ಡಿಜೆ ಹಳ್ಳಿ, ಕೆಜಿ ಹಳ್ಳಿ ಹಿಂಸಾಚಾರ: ಶೋಭಾ ಕರಂದ್ಲಾಜೆ ಮಾಡಿದ ಗಂಭೀರ ಆರೋಪ
ಬೆಂಗಳೂರು, ಆ 12: ಬೆಂಗಳೂರು ಪೂರ್ವ ಭಾಗದ ಡಿಜೆ ಹಳ್ಳಿ, ಕೆಜಿ ಹಳ್ಳಿ ಮತ್ತು ಕಾವಲ್ ಭೈರಸಂದ್ರದಲ್ಲಿ ನಡೆದ ಪುಂಡಾಟಿಕೆ, ಹಿಂಸಾಚಾರದ ಬಗ್ಗೆ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
Recommended Video
ಈ ಘಟನೆ ವ್ಯವಸ್ಥಿತವಾದ ಷಡ್ಯಂತ್ರ ಎಂದಿರುವ ಶೋಭಾ, "ಸಾಮಾಜಿಕ ತಾಣದಲ್ಲಿ ಹಾಕಲಾಗಿರುವ ಪೋಸ್ಟ್ ಬಗ್ಗೆ ಸಂಶಯವಿದೆ. ಈ ಪೋಸ್ಟ್ ಅನ್ನು ಮುಸಲ್ಮಾನ ಜನಾಂಗದವರೇ ಹಾಕಿದ್ದಾರೆ ಎನ್ನುವುದರ ಬಗ್ಗೆಯೂ ವರದಿಯಿದೆ"ಎಂದು ಶೋಭಾ ಆರೋಪಿಸಿದ್ದಾರೆ.
ಕೆ.ಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ನವೀನ್ ಬಿಜೆಪಿ ಬೆಂಬಲಿಗ: ಡಿ.ಕೆ. ಶಿವಕುಮಾರ್
"ಪೊಲೀಸರು ಸೂಕ್ತವಾದ ತನಿಖೆಯನ್ನು ಕೂಡಲೇ ನಡೆಸಿ, ಪಾಷಾ ಮತ್ತು ಅವನ ಬೆಂಬಲಿಗರನ್ನು ಬಂಧಿಸಬೇಕು. ಪೊಲೀಸ್ ಸ್ಟೇಷನ್ ಗೆ ಮೂರು ಸಾವಿರ ಜನ ವ್ಯವಸ್ಥಿತವಾಗಿ ಹೇಗೆ ಬಂದರು. ಅವರ ಕೈಗೆ ಪೆಟ್ರೋಲ್ ಸೇರಿದಂತೆ, ಮಾರಕಾಸ್ತ್ರಗಳು ಹೇಗೆ ಬಂತು"ಎಂದು ಶೋಭಾ ಕರಂದ್ಲಾಜೆ ಪ್ರಶ್ನಿಸಿದ್ದಾರೆ.
"ಪೊಲೀಸ್ ಠಾಣೆಗೇ ದಾಳಿ ಮಾಡುತ್ತಾರೆ ಎಂದರೆ ಇವರಿಗೆ ಇಂತಹ ಧೈರ್ಯ, ಬೆಂಬಲ ಯಾರಿಂದ ಬಂತು. SDPI ಮತ್ತು ಕಾಂಗ್ರೆಸ್ ನಡುವೆ, ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ನಡೆದ ಮೇಲಾಟವಿದು ಎಂದು ಅತ್ಯಂತ ಸ್ಪಷ್ಟವಾಗುತ್ತದೆ"ಎನ್ನುವ ಗಂಭೀರ ಆರೋಪವನ್ನು ಶೋಭಾ ಕರಂದ್ಲಾಜೆ ಮಾಡಿದ್ದಾರೆ.
"ಡಿ.ಜೆ ಹಳ್ಳಿ ಮತ್ತು ಕೆ.ಜಿ ಹಳ್ಳಿ ಘಟನೆ ಏನಿದೆಯೋ ಅದು, ಮಂಗಳೂರು ಠಾಣೆಯ ಮೇಲೆ ದಾಳಿ, ಮೈಸೂರಿನಲ್ಲಿ ತನ್ವೀರ್ ಸೇಠ್ ಮೇಲೆ ದಾಳಿ, ಪಾದರಾಯನಪುರ ಘಟನೆಯ ಮುಂದುವರಿದ ಭಾಗ ಇದು. ರಾಜ್ಯದಲ್ಲಿ ಮುಸಲ್ಮಾನರು ಹೆಚ್ಚಿರುವ ಸ್ಥಳದಲ್ಲಿ SDPI, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಮಾಜದ ಮೇಲೆ ಹಿಡಿತ ಸಾಧಿಸಲು ಹಿಂದೂಗಳ ಮೇಲೆ ದಾಳಿ ಮಾಡುತ್ತಿವೆ"ಎಂದು ಶೋಭಾ ಆರೋಪಿಸಿದ್ದಾರೆ.
ಎಸ್ಡಿಪಿಐ ಕಾರ್ಯದರ್ಶಿ ಬಂಧನ: ಗೃಹ ಸಚಿವ ಬೊಮ್ಮಾಯಿ
"ಸಾರ್ವಜನಿಕ ಆಸ್ತಿಪಾಸ್ತಿಗೆ ತೊಂದರೆ ಮಾಡಿದವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು. ದಯಮಾಡಿ, ಇಂತಹ ದುಷ್ಟರನ್ನು ಸುಮ್ಮನೆ ಬಿಡಬೇಡಿ. ಸರಕಾರ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಂಡು, ಇಂತಹ ಪುಂಡರಿಗೆ ಪಾಠವಾಗುವಂತಹ ಕ್ರಮ ತೆಗೆದುಕೊಳ್ಳಿ"ಎಂದು ಶೋಭಾ ಕರಂದ್ಲಾಜೆ ಸರಕಾರವನ್ನು ಒತ್ತಾಯಿಸಿದ್ದಾರೆ.