ವಿಕ್ರಂ ಇನ್ವೆಸ್ಟ್ಮೆಂಟ್ ವಂಚನೆ ಪ್ರಕರಣ ಸಿಐಡಿಗೆ ವಹಿಸುವ ಸಾಧ್ಯತೆ
ಬೆಂಗಳೂರು, ಮಾರ್ಚ್ 16: ರಾಹುಲ್ ದ್ರಾವಿಡ್, ದೀಪಿಕಾ ಪಡುಕೋಣೆ ಅಂತಹಾ ಸೆಲೆಬ್ರಿಟಿಗಳಿಗೆ ಪಂಗನಾಮ ಹಾಕಿರುವ ವಿಕ್ರಂ ಇನ್ವೆಸ್ಟ್ಮೆಂಟ್ ಸಂಸ್ಥೆಯ ವಂಚನೆ ಪ್ರಕರಣವನ್ನು ಸಿಐಡಿಯ ಕಂದಾಯ ಇಲಾಖೆ ವಿಭಾಗ ತನಿಖೆ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಈಗಾಗಲೇ ಸಿಐಡಿಯ ಹಣಕಾಸು ತನಿಖಾ ವಿಭಾಗ ಈ ಪ್ರಕರಣದ ಬಗ್ಗೆ ಬನಶಂಕರಿ ಪೊಲೀಸರ ಬಳಿ ಮಾಹಿತಿ ಕಲೆ ಹಾಕುತ್ತಿದ್ದು, ಇಂದು ಅಥವಾ ನಾಳೆ ಪ್ರಕರಣವನ್ನು ಅಧಿಕೃತವಾಗಿ ಸಿಐಡಿ ವಹಿಸಿಕೊಳ್ಳಲಿದೆ ಎನ್ನಲಾಗಿದೆ.
ದ್ರಾವಿಡ್, ಪಡುಕೋಣೆಯನ್ನು ವಂಚಿಸಿದ್ದ ಐವರು ಪೊಲೀಸರ ಅತಿಥಿ
ರಾಘವೇಂದ್ರ ಶ್ರೀನಾಥ್ 2003ರಲ್ಲಿ ನಗರದಲ್ಲಿ ವಿಕ್ರಂ ಇನ್ವೆಸ್ಟ್ಮೆಂಟ್ ಎಂಬ ಸಂಸ್ಥೆ ಸ್ಥಾಪಿಸಿ ರಾಹುಲ್ ದ್ರಾವಿಡ್, ನಟಿ ದೀಪಿಕಾ ಪಡುಕೋಣೆ ಸೇರಿದಂತೆ ಇನ್ನೂ ಹಲವು ಸಿನಿಮಾ ತಾರೆಯರು, ವೈದ್ಯರು ಇನ್ನೂ ಹಲವು ಖ್ಯಾತ ನಾಮರಿಂದ ಕೋಟ್ಯಾಂತರ ಹಣ ವಸೂಲಿ ಮಾಡಿದ್ದ.
ಹೂಡಿಕೆ ಹಣಕ್ಕೆ ಲಾಭಾಂಶ ನೀಡುತ್ತಿರಲಿಲ್ಲವೆಂದು ಇತ್ತೀಚೆಗೆ ಬನಶಂಕರಿ ಠಾಣೆಯಲ್ಲಿ ಕೇಸು ದಾಖಲಾಗಿತ್ತು. ಈ ಸಂಬಂಧ ಪ್ರಕರಣ ಸಂಬಂಧ ರಾಘವೇಂದ್ರ ಶ್ರೀನಾಥ್ ಮತ್ತು ಆತನ ಸಹಚರರಾದ ನರಸಿಂಹ ಮೂರ್ತಿ(50), ಪ್ರಹ್ಲಾದ್ (48), ನಾಗರಾಜ್ (47) ಮತ್ತು ಸುರೇಶ್ (48) ಅವರನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ 1776 ಕ್ಕೂ ಹೆಚ್ಚು ಜನರಿಂದ 300 ಕೋಟಿಗೂ ಅಧಿಕ ಹಣವನ್ನು ಹೂಡಿಕೆ ಮಾಡಿಕೊಂಡಿದ್ದು ತಿಳಿದು ಬಂದಿತ್ತು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಬಂಧನದ ನಂತರ ವಿಕ್ರಂ ಇನ್ವೆಸ್ಟ್ಮೆಂಟ್ ಸಂಸ್ಥೆ ವಿರುದ್ಧ ಮೈಕೋ ಲೇಔಟ್ ಪೊಲೀಸ್ ಠಾಣೆ, ಜಯನಗರ ಸೇರಿ ನಗರದ ವಿವಿಧ ಠಾಣೆಗಳಲ್ಲಿ 250 ಕ್ಕೂ ಹೆಚ್ಚು ದೂರು ದಾಖಲಾಗಿವೆ. ದೊಡ್ಡ ಆರ್ಥಿಕ ಅಪರಾಧ ಇದಾಗಿರುವ ಕಾರಣ ಪ್ರಕರಣವನ್ನು ಸಿಐಡಿಯ ಹಣಕಾಸು ವಿಭಾಗ ವಹಿಸಿಕೊಳ್ಳುವ ಸಾದ್ಯತೆ ಇದೆ.