರಿಗು ತಿಳಿದಿದೆ. ಆಯಾ ರಾಜ್ಯದ, ನುಡಿಯ ಮತ್ತು ನುಡಿಯಾಡುವವರ ಹಿತ ಕಾಯುವುದು ಆಯಾ ರಾಜ್ಯಸರ್ಕಾರಗಳ ಕರ್ತವ್ಯವೇ ಆಗಿದೆ.
ಭಾರತ ಸಂವಿಧಾನದ ಆರ್ಟಿಕಲ್ 19(1)
ಆರ್ಟಿಕಲ್ 19(1) ರ ಪ್ರಕಾರ ಭಾರತದ ಎಲ್ಲ ನಾಗರೀಕರು - ಅಭಿವ್ಯಕ್ತಿ ಸ್ವಾತಂತ್ರ್ಯದ, ಭಾರತದೆಲ್ಲೆಡೆ ಓಡಾಡುವ, ತಮಗಿಷ್ಟ ಬಂದ ಕಡೆ ಜೀವನ ನಡೆಸುವ, ಸಂಘ-ಒಕ್ಕೂಟಗಳನ್ನು ಮಾಡಿಕೊಳ್ಳುವ ಮತ್ತು ತಮ್ಮಿಷ್ಟದ (ಕಾನೂನು ಬಾಹಿರವಲ್ಲದ) ವ್ಯಾಪಾರವನ್ನು-ಕಸುಬನ್ನು ಮಾಡುವ ಹಕ್ಕನ್ನು ಹೊಂದಿರುತ್ತಾರೆ. ಈ ಹಕ್ಕುಗಳ ಕುರಿತಾಗಿ ಕಾನೂನುಗಳನ್ನು ಮಾಡುವ ಅಧಿಕಾರ ಆಯಾ ರಾಜ್ಯಗಳಿಗಿದ್ದು, ಆ ನಿಯಮಗಳು ಸಂವಿಧಾನದ ಮೂಲ ಆಶಯಕ್ಕೆ ಮತ್ತು ಭಾರತದ ಅಖಂಡತೆಗೆ ಧಕ್ಕೆ ತರುವಂತಿರಬಾರದು ಎಂಬ ಕಟ್ಟಳೆ ಕೂಡ ಇದೆ.
ಆರ್ಟಿಕಲ್ 19(1) ನಾಗರೀಕರಿಗೆ ಅಥವಾ ಸಂಸ್ಥೆಗಳಿಗೆ ವ್ಯಾಪಾರ ನಡೆಸುವ ಹಕ್ಕನ್ನು ನೀಡಿದ್ದು, ಹೀಗೇ ನಡೆಸಬೇಕು ಎಂಬ ಕಟ್ಟು ಪಾಡನ್ನು ಹೇರಿಲ್ಲ. ವೊಡ ಫೋನ್ ಪ್ರಕಾರ, ನಾಮ ಫಲಕಗಳಲ್ಲಿ ಕನ್ನಡವನ್ನು ಕಡ್ಡಾಯ ಮಾಡುವುದು, ವ್ಯಾಪಾರವನ್ನು 'ಹೀಗೆ ಮಾಡಿರಿ' ಎಂಬ ಧೋರಣೆಯಾಗಿದ್ದು ಸಂವಿಧಾನ ದತ್ತ ಹಕ್ಕಿಗೆ ಧಕ್ಕೆಯಾಗಿದೆ ಎಂಬುದಾಗಿದೆ.
ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಿಯಮ
ಹಾಗೆಯೇ, 'ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಮಳಿಗೆಗಳ ನಿಯಮ-1963' ಮೂಲತಃ ವಾಣಿಜ್ಯ ಸಂಸ್ಥೆ ಮತ್ತು ಮಳಿಗೆಗಳಲ್ಲಿನ ಉದ್ಯೋಗ ಮತ್ತು ಉದ್ಯೋಗಿಗಳ ಕುರಿತಾಗಿದ್ದು, ನಾಮಫಲಕಗಳಲ್ಲಿ ಕನ್ನಡದ ಬಳಕೆ ಈ ನಿಯಮಗಳ ವ್ಯಾಪ್ತಿಗೆ ಬರಲಾರದು ಎಂಬ ವಾದವನ್ನೂ ಮಂಡಿಸಿದೆ. ಒಂದೊಮ್ಮೆ 'ನಾಮಫಲಕದಲ್ಲಿ ಕನ್ನಡ' ಬಳಕೆ ಕುರಿತು ಪ್ರತ್ಯೇಕ ನಿಯಮವನ್ನು ರಾಜ್ಯ ಸರ್ಕಾರ ಮಾಡಿದರೂ ಆರ್ಟಿಕಲ್ 19(1) ನ್ನೇ ಮುಂದು ಮಾಡಿ, ಹೊಸ ನಿಯಮವನ್ನೂ ಪಾಲಿಸದಿರುವ ಸೂಚನೆಗಳೂ ಇಲ್ಲಿ ಕಾಣುತ್ತಿವೆ!
ಹಾಗಾದ್ರೆ ಮುಂದೇನು? ಗ್ರಾಹಕರು ಏನು ಮಾಡಬೇಕು?
ಈ ಸಮಸ್ಯೆಯನ್ನು ಬಗೆಹರಿಸುವುದರಲ್ಲಿ ಸರ್ಕಾರದ ಪಾತ್ರ ಎಷ್ಟಿದೆಯೋ ಗ್ರಾಹಕರ ಪತ್ರವೂ ಅಷ್ಟೇ ಇದೆ:
ಸಮಸ್ಯೆಯನ್ನು ಕಾನೂನಾತ್ಮಕವಾಗಿ ಎದುರಿಸಿ ರಾಜ್ಯದ ಜನರ ಹಿತ ಕಾಯುವ ಮತ್ತು ತಾನು ರೂಪಿಸಿರುವ ನಿಯಮಗಳನ್ನು ಜಾರಿಗೊಳಿಸುವ ಜವಾಬ್ದಾರಿ ರಾಜ್ಜ್ಯಸರ್ಕಾರದ್ದೇ ಆಗಿದೆ. ಭಾರತ ಸಂವಿಧಾನದಲ್ಲಿ ದಾಖಲಾದ ಹುಳುಕಿನ ಭಾಷಾನೀತಿಯೇ, ರಾಜ್ಯಗಳು ತಮ್ಮ ನಾಡಿನ ನುಡಿ-ಸಂಸ್ಕೃತಿ-ಸಾರ್ವಭೌಮತೆ ಕಾಯ್ದು ಕೊಳ್ಳಲು ಅಡ್ಡಗಾಲಾಗಿ ಪರಿಣಮಿಸಿದ್ದು ಅದನ್ನು ಸರಿಪಡಿಸುವ ಎಲ್ಲ ಪ್ರಯತ್ನಗಳನ್ನೂ ರಾಜ್ಯವು ಮಾಡಬೇಕಿದೆ. ಆ ನಿಟ್ಟಿನಲ್ಲಿ ಉಳಿದ ರಾಜ್ಯಗಳ ಸಹಕಾರ ಪಡೆದು ಕೇಂದ್ರದ ಮೇಲೆ ಸತತವಾಗಿ ಒತ್ತಡ ಹೇರುತ್ತಾ ಭಾಷಾನೀತಿ ಬದಲಾಯಿಸುವತ್ತ ರಾಜ್ಯವು ಹೆಜ್ಜೆ ಇಡಬೇಕಿದೆ.
ಅಂಕಿ-ಅಂಶಗಳ ಪ್ರಕಾರ ವೊಡಾಫೋನ್
ಅಂಕಿ-ಅಂಶಗಳ ಪ್ರಕಾರ ವೊಡಾಫೋನ್ ಕರ್ನಾಟಕದಲ್ಲಿ 71,65,892 ಚಂದಾದಾರರನ್ನು ಹೊಂದಿದೆ [coai.com Report]. ಇದು ಕರ್ನಾಟಕದ ಮೊಬೈಲ್ ಮಾರುಕಟ್ಟೆಯ 18% ಅನ್ನು ಹೊಂದಿದೆ. ಮತ್ತು ಒಬ್ಬ ಚಂದಾದಾರನಿಂದ ತಿಂಗಳಿಗೆ ರೂ. 100 ಸಂದಾಯವಾಗುತ್ತದೆ ಎಂದು ಅಂದಾಜಿಸಿದರೆ, ವೊಡಾಫೋನ್ ಗೆ ಕರ್ನಾಟಕದಿಂದ ಬರುವ ತಿಂಗಳ ವರಮಾನ ರೂ. 71 ಕೋಟಿ. ವರ್ಷಕ್ಕೆ 860 ಕೋಟಿ. ಇದು ಯಾವ ಕಡೆ ಇಂದ ಅಳೆದು-ತೂಗಿದರೂ ಕಡಿಮೆ ವಹಿವಾಟಿನ ಮೊತ್ತವಲ್ಲ.
ಇಷ್ಟು ದೊಡ್ಡ ಮಟ್ಟದ ವ್ಯಾಪಾರ ನೀಡಲು ಕನ್ನಡಿಗರು ಬೇಕಿರುವ ವೊಡಫೋನ್ ಗೆ ನಾಮ ಫಲಕದಲ್ಲಿ ಕನ್ನಡ ಬಳಸಿ ಕನ್ನಡಿಗರಿಗೆ ಅನುಕೂಲ ಮಾಡಿಕೊಡುವುದು ಬೇಕಿಲ್ಲ ಮತ್ತು ಕರ್ನಾಟಕದ 'ಋಣ' ತೀರಿಸುವುದು ಬೇಕಿಲ್ಲ. ಈ ನೆಲಕ್ಕೆ ಇಲ್ಲಿನ ಕಾನೂನಿಗೆ ಗೌರವ ನೀಡದ ಈ ಸಂಸ್ಥೆಯ ಕನ್ನಡಿಗ ಗ್ರಾಹಕರು ಇದೇ ಕಾರಣವನ್ನು ಮುಂದುಮಾಡಿ, ಇವರ ಸೇವೆಗೆ ತಕ್ಷಣವೇ ಎಳ್ಳು-ನೀರು ಬಿಟ್ಟು ಇವರ ಸ್ಪರ್ಧಿಗಳತ್ತ ಹೆಜ್ಜೆ ಹಾಕಬೇಕಿದೆ.
ಆನ್ ಲೈನ್ ಪಿಟೀಷನ್ ಗೆ ಸಹಿಹಾಕಿ
ಇದೀಗ ಉಚ್ಚನ್ಯಾಯಾಲಯವು ನೀಡಿರುವ ತೀರ್ಪಿನ ಕೂಲಂಕಶ ಅಧ್ಯಯನಕ್ಕಾಗಿ ಸಮಿತಿಯನ್ನು ರಚಿಸಿ ಯಾವ ರೀತಿಯಲ್ಲಿ ಈ ತೀರ್ಪನ್ನು ಎದುರಿಸಬೇಕೆಂದು ಚರ್ಚಿಸಿ ಸೂಕ್ತ ಕಾನೂನು ಹೋರಾಟವನ್ನು ಮುಂದುವರೆಸತಕ್ಕದ್ದು. ಆನ್ ಲೈನ್ ಅರ್ಜಿಗೆ ಸಹಿ ಹಾಕಿರಿ [ವಿವರ ಇಲ್ಲಿ ಓದಿ]