ಸಿದ್ದರಾಮಯ್ಯ ವಿರುದ್ಧ ಬೇಗ್ ಹೇಳಿಕೆ: ವಿಶ್ವನಾಥ್ ಸಮರ್ಥನೆ
ಬೆಂಗಳೂರು, ಮೇ 21: ಕೊನೆಯಲ್ಲಾದರೂ ವಸ್ತು ಸ್ಥಿತಿ ಅರ್ಥವಾಯಿತಲ್ಲ ರೋಷನ್ ಬೇಗ್ ಹೇಳಿಕೆಯಲ್ಲಿ ಏನು ತಪ್ಪಿಲ್ಲ ಅವರು ಹೇಳಿದ್ದು ಎಲ್ಲವೂ ಸತ್ಯ ಎಂದು ವಿಶ್ವನಾಥ್ ಬೇಗ್ ಪರವಾಗಿ ಮಾತನಾಡಿದ್ದಾರೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಒಂದೊಮ್ಮೆ ಹಿನ್ನಡೆಯಾದರೆ ಅದಕ್ಕೆ ಸಿದ್ದರಾಮಯ್ಯ ಅವರೇ ಕಾರಣ ಎಂದು ರೋಷನ್ ಬೇಗ್ ಹೇಳಿದ್ದರು. ಆ ಮಾತನ್ನು ಸಮರ್ಥಿಸಿಕೊಂಡಿರುವ ವಿಶ್ವನಾಥ್ ರೋಷನ್ ಬೇಗ್ ಸತ್ಯವನ್ನೇ ಹೇಳಿದ್ದಾರೆ ಎಂದಿದ್ದಾರೆ.
ಸಿದ್ದರಾಮಯ್ಯ ಮೇಲೆ ಕೆಂಡಕಾರಿದ ರೋಷನ್ ಬೇಗ್: ಸೋತ್ರೆ ನೀವೇ ಕಾರಣ
ಲೋಕಸಭೆಯಲ್ಲಿ ನಮಗೆ ಹಿನ್ನಡೆಯಾದರೆ ರಾಜ್ಯದ ಕಾಂಗ್ರೆಸ್ ಶಾಸಕಾಂಗ ಸಭೆಯ ನಾಯಕ ಸಿದ್ದರಾಮಯ್ಯ ಹಾಗೂ ನಮ್ಮ ಅಧ್ಯಕ್ಷ ದಿನೇಶ್ ಗುಂಡೂರಾವ್ ಕಾರಣ. ಎಕ್ಸಿಟ್ ಪೋಲ್ ನೋಡಿದರೆ ನನಗೆ ಬೇಸರವಾಗುತ್ತದೆ ಎಂದು ಬಹಿರಂಗವಾಗಿಯೇ ಅಸಮಾಧಾನ ಹೊರ ಹಾಕಿದ್ದಾರೆ. ಆದರೆ ರೋಷನ್ ಬೇಗ್ ಹೇಳಿಕೆಗೆ ತಲೆ ಕೆಡಿಸಿಕೊಳ್ಳದ ದಿನೇಶ್ ಗುಂಡೂರಾವ್ ಬೇಗ್ ಅವರು ರಾಜೀನಾಮೆ ನೀಡುವುದಾದರೆ ನೀಡಲಿ ಎಂದು ತಿರುಗೇಟು ನೀಡಿದ್ದಾರೆ.
ಕುಮಾರಸ್ವಾಮಿ, ದೇವೇಗೌಡರ ಮನೆ ಬಾಗಿಲಿಗೆ ಹೋಗಿ ನಾವು ನಿಮ್ಮೊಂದಿಗೆ ಸೇರಿ ಸರ್ಕಾರ ರಚಿಸಲು ಸಿದ್ಧರಿದ್ದೇವೆ ಎಂದು ಹೇಳಿ ಈಗ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಹೇಳಿದ್ದು ಎಲ್ಲರಲ್ಲೂ ಆತಂಕ ಮೂಡಿಸಿತ್ತು.
ಕಾಂಗ್ರೆಸ್ ಅಲ್ಪಸಂಖ್ಯಾತರ ಪರ ಕೆಲಸ ಮಾಡುತ್ತಿಲ್ಲ. ಕ್ರಿಶ್ಚಿಯನ್ನರಿಗೆ ಟಿಕೆಟ್ ಕೊಟ್ಟಿಲ್ಲ ಅದಕ್ಕೆ ಬೇರೆ ಕಾರಣ ಇದೆ. ನಮ್ಮ ಅಧ್ಯಕ್ಷರ ವಿರುದ್ಧ ನನಗೆ ಬೇಜಾರಿದೆ. ಇವತ್ತಿನ ರಾಜ್ಯ ಕಾಂಗ್ರೆಸ್ಸಿಗೆ ಈ ದುಸ್ಥಿತಿ ಬರಲು ದಿನೇಶ್ ಗುಂಡೂರಾವ್ ಮತ್ತು ಸಿದ್ದರಾಮಯ್ಯ ಅವರೇ ಕಾರಣ ಎಂದು ನೇರವಾಗಿಯೇ ವಾಗ್ದಾಳಿ ನಡೆಸಿದ್ದರು.