ಬೆಂಗಳೂರು: ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ದಾಂಧಲೆಯ ಹಿಂದು-ಮುಂದು
ಬೆಂಗಳೂರು, ಆಗಸ್ಟ್.12: ಸಿಲಿಕಾನ್ ಸಿಟಿಯ ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ನಡೆದ ದಾಂಧಲೆ ಬೆನ್ನಲ್ಲೇ ಮುಖ್ಯಮಂತ್ರಿ ಬಿ.ಎಸ್,ಯಡಿಯೂರಪ್ಪ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಭೆ ಕರೆದಿದ್ದಾರೆ.
Recommended Video
ಬೆಂಗಳೂರಿನ ಸಿಎಂ ನಿವಾಸ ಕಾವೇರಿಯಲ್ಲಿ ಬುಧವಾರ ಅಧಿಕಾರಿಗಳು ಮತ್ತು ಸಚಿವರ ಪೊಲೀಸರ ಸಭೆ ನಡೆಸಲಿರುವ ಸಿಎಂ ಯಡಿಯೂರಪ್ಪ ದಾಂಧಲೆ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ಸಂಜೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸಿಎಂರನ್ನು ಭೇಟಿ ಮಾಡಿ ಮಾಹಿತಿ ನೀಡಲಿದ್ದಾರೆ.
ಒಂದು ಸಮುದಾಯದ ವಿರುದ್ಧ ಪೋಸ್ಟ್: ಆರೋಪಿ ನವೀನ್ ಬಂಧನ
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಲಹೆ ಮೇರೆಗೆ ಪ್ರಕರಣದ ಸ್ವರೂಪ ಮತ್ತು ತನಿಖೆ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿದು ಬಂದಿದೆ. ಕೆ.ಜಿ.ಹಳ್ಳಿ ಮತ್ತು ಡಿ.ಜಿ ಹಳ್ಳಿ ಪ್ರದೇಶಗಳು ಬೂದಿ ಮುಚ್ಚಿದ ಕೆಂಡದಂತೆ ಆಗಿದ್ದು, ಡಿಸಿಪಿ ಶರಣಪ್ಪ, ಡಿಸಿಪಿ ರವಿಕುಮಾರ್ ಬೆಳ್ಳಂಬೆಳಗ್ಗೆ ಫೀಲ್ಡ್ ಗೆ ಇಳಿಯಲಿದ್ದಾರೆ. ಈವರೆಗೂ ದಾಂಧಲೆಗೆ ಸಂಬಂಧಿಸಿದಂತೆ 147ಕ್ಕೂ ಹೆಚ್ಚು ಆರೋಪಿಗಳನ್ನು ಬಂಧಿಸಲಾಗಿದೆ.
ಪೊಲೀಸರ ಗುಂಡಿನ ದಾಳಿಯಲ್ಲಿ ಮೂವರು ಸಾವು
ಕಾಡುಗೊಂಡನಹಳ್ಳಿ (ಕೆ.ಜಿ.ಹಳ್ಳಿ) ಮತ್ತು ದೇವರ ಜೀವನಹಳ್ಳಿ(ಡಿ.ಜೆ.ಹಳ್ಳಿ)ಯಲ್ಲಿ ನಡೆದ ದಾಂಧಲೆ ನಿಯಂತ್ರಿಸಲು ಪೊಲೀಸರು ಫೈರಿಂಗ್ ನಡೆಸಿದ್ದರು. ಈ ವೇಳೆ ಪೊಲೀಸರ ಗುಂಡಿನ ದಾಳಿಗೆ ಮೂವರು ಬಲಿಯಾಗಿದ್ದಾರೆ. ಪೊಲೀಸರ ಗುಂಡಿನ ದಾಳಿಯಲ್ಲಿ ಒಬ್ಬ ವ್ಯಕ್ತಿ ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದರೆ, ಗಾಯಗೊಂಡ ಇಬ್ಬರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಗುಂಡಿನ ದಾಳಿಯಿಂದ ಗಾಯಗೊಂಡ ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಿದ್ದರೆ, ಅಲ್ಲಿಂದ ಆರೂ ಮಂದಿ ಪರಾರಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ಘಟನೆಯಲ್ಲಿ ಗಾಯಗೊಂಡ 100ಕ್ಕೂ ಹೆಚ್ಚು ಪೊಲೀಸರನ್ನು ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಸಿಲಿಕಾನ್ ಸಿಟಿಯ ಗಲ್ಲಿ ಗಲ್ಲಿಯಲ್ಲೂ ಪೊಲೀಸ್ ಭದ್ರತೆ
ಮಂಗಳವಾರ ತಡರಾತ್ರಿ ಕಾಡುಗೊಂಡನಹಳ್ಳಿ ಮತ್ತು ದೇವರಜೀವನಹಳ್ಳಿಯಲ್ಲಿ ನಡೆದ ದಾಂಧಲೆಯಿಂದ ಈ ಪ್ರದೇಶವಷ್ಟೇ ಅಲ್ಲದೇ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತೆ ಆಗಿದೆ. ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ, ಪುಲಕೇಶಿನಗರ, ಕಾವಲ್ ಬೈರಸಂದ್ರ ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆಗೆ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್ ಸಭೆ ನಡೆಸಿದ್ದು, ನಗರದಾದ್ಯಂತ ಹೈಅಲರ್ಟ್ ಘೋಷಿಸಲಾಗಿದೆ. ಅದರಲ್ಲೂ ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಪ್ರದೇಶಗಳಲ್ಲಿ ಭದ್ರತೆಗಾಗಿ ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಾಟೆ: ಪೊಲೀಸರ ಗುಂಡಿಗೆ ಮೂವರು ಬಲಿ
ಕೆ ಜಿ ಹಳ್ಳಿ ಡಿಜೆ ಹಳ್ಳಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ಬೀಡು ಬಿಟ್ಟಿದ್ದಾರೆ. ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಎಡಿಜಿಪಿ ಉಮೇಶ್ ಕುಮಾರ್, ಪೂರ್ವ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತ ಮುರುಗನ್, ಪಶ್ಚಿಮ ವಿಭಾಗ ಹೆಚ್ಚುವರಿ ಪೋಲಿಸ್ ಆಯುಕ್ತ ಸೋಮೆಂದ್ ಮುಖರ್ಜಿ, ಐಜಿಪಿ ಚಂದ್ರಶೇಖರ್, ಐಜಿಪಿ ಹೇಮಂತ್ ನಿಂಬಾಳ್ಕರ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್, ಸಂಚಾರಿ ಜಂಟಿ ಆಯುಕ್ತ ರವಿಕಾಂತೆಗೌಡ, ಡಿಐಜಿ ಡಾ.ಹರ್ಷ, ಡಿಸಿಪಿಗಳಾದ ಶರಣಪ್ಪ. ಅನುಚೇತ್, ಭೀಮಾ ಶಂಕರ ಗುಳೇದ್, ದೇವರಾಜ್, ಧರ್ಮೇಂದ್ರ ಕುಮಾರ್ ಮೀನಾ, ಶಶಿಕುಮಾರ್, ರಮೇಶ್ ಬಾನೋತ್, ರೋಹಿಣಿ ಕಟೋಚ್, ರಾಹುಲ್ ಕುಮಾರ್, ರವಿಕುಮಾರ್ ಕೆಪಿ ಸೇರಿ ಒಟ್ಟು ಇಪ್ಪತ್ತು ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸಿಲಿಕಾನ್ ಸಿಟಿಯ ಎರಡು ಪ್ರದೇಶಗಳು ಉದ್ವಿಗ್ನ
ಬೆಂಗಳೂರಿನ ಕಾವಲ್ ಬೈರಸಂದ್ರದಲ್ಲಿ ಇರುವ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರು ಗಲಾಟೆ ಶುರುವಾಯಿತು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಮುಂದಾಗುತ್ತಿದ್ದಂತೆ ನೂರಾರು ಉದ್ರಿಕ್ತರ ಗುಂಪು ಕಲ್ಲು ಮತ್ತು ಬಾಟಲಿ ತೂರಾಟ ನಡೆಸಿದರು. ಕೆ.ಜಿ. ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಪೊಲೀಸರ ವಾಹನಕ್ಕೆ ಬೆಂಕಿ ಹಚ್ಚಿದರು, ಇತ್ತ ಡಿ.ಜಿ.ಹಳ್ಳಿಯಲ್ಲೂ ಉದ್ರಿಕ್ತರ ಆಕ್ರೋಶಕ್ಕೆ ಬೀದಿ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲ ಹೊತ್ತಿ ಉರಿದವು. ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು, ಗಾಳಿಯಲ್ಲಿ ಗುಂಡು ಹಾರಿಸಿದರು.
ಕೆ.ಜಿ.ಹಳ್ಳಿ ಮತ್ತು ಡಿ.ಜೆ.ಹಳ್ಳಿ ಗಲಾಟೆ ಹಿಂದಿನ ಕಾರಣವೇನು?
ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರಳಿಯ ನವೀನ್, ಒಂದು ಸಮುದಾಯದ ವಿರುದ್ಧ ಪೋಸ್ಟ್ ಹಾಕಿದ್ದಾರೆ ಎಂಬ ಆರೋಪವಿದೆ. ಈ ಹಿನ್ನೆಲೆ ಮೊದಲಿಗೆ ಕಾವಲ್ ಬೈರಸಂದ್ರದಲ್ಲಿರುವ ಶಾಸಕರ ನಿವಾಸದ ಎದುರು ನೂರಾರು ಮಂದಿ ಉದ್ರಿಕ್ತರು ನೆರೆದು ಗಲಾಟೆ ಶುರು ಮಾಡಿದರು, ನೋಡನೋಡುತ್ತಿದ್ದಂತೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿತು. ಶಾಸಕರ ಮನೆ ಗಾಜುಗಳಿಗೆ ಕಲ್ಲುತೂರಿದ ಉದ್ರಿಕ್ತರು ಮನೆ ಎದುರಿಗಿದ್ದ ವಾಹನಗಳನ್ನು ಪುಡಿಗಟ್ಟಿದರು. ದುಷ್ಕರ್ಮಿಗಳು ನಡೆಸಿದ ದುಷ್ಕೃತ್ಯಕ್ಕೆ ಶಾಸಕರ ನೆಲಮಹಡಿಯು ಸಂಪೂರ್ಣ ಸುಟ್ಟು ಭಸ್ಮವಾಗಿದೆ.